ಗುಂಡ್ಲುಪೇಟೆಯಲ್ಲಿ ಉಗ್ರರ ವಾಸ್ತವ್ಯದ ವರದಿ ಮಾಡಿದ ಪತ್ರಕರ್ತರಿಗೆ ಧಮ್ಕಿ
ಚಾಮರಾಜನಗರ, ಜನವರಿ 19: ಚಾಮರಾಜನಗರದ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಉಗ್ರರು ವಾಸ್ತವ್ಯ ಹೂಡಿದ್ದರು ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ಈ ಕುರಿತು ಹಲವು ವಿಚಾರಗಳೂ ಬಯಲಾಗುತ್ತಾ ಹೋಗಿ, ಅದನ್ನು ಮಾಧ್ಯಮಗಳು ಹೊರಗೆಡವಿದ್ದವು. ಆದರೆ ಇದೀಗ ವರದಿ ಮಾಡಿದ ಮಾಧ್ಯಮಗಳ ಮೇಲೆ ಪೊಲೀಸರು ಧಮಕಿ ಹಾಕುತ್ತಿರುವುದು ಬೆಳಕಿಗೆ ಬಂದಿದೆ.
ತಾಲೂಕಿನಲ್ಲಿ ಉಗ್ರರ ಕರಿ ನೆರಳಿನ ಕುರಿತಂತೆ ಸುದ್ದಿ ಮಾಡಿದ ಮಾಧ್ಯಮಗಳ ಮೇಲೆ ಸ್ಥಳೀಯ ಪಿಎಸ್ ಐ ಒಬ್ಬರು, ಪತ್ರಕರ್ತರು ಪೊಲೀಸ್ ಠಾಣೆಗೆ ಹೋಗುವಂತೆಯೂ, ಪೊಲೀಸರ ಪರ ಸುದ್ದಿ ಬರೆಯುವಂತೆಯೂ, ಬೇಕಾಬಿಟ್ಟಿ ಸುದ್ದಿ ಮಾಡದಂತೆ ಧಮಕಿ ಹಾಕಿದ್ದು, ಈ ಸಂಬಂಧ ಪತ್ರಕರ್ತರೊಬ್ಬರು ಎಸ್ಪಿಗೆ ದೂರು ನೀಡಿದ್ದಾರೆ. ಕಳೆದ ವಾರವಷ್ಟೆ ಗುಂಡ್ಲುಪೇಟೆಯಲ್ಲಿ ಉಗ್ರರಿಗೆ ಆಶ್ರಯ ನೀಡಿದ್ದ ಆರೋಪದಡಿ ಮೌಲ್ವಿ ಸದಖತ್ ಉಲ್ಲಾ ಹಾಗೂ ಅಯೂಬ್ ಖಾನ್ ಎಂಬಿಬ್ಬರನ್ನು ಆಂತರಿಕ ಭದ್ರತೆ ಹಾಗೂ ಸಿಸಿಬಿ ಪೊಲೀಸರು ಬಂಧಿಸಿ ತನಿಖೆ ಚುರುಕುಗೊಳಿಸಿದ್ದರು.
ತನಿಖೆ ವೇಳೆ ಉಗ್ರರ ತರಬೇತಿಗಾಗಿ ಜಮೀನು ಖರೀದಿಗೆ ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟರ ಸಂಪರ್ಕ ಸಾಧಿಸಲು ಯತ್ನಿಸಿದ್ದರು ಎಂಬ ವಿಚಾರ ಬಹಿರಂಗಗೊಂಡಿತ್ತು. ಕರ್ನಾಟಕದ ಗಡಿ ಭಾಗವಾದ ಗುಂಡ್ಲುಪೇಟೆಯ ಮೂಲೆಹೊಳೆ ಹಾಗೂ ಕೆಕ್ಕನಹಳ್ಳ ಗಡಿಭಾಗದಲ್ಲಿ ಹಲವು ವರ್ಷಗಳಿಂದ ಪೊಲೀಸರ ಸರ್ಪಗಾವಲಿಲ್ಲ. ಹಾಗಾಗಿ ಇಲ್ಲಿ ಉಗ್ರರು ಬಂದು ನುಸುಳಿದರೂ ಪೊಲೀಸರಿಗೆ ತಿಳಿಯಲ್ಲ. ಹೀಗಿದ್ದಾಗ ಈ ಜಾಗದಲ್ಲಿ ಪೊಲೀಸರನ್ನು ಏಕೆ ನಿಯೋಜಿಸಿಲ್ಲ ಎಂಬ ಅನುಮಾನವನ್ನು ಹುಟ್ಟುಹಾಕಿತ್ತು.

ಮದ್ದೂರು ಅರಣ್ಯ ಭಾಗದಲ್ಲಿ ಪೊಲೀಸರ ತಪಾಸಣಾ ಕೇಂದ್ರವಿದೆ. ಆದರೆ ಇದು ಮೂಲೆಹೊಳೆ ಗಡಿ ಭಾಗದಿಂದ ಸುಮಾರು 20 ಕಿ.ಮೀ ದೂರದಲ್ಲಿರುವುದರಿಂದ ಯಾವುದೇ ಕೃತ್ಯ ನಡೆದರೂ ತಕ್ಷಣ ಕ್ರಮಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗಡಿಭಾಗದಲ್ಲಿ ಪೊಲೀಸ್ ಭದ್ರತಾ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಮೂಲಕ ಆಗ್ರಹಿಸಲಾಗಿತ್ತು. ಆದರೆ ಇದೀಗ ಪೊಲೀಸರು ಪತ್ರಕರ್ತರ ಮೇಲೆ ಉದ್ದೇಶಪೂರ್ವಕವಾಗಿ ಧಮಕಿ ಹಾಕುತ್ತಿರುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂಬ ಆರೋಪವಾಗಿದೆ.












Click it and Unblock the Notifications