ಬಿಆರ್ ಹಿಲ್ಸ್ ರಸ್ತೆ ಬದಿಯಲ್ಲಿ ಅಪಾಯ ಕಟ್ಟಿಟ್ಟಬುತ್ತಿ
ಚಾಮರಾಜನಗರ, ಅಕ್ಟೋಬರ್ 28 : ಯಳಂದೂರು ತಾಲೂಕು ವ್ಯಾಪ್ತಿಯ ಹುಲಿ ಸಂರಕ್ಷಿತ ಬಿಳಿಗಿರಿರಂಗನಬೆಟ್ಟದ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಸ್ತೆಯು ಉತ್ತಮವಾಗಿದ್ದರೂ ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆಯ ಎರಡು ಬದಿಯಲ್ಲಿದ್ದ ಮಣ್ಣು ಕೊಚ್ಚಿಕೊಂಡು ಹೋದ ಪರಿಣಾಮ ಹಳ್ಳ ಸೃಷ್ಠಿಯಾಗಿದ್ದು, ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಅರಣ್ಯದ ಮೂಲಕ ಬಿಳಿಗಿರಿರಂಗನಬೆಟ್ಟಕ್ಕೆ ಉತ್ತಮ ರಸ್ತೆಯನ್ನು ಮಾಡಲಾಗಿದ್ದು, ದಿನನಿತ್ಯವೂ ಸ್ಥಳೀಯ ಮತ್ತು ದೂರದಿಂದ ಭಕ್ತರು ಬರುತ್ತಿರುತ್ತಾರೆ. ಅದರಲ್ಲೂ ವಾರದ ಕಡೆಯಲ್ಲಿ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದಂತೆ ಪ್ರವಾಸಿಗರು ಇಲ್ಲಿಗೆ ತೆರಳುವುದನ್ನು ಕಾಣಬಹುದಾಗಿದೆ.

ವಾಹನದಲ್ಲಿ ಪ್ರವಾಸಿಗರನ್ನು ಹೊತ್ತು ತರುತ್ತಿರುವ ವಾಹನ ಚಾಲಕರು ತುಂಬಾ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವುದು ಅನಿವಾರ್ಯವಾಗಿದೆ. ಸ್ವಲ್ಪ ಎಚ್ಚರ ತಪ್ಪಿ ರಸ್ತೆ ಬದಿಗೆ ಸರಿದರೂ ಅಪಾಯತಪ್ಪಿದಲ್ಲ. ಈ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಖಾಸಗಿ ಬಸ್ ಸೇರಿದಂತೆ ಹಲವು ವಾಹನಗಳು ಸಂಚರಿಸುತ್ತವೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಲ್ಲಿ ಭಕ್ತರ ನೂಕುನುಗ್ಗಲು ತುಸು ಹೆಚ್ಚಾಗಿಯೇ ಇರುತ್ತದೆ.
ಗುಂಬಳ್ಳಿ ಅರಣ್ಯ ಇಲಾಖೆ ಚೆಕ್ಪೋಸ್ಟ್ನಿಂದ ಬಿಳಿಗಿರಿರಂಗನಬೆಟ್ಟದ ಬಸ್ ನಿಲ್ದಾಣದವರೆಗೂ ಸುಮಾರು 16 ಕಿಮೀ ದೂರದವರೆಗೂ ಈಗ ರಸ್ತೆಯ ಎರಡು ಬದಿಯಲ್ಲಿ ಗಿಡ ಗಂಟಿ ಬೆಳೆದಿದ್ದಲ್ಲದೆ, ಮಳೆಗೆ ರಸ್ತೆ ಬದಿಯ ಮಣ್ಣು ಕೊಚ್ಚಿ ಹೋಗಿ ಹಳ್ಳಕೊಳ್ಳವಾಗಿದೆ. ಇದರಿಂದ ಎದುರಿನಿಂದ ಬರುವ ವಾಹನಕ್ಕೆ ದಾರಿ ಬಿಟ್ಟು ಕೊಡಬೇಕಾದರೆ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಒಂದೊಮ್ಮೆ ಇದರ ಅರಿವಿಲ್ಲದೆ ರಸ್ತೆ ಬದಿಗೆ ವಾಹನವನ್ನು ಕೊಂಡೊಯ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ರಸ್ತೆಯ ಬದಿಯಲ್ಲಿ ಪಿಚ್ಚಿಂಗ್ ಮಾಡಿ ರಸ್ತೆ ಅಗಲೀಕರಣದೊಂದಿಗೆ ಡಾಂಬರೀಕರಣ ಮಾಡಬೇಕಾಗಿತ್ತಾದರೂ ಅದಕ್ಕೆ ಅರಣ್ಯ ಇಲಾಖೆ ಅವಕಾಶ ಮಾಡಿಕೊಡಲಿಲ್ಲ. ಇದರಿಂದ ಈ ಹಿಂದೆಯಿದ್ದ ರಸ್ತೆಯ ಅಳತೆಯಲ್ಲೇ ಮಾಡಲಾಗಿದೆ. ಹೀಗಾಗಿ ಯಾವುದೇ ಪ್ರಯೋಜನವಾದಂತೆ ಕಂಡು ಬರುತ್ತಿಲ್ಲ. ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಬದಿಯಲ್ಲಿ ಹಾಕಿದ್ದ ಮಣ್ಣು ಕೊಚ್ಚಿಹೋಗಿದ್ದು, ಕೆಲವೆಡೆ ಹೊಂಡಗಳಾಗಿದ್ದರೆ, ಮತ್ತೆ ಕೆಲವೆಡೆ ಕಲ್ಲುಗಳು ಹರಡಿ ಬಿದ್ದಿವೆ.
ಹಾಗಾಗಿ ಚಲಿಸುವಾಗ ಒಂದು ವಾಹನ ಮತ್ತೊಂದು ವಾಹನಕ್ಕೆ ರಸ್ತೆ ಬಿಟ್ಟುಕೊಡುವುದು ಕಷ್ಟದ ಕೆಲಸವಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅವಘಡ ಸಂಭವಿಸುವುದಂತು ನಿಶ್ಚಿತವಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ರಸ್ತೆಯ ಬದಿಗಳಲ್ಲಿ ಆಗಿರುವ ಹಳ್ಳಕೊಳ್ಳವನ್ನು ಮುಚ್ಚಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಿದೆ.












Click it and Unblock the Notifications