ಮಾಂಬಳ್ಳಿಯಲ್ಲಿ ಹೊಳೆಯಲ್ಲಿ ಹೆಣ ಹೊತ್ತು ಸಾಗುವ ಜನ
ಚಾಮರಾಜನಗರ, ಡಿಸೆಂಬರ್ 07 : ರುದ್ರಭೂಮಿಯಿಲ್ಲದ ಕಾರಣ ಹೆಣಹೊತ್ತು ನದಿ ನೀರಲ್ಲೇ ದಾಟಿ ಗೋಮಾಳದಲ್ಲಿ ಅಂತ್ಯಕ್ರಿಯೆ ನಡೆಸಬೇಕಾದ ಅನಿವಾರ್ಯತೆ ಕೊಳ್ಳೇಗಾಲ ತಾಲೂಕಿನ ಮಾಂಬಳ್ಳಿ ಗ್ರಾಮದ ಜನರಿಗೆ ಬಂದೊದಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಾಂಬಳ್ಳಿಯಲ್ಲಿ ಸುವರ್ಣಾನದಿ ಹರಿಯುತ್ತಿದ್ದು, ಗ್ರಾಮದಲ್ಲಿ ಸುಸಜ್ಜಿತ ಸ್ಮಶಾನವಿಲ್ಲದ ಕಾರಣದಿಂದಾಗಿ ನದಿ ಬದಿಯ ಗೋಮಾಳದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದ್ದು, ಈ ಬಾರಿ ನದಿ ತುಂಬಿ ಹರಿಯುತ್ತಿರುವ ಕಾರಣ ನದಿ ನೀರಲ್ಲೇ ಹೆಣ ಹೊತ್ತು ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ನದಿ ದಾಟಲು ಸೇತುವೆ ಇಲ್ಲದ ಕಾರಣ ಬಿದಿರು ಬೊಂಬುಗಳನ್ನು ಹಾಕಿ ಕಾಲು ಸೇತುವೆ ನಿರ್ಮಿಸಲಾಗಿದೆಯಾದರೂ ಅದರಲ್ಲಿ ಹೆಣಹೊತ್ತು ಸಾಗಲು ಸಾಧ್ಯವಾಗದ ಕಾರಣ ನೀರಿಗಿಳಿದು ಸಾಗಬೇಕಾಗಿದೆ. ಈ ವೇಳೆ ತಮ್ಮ ಪ್ರಾಣದ ಹಂಗು ತೊರೆದು ಹೆಣವನ್ನು ನದಿ ದಾಟಿಸಬೇಕಾಗುತ್ತದೆ.
ಹಾಗೆನೋಡಿದರೆ ಕೊಳ್ಳೇಗಾಲ ಪಟ್ಟಣದಿಂದ ಕೇವಲ 6 ಕಿ.ಮೀ ಅಂತರದಲ್ಲಿರುವ ಮಾಂಬಳ್ಳಿ ಗ್ರಾಮ ಕೊಳ್ಳೇಗಾಲ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಎಸ್.ಜಯಣ್ಣರ ಸ್ವಗ್ರಾಮವಾಗಿದ್ದು, ಅಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಮುಸ್ಲಿಂ, ಕ್ರೈಸ್ತರು, ಲಿಂಗಾಯಿತರು, ದಲಿತರ, ನಾಯಕರು, ಕುರುಬರು, ಕುಂಬಾರರು. ಬ್ರಾಹ್ಮಣರು, ಈಡಿಗರು, ಒಕ್ಕಲಿಗಗೌಡರು ಹೀಗೆ ಎಲ್ಲ ಜಾತಿಯ ಜನರು ಇಲ್ಲಿದ್ದಾರೆ ಆದರೆ ಸತ್ತರೆ ಅಂತ್ಯ ಸಂಸ್ಕಾರ ಮಾಡಲು ಸ್ಮಶಾನವೇ ಇಲ್ಲವಾಗಿದೆ.
ಹೀಗಾಗಿ ಯಾರಾದರು ಸತ್ತರೆ ಗ್ರಾಮದ ಹೊರವಲಯದಲ್ಲಿ 3ಕಿ.ಮೀ. ಅಂತರದಲ್ಲಿರುವ ಸರ್ಕಾರದ ಗೋಮಾಳ ಜಾಗದಲ್ಲೇ ಶವ ಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದೆ. ಅಲ್ಲಿಗೆ ಹೋಗಬೇಕಾದರೆ ಜನರು ಗೋಮಾಳ ಹಾಗೂ ಖಾಸಗಿ ಜಮೀನಿನ ಮಧೆsÀ್ಯ ಹರಿಯುವ ಸುವರ್ಣಾವತಿ ಹೊನ್ನಹೊಳೆ ದಾಟಿ ಹೋಗಬೇಕಾಗುತ್ತದೆ. ಈ ಸಂದರ್ಭ ಸ್ವಲ್ಪ ಎಚ್ಚರ ತಪ್ಪಿದರೂ ಹೆಣಸಹಿತ ಜನ ನೀರುಪಾಲಾಗುವ ಅಪಾಯವೂ ಇಲ್ಲದಿಲ್ಲ.
ಆಡಳಿತರೂಢರು ಇದುವರೆಗೆ ಇಲ್ಲಿನ ಜನರಿಗೆ ಅನುಕೂಲವಾಗುವಂತೆ ಸ್ಮಶಾನ ನಿರ್ಮಿಸಲು ಮುಂದಾಗಿಲ್ಲ. ಹೋಗಲಿ ಹೊಳೆಗೆ ಅಡ್ಡಲಾಗಿ ಸೇತುವೆ ಕಟ್ಟಲು ಕೂಡ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಇಲ್ಲಿನ ಜನ ತೊಂದರೆ ಪಡುವುದು ಮಾತ್ರ ತಪ್ಪಿಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications