ಚಾಮರಾಜನಗರದಲ್ಲಿ ಜಿಟಿಜಿಟಿ ಮಳೆ: ಜನರ ಪರದಾಟ
ಚಾಮರಾಜನಗರ, ನವೆಂಬರ್ 12: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿದಿದೆ. ಈ ಭಾಗದ ಕೆಲವು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುವ ನವೆಂಬರ್ 13ರಂದು ಹಿಂಗಾರು ಮಳೆ ಅಬ್ಬರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ರಾಮನಗರ, ಮಂಡ್ಯ, ಮೈಸೂರು, ಕೊಡಗು, ಕೋಲಾರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾನುವಾರ ಗುಡುಗು ಸಹಿತ ಧಾರಾಕಾರವಾಗಿ ಮಳೆಯಾಗುವ ನಿರೀಕ್ಷೆ ಇದೆ.
ಚಾಮರಾಜನಗರ ಜಿಲ್ಲಾದ್ಯಂತ ಶುಕ್ರವಾರ ಮುಂಜಾನೆಯಿಂದ ಆರಂಭವಾದ ಜಿಟಿಜಿಟಿ ಮಳೆ ಶನಿವಾರವೂ ಮುಂದುವರೆದಿದ್ದು, ಗಡಿ ಜಿಲ್ಲೆಯ ಜನರು ಮಳೆಗೆ ಹೈರಾಣು ಆಗಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಇದ್ದ ಚಳಿಯ ವಾತಾವರಣ ಕಳೆದ ಎರಡು ದಿನಗಳಿಂದ ಹೆಚ್ಚಾಗಿದ್ದು ಎರಡು ದಿನಗಳಿಂದ ಬಿಸಿಲಿನ ಕಿರಣವೇ ಮಾಯವಾಗಿದೆ. ಅರಣ್ಯ ಪ್ರದೇಶಗಳಲ್ಲಿ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಗ್ರಾಮೀಣ ರಸ್ತೆಗಳು ಕೆಸರುಮಯ ಆಗಿದ್ದು, ವಾಹನಗಳಲ್ಲಿ ಸಂಚರಿಸಲು ಜನರು ಪರದಾಡುತ್ತಿದ್ದಾರೆ. ಜೊತೆಗೆ ಕೃಷಿ ಚಟುವಟಿಕೆಗೂ ಪೆಟ್ಟು ಬಿದ್ದಿದೆ. ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಮಳೆ ನಡುವೆ ಪರದಾಡುತ್ತಿದ್ದಾರೆ.
ಮಳೆಯ ನಡುವೆ ಪಾಠ ಕೇಳಿದ ವಿದ್ಯಾರ್ಥಿಗಳು
ಕಳೆದ 2 ದಿನಗಳಿಂದ ಜಿಟಿಜಿಟಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಪಳನಿಮೇಡು ಶಾಲೆಯ ಮೇಲ್ಛಾವಣಿ ದುರಸ್ತಿ ಗೊಂಡಿರುವುದರಿಂದ ಸುರಿವ ಮಳೆ ನಡುವೆ ಮಕ್ಕಳಿಗೆ ಪಾಠ ಕೇಳಿದ್ದಾರೆ.

ಪಳನಿಮೇಡು ಗ್ರಾಮದ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ 130 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 130 ವಿದ್ಯಾರ್ಥಿಗಳಿಗೆ ಕೇವಲ 5 ಕೊಠಡಿಗಳಿದ್ದು ಇದರಲ್ಲಿ 2 ಮಂಗಳೂರು ಹಂಚಿನ ಕಟ್ಟಡಗಳು ತೀವ್ರ ಹಾನಿಯಾಗಿದೆ. ಇದಲ್ಲದೆ ಕೋತಿಗಳ ಹಾವಳಿ ಹೆಚ್ಚಿರುವುದರಿಂದ ಮೇಲ್ಛಾವಣಿ ದುರಸ್ತಿಗೊಂಡಿದೆ . ಇನ್ನೂ ಇರುವ 3 ಕೊಠಡಿಗಳು ಆರ್ಸಿಸಿ ಕಟ್ಟಡಗಳಾಗಿದ್ದರೂ ಸಹ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಗೋಡೆಗಳು ಶಿಥಿಲ ಗೊಂಡಿದೆ. ಇದರಿಂದ ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications