ಸ್ಥಳೀಯರಿಗೆ 100% ಟಿಕೆಟ್: ಚಾಮರಾಜನಗರದಲ್ಲಿ ವಿಜಯೇಂದ್ರ ಅಪ್ತನಿಗೆ ವಿ.ಶ್ರೀನಿವಾಸಪ್ರಸಾದ್ ಪ್ರಸಾದ್ ಠಕ್ಕರ್
ಸ್ಥಳೀಯರಿಗೆ 100% ಟಿಕೆಟ್ ಸಿಗಲಿದೆ ಕಾದು ನೋಡಿ ಎಂದು ವಿ.ಶ್ರೀನಿವಾಸಪ್ರಸಾದ್ ಚಾಮರಾಜನಗರದಲ್ಲಿ ಭವಿಷ್ಯ ನುಡಿದರು.
ಚಾಮರಾಜನಗರ, ಫೆಬ್ರವರಿ, 23: ಮುಂಬರುವ ಚುನಾವಣೆಯಲ್ಲಿ ಸ್ಥಳೀಯರಿಗೆ ಹಾಗೂ ಸಮರ್ಥ ಅಭ್ಯರ್ಥಿಗೆ ಟಿಕೆಟ್ ಕೊಡಲಾಗುತ್ತದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಚಾಮರಾಜನಗರದಲ್ಲಿ ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ವಿಜಯೇಂದ್ರ ಆಪ್ತ ಕೆಆರ್ಐಡಿಎಲ್ ಅಧ್ಯಕ್ಷ ರುದ್ರೇಶ್ಗೆ ಠಕ್ಕರ್ ಕೊಟ್ಟಿದ್ದಾರೆ.
ಚಾಮರಾಜನಗರದಲ್ಲಿ ನಡೆದ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಭಾಗಿಯಾಗಿದ್ದು, ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಚಾಮರಾಜನಕ್ಕೆ ಬಂದು ಯಾರಾದರೂ ಓಡಾಡಲಿ, ಪ್ರಜಾಪ್ರಭುತ್ವದಲ್ಲಿ ಅದನ್ನು ತಡೆಯಲಾಗುವುದಿಲ್ಲ. ಈ ಬಗ್ಗೆ ಬಿ.ಎಲ್.ಸಂತೋಷ್ ಸ್ಪಷ್ಟವಾಗಿ ತಿಳಿಸಿದ್ದು, ನಮ್ಮ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟಿದ್ದಾರೆ. ಸ್ಥಳೀಯರಿಗೆ 100% ಟಿಕೆಟ್ ಸಿಗಲಿದೆ ಕಾದು ನೋಡಿ ಎಂದು ಭವಿಷ್ಯ ನುಡಿದರು.

ಹಾಲಿ ಶಾಸಕರಿಗೆ ಟಿಕೆಟ್
ಸಂಸದರು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಕೊಡಲಾಗುತ್ತದೆ ಎಂದರು. ಹೀಗೆ ಹೇಳುವ ಮೂಲಕ ಕೊಳ್ಳೇಗಾಲದಲ್ಲಿ ಶಾಸಕ ಎನ್.ಮಹೇಶ್ ಹಾಗೂ ಗುಂಡ್ಲುಪೇಟೆಗೆ ಸಿ.ಎಸ್.ನಿರಂಜನ ಕುಮಾರ್ ಹೆಸರು ಫೈನಲ್ ಆಗಿರುವ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟರು.
ಸಿದ್ದರಾಮಯ್ಯ ಪಲಾಯನವಾದಿ
ಸರ್ವೇ ಪ್ರಕಾರ ಕಾಂಗ್ರೆಸ್ 141 ಸ್ಥಾನಗಳನ್ನು ಗೆಲ್ಲಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸರ್ಕಾರದಲ್ಲಿದ್ದವರು ಸೋತು 141 ಸ್ಥಾನ ಎಂದು ಹೇಳುತ್ತಿರುವುದು ಕಾಂಗ್ರೆಸ್ನ ಆಶಾವಾದಿತನವಾಗಿದೆ. ಕ್ಷೇತ್ರದಿಂದ ಕ್ಷೇತ್ರಕ್ಕೆ ಪಲಾಯನ ಮಾಡುತ್ತಿರುವ ಸಿದ್ದರಾಮಯ್ಯ ಹಾಗೂ ಅವರ ಪಕ್ಷದವರು 141 ಸ್ಥಾನ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಇನ್ನು ನಾವು ಸರ್ಕಾರದಲ್ಲಿರುವವರು ಎಷ್ಟು ಧೈರ್ಯದಿಂದ, ಆತ್ಮವಿಶ್ವಾಸದಿಂದ ಹೇಳಬಹುದು. ನಮಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದರು.

ಕಾಡಾ ಅಧ್ಯಕ್ಷರ ಆಕ್ರೋಶ
ಇನ್ನು ಕಾಡಾ ಅಧ್ಯಕ್ಷ ಹಾಗೂ ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ನಿಜಗುಣರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರು ಸ್ಥಳೀಯರಿಗೆ ಟಿಕೆಟ್ ಎಂದು ಹೇಳಿದ್ದಾರೆ. ಕಾಸು ಇದ್ದವರು ಬಂದು ಇಲ್ಲಿ ನಾಟಕ ಮಾಡಿಸಬಹುದು, ಹಣ ಕೊಡಬಹುದು ಎಂದು ರುದ್ರೇಶ್ ವಿರುದ್ಧ ಆಕ್ರೋಶ ಹೊರಹಾಕಿದರು.
ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರಿಗೆ ರುದ್ರೇಶ್ ಓಡಾಡುತ್ತಿರುವ ಬಗ್ಗೆ ಗಮನಕ್ಕೆ ತಂದ ವೇಳೆ ನಾವು ಯಾರನ್ನೂ ಕಳುಹಿಸಿಲ್ಲ. ತಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಸುಮ್ಮನೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಹೆಸರು ದುರ್ಬಳಕೆ ಆಗುತ್ತಿದೆ ಎಂದರು.
ವಿಜಯೇಂದ್ರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರುದ್ರೇಶ್ ಕಳೆದ 6-7 ತಿಂಗಳುಗಳಿಂದ ಚಾಮರಾಜನಗರದಲ್ಲಿ ಓಡಾಡುತ್ತಿದ್ದು ತಾವು ಕೂಡ ಟಿಕೆಟ್ ಆಕಾಂಕ್ಷಿ ಎಂದು ಸ್ಪಷ್ಟಪಡಿಸಿದ್ದಾರೆ. ಚಾಮರಾಜನಗರದಲ್ಲಿ ಸುಸಜ್ಜಿತ ಮನೆ ಹಾಗೂ ಕಚೇರಿಯನ್ನು ತೆರೆದು ತಮ್ಮದೇ ಅನುಯಾಯಿಗಳ ಮೂಲಕ ಓಡಾಡುತ್ತಿದ್ದಾರೆ.
ಒಟ್ಟಿನಲ್ಲಿ ಚುನಾವಣಾ ಸಮಯ ಹತ್ತಿರವಾಗುತ್ತಿದ್ದು, ಟಿಕೆಟ್ ಆಕಾಂಕ್ಷಿಗಳ ಹಗ್ಗಜಗ್ಗಾಟ, ಬೇರೆ ಪಕ್ಷಗಳೊಂದಿಗೆ ಸಂಪರ್ಕ, ಓಡಾಟ ಜೋರಾಗಿದೆ.












Click it and Unblock the Notifications