ಹುಲಿ ಕಳೇಬರ ಪತ್ತೆ; ವಿಷವುಣಿಸಿ, ಉಗುರು- ಹಲ್ಲು ಹೊತ್ತೊಯ್ದರೆ?
ಚಾಮರಾಜನಗರ ಜಿಲ್ಲೆಯ ಗುಂಡ್ರೆ ಅರಣ್ಯ ವಲಯದಲ್ಲಿ ಹತ್ತು ವರ್ಷ ಪ್ರಾಯದ ಹುಲಿ ಕಳೇಬರ ಪತ್ತೆಯಾಗಿದೆ. ಆದರೆ ಹುಲಿಯ ಉಗುರು-ಹಲ್ಲುಗಳೇ ನಾಪತ್ತೆಯಾಗಿವೆ. ಮೇಲ್ನೋಟಕ್ಕೆ ವಿಷವುಣಿಸಿ ಕೊಂದಿರುವಂತೆ ಕಾಣುತ್ತಿದೆ.
ಚಾಮರಾಜನಗರ, ಡಿಸೆಂಬರ್ 21: ಬಂಡೀಪುರ ಹುಲಿ ಯೋಜನೆಯ ಗುಂಡ್ರೆ ವಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿದ್ದು, ಅದರ ಉಗುರು ಮತ್ತು ಹಲ್ಲುಗಳು ನಾಪತ್ತೆಯಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ ವಿಷ ನೀಡಿ ಕೊಂದಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ.
ಸತ್ತ ಗಂಡು ಹುಲಿ ಅಂದಾಜು 10 ವರ್ಷದಾಗಿದ್ದು, ಗುಂಡ್ರೆ ಅರಣ್ಯ ವಲಯದ ಹೊಸಹಳ್ಳಿ ಬಳಿಯಲ್ಲಿ ಅರಣ್ಯ ಸಿಬ್ಬಂದಿ ಬೀಟ್ ನಲ್ಲಿದ್ದಾಗ ದುರ್ವಾಸನೆ ಮೂಗಿಗೆ ಬಡಿದಿದೆ. ಆ ಕೂಡಲೇ ಅದರ ಜಾಡು ಅರಸಿ ಹೋದವರಿಗೆ ಕೊಳೆತ ಸ್ಥಿತಿಯಲ್ಲಿದ್ದ ಹುಲಿಯ ಕಳೇಬರ ಪತ್ತೆಯಾಗಿದೆ. ತಕ್ಷಣ ಅಧಿಕಾರಿಗಳ ಗಮನಕ್ಕೆ ತರಲಾಯಿತು.[ಎಚ್ಡಿ ಕೋಟೆಯಲ್ಲಿ ಸತ್ತ ಹುಲಿಮರಿಗಳ ಉಗುರು ಮಾಯ?]
ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಹೀರಾಲಾಲ್, ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್, ಪಶು ವೈದ್ಯ ನಾಗರಾಜು, ಹಿಮಗಿರಿ ವನ್ಯಜೀವಿ ಸಂಸ್ಥೆಯ ರಘುರಾಂ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆ ನಂತರ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನೆರವೇರಿಸಲಾಯಿತು.

ಹುಲಿಯು ಸಾವಿಗೀಡಾಗಿದ್ದ ಸ್ಥಳದ ಸಮೀಪ ಜಾನುವಾರಿನ ಕಳೇಬರ ಪತ್ತೆಯಾಗಿದ್ದು, ಇದನ್ನು ಹುಲಿಯು ಬಹುತೇಕ ತಿಂದು ಹಾಕಿರುವುದು ಕಂಡು ಬಂದಿದೆ. ಹೀಗಾಗಿ ಜಾನುವಾರುವಿನ ದೇಹಕ್ಕೆ ವಿಷ ಹಾಕಿ, ಅದನ್ನು ಹುಲಿ ತಿನ್ನುವಂತೆ ಮಾಡಿದ್ದಾರೆ. ಸತ್ತ ಬಳಿಕ ಅದರ ಉಗುರು, ಹಲ್ಲುಗಳನ್ನು ದುಷ್ಕರ್ಮಿಗಳು ಹೊತ್ತೊಯ್ದಿರಬಹುದಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.[ಬಂಡೀಪುರದಲ್ಲಿ ಹುಲಿ ಹತ್ಯೆ: ಒಬ್ಬನ ಬಂಧನ]
ಇದಕ್ಕೆ ಪುಷ್ಟಿ ನೀಡುವಂತೆ ಹುಲಿಯ 18 ಉಗುರು ಹಾಗೂ 4 ಹಲ್ಲುಗಳನ್ನು ತೆಗೆದಿರುವುದು ಗೋಚರಿಸಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹುಲಿಯ ಸಾವು ಸ್ವಾಭಾವಿಕವೇ ಅಥವಾ ವಿಷಪ್ರಾಶನದಿಂದ ಆಗಿದೆಯೇ ಎಂಬುದು ತಿಳಿಯಲಿದೆ.











Click it and Unblock the Notifications