ಚಾಮರಾಜನಗರ: ಟಾಟಾ ಏಸ್ ಪಲ್ಟಿ, 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಚಾಮರಾಜನಗರ, ಜುಲೈ, 17: ಚಾಲಕನ ಅಜಾಗರುಕತೆಯಿಂದ ಟಾಟಾ ಏಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗೊಂಡ ಘಟನೆ ಶಿವಪುರ-ಹುಂಡಿಮನೆ ಮಾರ್ಗದ ಮಧ್ಯೆ ಸೋಮವಾರ (ಜುಲೈ 17) ನಡೆದಿದೆ.
ಭೀಮನ ಅಮಾವಾಸ್ಯೆ ಹಿನ್ನೆಲೆ ಗುಡ್ಲುಪೇಟೆ ಅಂಕಹಳ್ಳಿ ಗ್ರಾಮದಿಂದ ಅಣ್ಣೂರುಕೇರಿ ಮಹಾದೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದ ವೇಳೆ ಟಾಟಾ ಏಸ್ ಪಲ್ಟಿಯಾಗಿದೆ. ಈ ವೇಳೆ ಟಾಟಾ ಎಸ್ನಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಹಲವರಿಗೆ ಕೈ ಕಾಲು ಮುರಿತ, ತಲೆಗೆ ಗಾಯ, ಪುಟ್ಟ ಮಕ್ಕಳಿಗೂ ಪೆಟ್ಟು ಬಿದ್ದಿದ್ದು, ಗಾಯಾಳುಗಳಿಗೆ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ 15ಕ್ಕೂ ಹೆಚ್ಚು ಮಂದಿಯನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ
ಮತ್ತೊಂದೆಡೆ ಇತ್ತೀಚೆಗಷ್ಟೇ ಬೆಳ್ಳಂಬೆಳಗ್ಗೆ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ನೆಲ್ಲಿಗುಡ್ಡ ಕೆರೆ ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದಿತ್ತು. ಮೈಸೂರಿನಿಂದ ಬೆಂಗಳೂರು ಕಡೆಗೆ ಹೊರಟಿದ್ದ ಲಾರಿ, ಕೆಎಸ್ಆರ್ಟಿಸಿ ಬಸ್, ಕಾರು ಒಂದಕ್ಕೊಂದು ಗುದ್ದಿಕೊಂಡಿವೆ. ಪರಿಣಾಮ ಮೂರು ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಈ ಸರಣಿ ಅಪಘಾತ ಪ್ರಕರಣ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಬೈಕ್ ಹಾಗೂ ಸರ್ಕಾರಿ ಬಸ್ ನಡುವೆ ಅಪಘಾತ
ಹಾಗೆಯೇ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳ ಬೈಕ್ ಹಾಗೂ ಸರ್ಕಾರಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳದಲೇ ಮೃತಪಟ್ಟು, ಮತ್ತೋರ್ವ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಹಾಗೂ ಮಾಗಡಿ ಹೆದ್ದಾರಿಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ಐಟಿಐ ವಿದ್ಯಾರ್ಥಿಗಳಾದ ದರ್ಶನ್ ಹಾಗೂ ಭರತ್ ಪರೀಕ್ಷೆ ಬರೆಯಲು ಹಾರೋಹಳ್ಳಿಯಿಂದ ಬೈಕ್ನಲ್ಲಿ ಮಾಗಡಿಗೆ ತೆರಳುವ ಸಮಯದಲ್ಲಿ ಮಾಗಡಿ ಸಮೀಪದ ಜೋಡುಗಟ್ಟೆ ಕ್ರಾಸ್ ಬಳಿ ಮಾಗಡಿಯಿಂದ ರಾಮನಗರ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿಯಾಗಿತ್ತು.












Click it and Unblock the Notifications