ಕಿರುಕುಳಕ್ಕೆ ಬೇಸತ್ತು ಗ್ರಾ.ಪಂ. ಅಧ್ಯಕ್ಷೆ ಆತ್ಮಹತ್ಯೆಗೆ ಯತ್ನ
ಚಾಮರಾಜನಗರ, ಆಗಸ್ಟ್ 30: ಗ್ರಾ.ಪಂ. ಅಧ್ಯಕ್ಷರು, ಸದಸ್ಯರ ಕಿರುಕುಳದಿಂದ ಪಿಡಿಒಗಳು ಆತ್ಮಹತ್ಯೆಗೆ ಯತ್ನಿಸುತ್ತಿರುವ ಸುದ್ದಿ ಅಲ್ಲಲ್ಲಿ ಕೇಳಿಬರುತ್ತಿರುವ ಬೆನ್ನಲ್ಲೇ ಸದಸ್ಯರ ಕಿರುಕುಳ- ಬೆದರಿಕೆಯಿಂದ ಬೇಸತ್ತು, ಗ್ರಾ.ಪಂ ಅಧ್ಯಕ್ಷೆಯೊಬ್ಬರು ನಿದ್ರೆ ಮಾತ್ರೆ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಕೋಟೆಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ರಾಣಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು. ಕೋಟೆಕೆರೆ ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆಯಾದ ಬಳಿಕ ಸದಸ್ಯರಾದ ಕೋಟೆಕೆರೆ ರಾಘವೇಂದ್ರ ಮತ್ತು ಕುರುಬರಹುಂಡಿ ಗೌರಮ್ಮ ಎಂಬುವರ ಪುತ್ರ ಮಾದಪ್ಪ ಸತತವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ.[ಆತ್ಮಹತ್ಯೆಗೆ ಯತ್ನಿಸಿದವನು ಬದುಕಿದ, ಅಕೆ ಸತ್ತುಹೋದಳು]

ಇದರಿಂದ ಮನನೊಂದು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ 340ಕ್ಕೂ ಹೆಚ್ಚು ಶೌಚಾಲಯ ಕಾಮಗಾರಿ ನಡೆಸಿದ್ದು, ಕಾಮಗಾರಿ ನಡೆದಿಲ್ಲ. ಹಣ ಗುಳುಂ ಮಾಡಿದ್ದೀರಾ ಎಂದು ನಿತ್ಯ ಬೆದರಿಕೆ ಹಾಕಿ, ಮಾನಸಿಕ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎಂದು ದೂರಲಾಗಿದೆ.[ಕಲಘಟಗಿ ಅತ್ಯಾಚಾರ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ]
ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸಂಚು ರೂಪಿಸಿ, ಇಲ್ಲಸಲ್ಲದ ಆರೋಪ ಹೊರಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಣಿ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications