20 ಕಾಡಾನೆಗಳನ್ನು ಕಾಡಿಗೆ ಅಟ್ಟಿ ರೈತರ ಮೆಚ್ಚುಗೆ ಗಳಿಸಿದ ಆರ್.ಎಫ್.ಓ
ಚಾಮರಾಜನಗರ, ಜನವರಿ 23: ಹಿಂಡು ಹಿಂಡಾಗಿ ಅರಣ್ಯ ಪ್ರದೇಶದಿಂದ ನಾಡಿನತ್ತ ಬರುವ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡುತ್ತಿದ್ದು ಅದು ಸುಲಭದ ಕೆಲಸವೇನಲ್ಲ. ಆದರೂ ಮೂರು ದಿನ ಕಾರ್ಯಾಚರಣೆ ನಡೆಸಿ ಇಪ್ಪತ್ತು ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವ ಮೂಲಕ ಓಂಕಾರ ವಲಯದ ಆರ್.ಎಫ್.ಓ ನವೀನ್ ಕುಮಾರ್ ರೈತರ ಮೆಚ್ಚುಗೆಯನ್ನು ಗಳಿಸಿ ಗಮನಸೆಳೆದಿದ್ದಾರೆ.
ಓಂಕಾರ್ ಅರಣ್ಯ ವಲಯದ ನುಗು ಮತ್ತು ಚಿಕ್ಕದೇವಮ್ಮನಬೆಟ್ಟದಿಂದ ಬಂದ ಕಾಡಾನೆಗಳ ಹಿಂಡು ಬೋಳೆಗೌಡನಕಟ್ಟೆಯಲ್ಲಿ ಬೀಡುಬಿಟ್ಟು ರೈತರ ಜಮೀನಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದವು.

ಈ ವೇಳೆ ಆರ್.ಎಫ್.ಓ ನವೀನಕುಮಾರ್ ಸಿಬ್ಬಂದಿಗಳೊಂದಿಗೆ ಸೇರಿ ಕಾರ್ಯಾಚರಣೆಗೆ ಮುಂದಾದರು. ಕಾಡಾನೆಗಳು ಬಂದಿದ್ದ ಪ್ರದೇಶವಾದ ಬೋಳೆಗೌಡನಕಟ್ಟೆಯು ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡಲಿದ್ದು, ಯಾವುದೇ ಟ್ರಂಚ್ ಗಳಾಗಲಿ, ರೈಲ್ವೆ ಕಂಬಿಯಾಗಲಿ ಅಳವಡಿಸದಿದ್ದರಿಂದ ರೈತರ ಜಮೀನುಗಳಿಗೆ ದಾಳಿಯಿಡುವ ಸಂಭವವನ್ನು ಅರಿತು ಕಾಡಾನೆಗಳು ಹಗಲಿನಲ್ಲಿ ಒಂದೆಡೆ ಇರುವಂತೆ ಮಾಡಿ. ರಾತ್ರಿ ಸಮಯದಲ್ಲಿ ಕಾಡಿಗೆ ಅಟ್ಟುವ ಕಾರ್ಯಾಚರಣೆ ಕೈಗೊಂಡರು.

ಓಂಕಾರ್ ಅರಣ್ಯ ವಲಯದಲ್ಲಿ ಅಳವಡಿಸಲಾಗಿದ್ದ ರೈಲ್ವೆ ಕಂಬಿಗಳನ್ನು ತೆಗೆದು ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯಾಚರಣೆಗೆ ಸಿಬ್ಬಂದಿ ಹಾಗೂ 20 ಮಂದಿ ರೈತರು ಕೈ ಜೋಡಿಸಿದ್ದರು.












Click it and Unblock the Notifications