ಚಾಮರಾಜನಗರ : ಶುಕ್ರವಾರದ ದುರಂತ, ಪ್ರಸಾದ ಸೇವಿಸಿ 11 ಸಾವು
Recommended Video

ಚಾಮರಾಜನಗರ, ಡಿಸೆಂಬರ್ 14 : ಕರ್ನಾಟಕದ ಪಾಲಿಗೆ ಈ ಶುಕ್ರವಾರ ಶುಭ ತಂದಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ದೇವಾಲಯದ ಪ್ರಸಾದ ಸೇವಿಸಿ 11 ಜನರು ಮೃತಪಟ್ಟಿದ್ದಾರೆ. 60ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಮಧ್ಯಾಹ್ನ ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ 60 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ. ಮೈಸೂರು, ಕೊಳ್ಳೆಗಾಲ, ಚಾಮರಾಜನಗರದ ವಿವಿಧ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೀಟನಾಶಕ ಮಿಶ್ರಣ ಮಾಡಿದ ಪ್ರಸಾದ ಸೇವಿಸಿದ 11 ಜನರು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರಲ್ಲಿ 20ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ. ಬಿಸಾಡಿದ ಪ್ರಸಾದ ತಿಂದ 60 ಕ್ಕೂ ಹೆಚ್ಚು ಕಾಗೆ ಸೇರಿದಂತೆ ವಿವಿಧ ಪಕ್ಷಗಳು ಸಹ ದೇವಾಲಯದ ಸುತ್ತ ಸತ್ತು ಬಿದ್ದಿವೆ.
ಕರ್ನಾಟಕ ಸರ್ಕಾರ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಅಸ್ವಸ್ಥಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ, ಜನರ ಆರೋಗ್ಯ ವಿಚಾರಿಸಿದ್ದಾರೆ.

ಗೋಪುರ ನಿರ್ಮಾಣದ ಶಿಲಾನ್ಯಾಸ
ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಗೋಪುರ ನಿರ್ಮಾಣದ ಶಿಲಾನ್ಯಾಸ ಪೂಜೆ ಅಂಗವಾಗಿ ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸುಳವಾಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಾದ ಬಿದರಹಳ್ಳಿ, ಹಳೇ ಮಾರ್ಟಳ್ಳಿ, ತಂಡಮೇಡು ಗ್ರಾಮಗಳ ನೂರಾರು ಜನರು ದೇವಾಲಯಕ್ಕೆ ಬಂದಿದ್ದರು.

ಪ್ರಸಾದ ತಿಂದವರು ಅಸ್ವಸ್ಥ
ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪೂಜೆ ಬಳಿಕ ಟೋಮೆಟೋ ಬಾತ್ ಅನ್ನು ಪ್ರಸಾದವಾಗಿ ಹಂಚಲಾಗಿದೆ. ಮೊದಲು ಪ್ರಸಾದ ಸೇವಿಸಿದ ಹಲವರು ಅಸ್ವಸ್ಥಗೊಂಡ ಬಳಿಕ ಪ್ರಸಾದವನ್ನು ಚೆಲ್ಲಲಾಗಿದೆ. ಆದರೆ, ಕಲೆಲವರು ಆ ವೇಳೆಗಾಗಲೇ ಮೆನೆಗೆ ಪ್ರಸಾದವನ್ನು ತೆಗೆದುಕೊಂಡು ಹೋಗಿದ್ದರು. ಪ್ರಸಾದ ಸೇವಿಸಿದ 60ಕ್ಕೂ ಅಧಿಕ ಜನರು ಅಸ್ವಸ್ಥರಾದರು.

11 ಜನರ ಸಾವು, ಹಲವರ ಸ್ಥಿತಿ ಗಂಭೀರ
ಪ್ರಸಾದ ತಿಂದು ಅಸ್ವಸ್ಥರಾದ ಹಲವು ಜನರಿಗೆ ಮೊದಲು ಸಮೀಪದ ಕಾಮಗೆರೆಯ ಹೋಲಿಕ್ರಾಸ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ, ಗಂಟಲು ಉರಿ, ಕಣ್ಣು ನೀಲಿಯಾಗಿದ್ದ ಹಲವರ ಸ್ಥಿತಿ ಗಂಭೀರವಾಗಿದೆ. ಆಗ ಕೆಲವನ್ನು ಕೊಳ್ಳೆಗಾಲ, ಮೈಸೂರಿನ ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀವ್ರವಾಗಿ ಅಸ್ವಸ್ಥರಾಗಿದ್ದ 11 ಜನರು ಮೃತಪಟ್ಟಿದ್ದಾರೆ.

ಕೀಟನಾಶಕ ಮಿಶ್ರಣ ಶಂಕೆ
ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಹಂಚಿದ ಪ್ರಸಾದಕ್ಕೆ ಕೀಟನಾಶಕ ಮಿಶ್ರಣ ಮಾಡಿರುವ ಶಂಕೆ ಇದೆ. ಮೊಮ್ಮಗ ತಂದು ಕೊಟ್ಟ ಪ್ರಸಾದ ತಿಂದು ಅಜ್ಜ, ಮಗಳಿಗೆ ಪ್ರಸಾದ ತಂದು ಕೊಟ್ಟ ಅಪ್ಪ ಮೃತಪಟ್ಟಿದ್ದಾರೆ. ಪ್ರಸಾದದಲ್ಲಿ ಸೀಮೆಎಣ್ಣೆ ಮತ್ತು ಕೀಟನಾಶಕದ ವಾಸನೆ ಕಂಡು ಬಂದ ತಕ್ಷಣದ ಅದನ್ನು ಚೆಲ್ಲಲಾಗಿದೆ. ಚೆಲ್ಲಿದ ಪ್ರಸಾದ ತಿಂದು 60ಕ್ಕೂ ಹೆಚ್ಚು ಪಕ್ಷಿಗಳು ಮೃತಪಟ್ಟಿವೆ.

ಇಬ್ಬರ ಬಂಧನ, ಕಠಿಣ ಕ್ರಮಕ್ಕೆ ಆಗ್ರಹ
ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಹಂಚಿದ ಪ್ರಸಾದಕ್ಕೆ ವಿಷ ಬೆರೆಸಿದವರು ಯಾರು? ಎಂಬುದು ಇನ್ನೂ ತಿಳಿದಿಲ್ಲ. ವಿಷ ಬೆರೆಸಿದ ಶಂಕೆಯ ಮೇಲೆ ಚನ್ನಪ್ಪಿ ಮತ್ತು ಮಾದೇಶ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಎರಡು ಗುಂಪುಗಳ ನಡುವಿನ ಪ್ರತಿಷ್ಠೆಯ ಕಾರಣಕ್ಕಾಗಿ ವಿಷ ಹಾಕಲಾಗಿದೆಯೇ? ಎಂಬ ಅನುಮಾನ ವ್ಯಕ್ತವಾಗಿದೆ.

ಸರ್ಕಾರದಿಂದ ಪರಿಹಾರ ಘೋಷಣೆ
ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಪ್ರಸಾದ ತಿಂದು ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಅಸ್ವಸ್ಥರಾದ ಜನರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಬ್ಬರು ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜನರ ನೆರವಿಗೆ ಧಾವಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗ ಶೆಟ್ಟಿ ಅವರು ಇನ್ನೂ ತುಮಕೂರಿನಲ್ಲಿದ್ದು, ಮೈಸೂರಿಗೆ ಇನ್ನೂ ಧಾವಿಸಬೇಕಾಗಿದೆ.

ಎಚ್.ಡಿ.ಕುಮಾರಸ್ವಾಮಿ ಭೇಟಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡ ಜನರ ಆರೋಗ್ಯ ವಿಚಾರಿಸಿದರು. 'ವಿಷ ಹಾಕಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು' ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ, ಹನೂರು ಬಳಿಯ ಸುಲ್ವಾಡಿ ದೇವಸ್ಥಾನದ ವಿಷಾಹಾರ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾಗಿರುವವರ ಚಿಕಿತ್ಸಾ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಹಲವು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಳ್ಳೆಗಾಲದಲ್ಲಿ ಗಂಭೀರಗೊಂಡ ರೋಗಿಗಳನ್ನು ಮೈಸೂರಿಗೆ ಕರೆತರಲಾಗಿದೆ.

ಕುಮಾರಸ್ವಾಮಿ ಭರವಸೆ
ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿನ ಪ್ರಸಾದವನ್ನು ಮನೆಗೆ ತಂದುಕೊಟ್ಟ ಅಪ್ಪನನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದೆ. ತಂದೆ ಮೃತಪಟ್ಟಿದ್ದು, ತಾಯಿ ಐಸಿಯುನಲ್ಲಿದ್ದಾರೆ. ಬಿಎಸ್ಸಿ ಓದುತ್ತಿರುವ ಹುಡುಗಿ ಕುಮಾರಸ್ವಾಮಿ ಅವರ ಬಳಿ ಓದಿಗೆ ಸಹಾಯ ಕೇಳಿದ್ದಾರೆ. ಅಗತ್ಯ ಸಹಹಾರವನ್ನು ನೀಡುವುದಾಗಿ ಆಕೆಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಚಿಕಿತ್ಸಾ ವೆಚ್ಚ ಭರಿಸುತ್ತೇವೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೇ ಖಾಸಗಿ ಆಸ್ಪತ್ರೆಯಲ್ಲೂ ಹಲವು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಜನರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.












Click it and Unblock the Notifications