ಗುಂಡ್ಲುಪೇಟೆ ಬಳಿ ಭೀಕರ ಅಪಘಾತ: ಟಿಪ್ಪರ್ ಹರಿದು ಪತಿ-ಪತ್ನಿ, 2 ವರ್ಷದ ಮಗು ಸಾವು
ಚಾಮರಾಜನಗರ, ಸೆಪ್ಟೆಂಬರ್, 18: ಟಿಪ್ಪರ್ ಲಾರಿ ಹರಿದು ಕೇರಳ ಮೂಲದ ಮೂವರು ದುರ್ಮರಣ ಹೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಸುಲ್ತಾನ್ ಬತ್ತೇರಿ ತಾಲೂಕಿನ ಮಲವಾಯಿಲ್ ಗ್ರಾಮದವರಾದ ಧನೇಶ್ಮೋಹನ್(29) ಪತ್ನಿ ಅಂಜು(24) ಮತ್ತು ಮಗು ವಿಚ್ಚು(2) ಮೃತರು.
ಕೇರಳ ಮೂಲದ ಪತಿ, ಪತ್ನಿ ಮತ್ತು ಮಗ ಮೂವರು ಒಂದೇ ಬೈಕ್ನಲ್ಲಿ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬೈಕ್ನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೂತನೂರು ಗುಡ್ಡದಿಂದ ಕಲ್ಲು ತುಂಬಿಕೊಂಡು ಬರುತ್ತಿದ್ದ ಕೆಎ-11-ಬಿ-8497 ನೋಂದಣಿಯ ಟಿಪ್ಪರ್ ಲಾರಿಯು ಮುಂಬದಿ ಹೋಗುತ್ತಿದ್ದ ಕೇರಳ ಮೂಲದ ಬೈಕ್ಗೆ ಗುದ್ದಿದ್ದಾನೆ. ಬಳಿಕ ಬೈಕ್ ಸವಾರನ ಮೇಲೆ ಲಾರಿ ಹರಿದು ದೇಹ ರಸ್ತೆಯಲ್ಲೇ ಬಿದ್ದಿದ್ದು, ಇನ್ನಿಬ್ಬರು ಲಾರಿ ಅಡಿಯಲ್ಲಿ ಬೈಕ್ ಸಮೇತ ಸಿಲುಕಿಕೊಂಡು 300 ಮೀಟರ್ನಷ್ಟು ದೂರಕ್ಕೆ ಎಳೆದುಕೊಂಡು ಬಂದಿದೆ.
ಇನ್ನು ಚಾಲಕ ಟಿಪ್ಪರ್ ಅನ್ನು ಕುಡಿದ ಮತ್ತಿನಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ಎನ್ನಲಾಗಿದೆ. ಭಾರ ಹೊತ್ತ ವಾಹನ ಸಾಗುವಾಗ ಅಜಾರೂಕ ಚಾಲನೆ ಮಾಡಿದ್ದಾನೆ. ಬೈಕ್ಗೆ ಡಿಕ್ಕಿಯಾದ ನಂತರವೂ ಟಿಪ್ಪರ್ ಅನ್ನು ನಿಯಂತ್ರಿಸದ ಕಾರಣ 300 ಮೀಟರ್ ದೂರದವರೆಗೆ ಮೃತದೇಹಗಳನ್ನು ಟಿಪ್ಪರ್ ಎಳೆದೋಯ್ದಿದೆ ಎಂದು ಪ್ರತ್ಯೇಕ್ಷದರ್ಶಿಗಳು ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳ ಮಹಜರು ನಡೆಸಿ ಟಿಪ್ಪರ್ ಮತ್ತು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಮಾಹಿತಿ ನೀಡಿದ ಹಿನ್ನೆಲೆ ಮೃತರ ವಾರಸುದಾರರು ಆಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಅವರ ವಶಕ್ಕೆ ನೀಡಲಾಗುತ್ತದೆ. ಘಟನೆ ಸಂಬಂಧ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಗುಂಡ್ಲುಪೇಟೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೈಕ್ ಸವಾರ ಸಾವು: ಮಹೀಂದ್ರಾ ಬೊಲೆರೊ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗಡಿಜಿಲ್ಲೆ ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ ಗ್ರಾಮದ ಸಮೀಪ ನಡೆದಿದೆ.
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ನಿವಾಸಿ ಪ್ರವೀಣ್(25) ಮೃತ ದುರ್ದೈವಿ. ಇವರಿಗೆ ಮದುವೆಯಾಗಿ ಒಂದೂವರೆ ವರ್ಷವಾಗಿದ್ದು, 2 ತಿಂಗಳ ಮಗು ಇದೆ ಎಂದು ತಿಳಿದುಬಂದಿದೆ. ಇನ್ನು ಅಪಘಾತ ಸ್ಥಳದಲ್ಲೇ ಮಗುವಿಗೆ ಕೊಂಡೊಯ್ತುತ್ತಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ತಮಿಳುನಾಡಿನಿಂದ ಬರುತ್ತಿದ್ದ ಬೊಲೆರೊ ವಾಹನ ಚಾಲಕ ಬೈಕ್ಗೆ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪ್ರವೀಣ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅಪಘಾತ ಆಗುತ್ತಿದ್ದಂತೆ ಪೊಲೀಸ್ ಹಾಗೂ ಆ್ಯಂಬುಲೆನ್ಸ್ ತಡವಾಗಿ ಬಂತೆಂದು ಹಾಗೂ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಪದೇ ಪದೇ ಅಪಘಾತ ಸಂಭವಿಸುತ್ತಿವೆ ಎಂದು ಆಕ್ರೋಶಗೊಂಡ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಯಾವುದೇ ಸೂಚನಾ ಫಲಕಗಳು, ರಸ್ತೆ ಡುಬ್ಬಗಳು, ಜೀಬ್ರಾ ಕ್ರಾಸ್ ಮಾಡಿಲ್ಲ. ವೇಗ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸರ ವಿರುದ್ಧ ಸ್ಥಳೀಯರು ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ತಮಿಳುನಾಡು ಹಾಗೂ ಕರ್ನಾಟಕ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಒಂದು ತಾಸಿನಿಂದ ವಾಹನ ಸಂಚಾರ ಬಂದ್ ಆಗಿದೆ.












Click it and Unblock the Notifications