ಕೃಪೆ ತೋರಿದ ವರುಣ:ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರ

ಚಾಮರಾಜನಗರ, ಏಪ್ರಿಲ್ 30:ಕಿಡಿಗೇಡಿಗಳ ಕೃತ್ಯಕ್ಕೆ ಸುಟ್ಟು ಕರಕಲಾಗಿದ್ದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದಲ್ಲಿ ವರುಣ ಕೃಪೆ ತೋರಿದ ಪರಿಣಾಮ ಎಲ್ಲೆಡೆ ಹಸಿರು ಕಂಗೊಳಿಸುತ್ತಿದ್ದು, ವನ್ಯಪ್ರಾಣಿಗಳು ನೆಮ್ಮದಿಯಿಂದ ನಲಿದಾಡುತ್ತಿವೆ.

ಕಳೆದ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿದ್ದರು. ಪರಿಣಾಮ ಸುಮಾರು 20 ಸಾವಿರ ಎಕರೆಯಷ್ಟು ಅರಣ್ಯಪ್ರದೇಶ ಸುಟ್ಟು ಕರಕಲಾಗಿತ್ತು. ಅರಣ್ಯ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರಾದರೂ ಪ್ರಯೋಜನವಾಗಿರಲಿಲ್ಲ.

ಬಳಿಕ ಹೆಲಿಕಾಪ್ಟರ್ ಮೂಲಕ ನೀರು ಹಾಯಿಸಿ ಬೆಂಕಿಯನ್ನು ನಂದಿಸಲಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಅರಣ್ಯ ಪ್ರದೇಶ ನಾಶವಾಗಿತ್ತು. ಎಲ್ಲಿ ನೋಡಿದರೂ ಸುಟ್ಟು ಕರಕಲಾದ ಮರಗಿಡಗಳು, ಹಾರಾಡುವ ಬೂದಿ ಕಂಡು ಬರುವುದರೊಂದಿಗೆ ಸೂತಕದ ವಾತಾವರಣ ನಿರ್ಮಾಣವಾಗಿತ್ತು.

ಇಡೀ ಪ್ರದೇಶ ಸುಟ್ಟು ಹೋಗಿದ್ದರಿಂದ ಭಯಗೊಂಡ ಜನ ದೇವರ ಮೊರೆಹೋಗಿದ್ದರು. ಹಿಮವದ್ ಗೋಪಾಲ ಸ್ವಾಮಿ ಬೆಟ್ಟದಲ್ಲಿ ಮಳೆಗಾಗಿ ಪ್ರಾರ್ಥನೆಯನ್ನು ಮಾಡಿಕೊಳ್ಳಲಾಗಿತ್ತು. ಪ್ರಾಣಿಪಕ್ಷಿಗಳ ಸಂಕಟ, ಜನರ ಪ್ರಾರ್ಥನೆ ಎಲ್ಲವೂ ದೇವರಿಗೆ ಕೇಳಿಸಿತೋ ಏನೋ ಮಾರ್ಚ್ ಮೊದಲ ವಾರದಲ್ಲಿ ಈ ವ್ಯಾಪ್ತಿಯಲ್ಲಿ ಮಳೆ ಸುರಿದಿತ್ತು.

ಅದಾದ ನಂತರ ಆಗೊಮ್ಮೆ ಈಗೊಮ್ಮೆ ಮಳೆ ಸುರಿದ ಕಾರಣ ಅರಣ್ಯ ಪ್ರದೇಶದಲ್ಲಿ, ಹುಲ್ಲು, ಕುರುಚಲು ಕಾಡುಗಳು ಚಿಗುರಿದ್ದು, ಹಸಿರಾಗಿದೆ. ಜತೆಗೆ ಕಳೆದ ವರ್ಷ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬಿದ್ದರಿಂದ ನೀರಿಗೂ ಹಾಹಾಕಾರ ಬಂದಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಬಂಡೀಪುರ ಅರಣ್ಯದಲ್ಲಿ ಸುಂದರ ನಿಸರ್ಗ ನೋಟ ಪ್ರವಾಸಿಗರಿಗೆ ಲಭಿಸುತ್ತಿದೆ.

ಈ ನಡುವೆ ಸಾವಿರಾರು ಎಕರೆ ಪ್ರದೇಶ ಬೆಂಕಿಯಲ್ಲಿ ಬೆಂದು ಹೋದ ಪರಿಣಾಮ ಅಲ್ಲಿದ್ದ ಅರಣ್ಯ ನಾಶವಾಗಿರುವುದರಿಂದ ಬಿದಿರು ನಾಟಿ, ಬೀಜದುಂಡೆ ಪಸರಿಸುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಅಲ್ಲದೆ ಈಗಾಗಲೇ ಬೋಳಾಗಿರುವ ಅರಣ್ಯ ಪ್ರದೇಶದಲ್ಲಿ ಮತ್ತೆ ಮರಗಿಡ ಬೆಳೆಸುವ ಮೂಲಕ ಹಿಂದಿನಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ.

 ಹುಲ್ಲು ಹುಟ್ಟಿದರೆ ವನ್ಯ ಪ್ರಾಣಿಗಳಿಗೂ ಆಹಾರ

ಹುಲ್ಲು ಹುಟ್ಟಿದರೆ ವನ್ಯ ಪ್ರಾಣಿಗಳಿಗೂ ಆಹಾರ

ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚಾಗಿ ಲಂಟಾನ ಬೆಳೆದಿದ್ದು, ಅದು ಹರಡಿ ಬೆಳೆಯುವುದರಿಂದ ಬೇರೆ ಗಿಡಗಳು ಬೆಳೆಯುವುದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಅಲ್ಲಿ ಹುಲ್ಲು ಹುಟ್ಟುವಂತಾದರೆ ವನ್ಯ ಪ್ರಾಣಿಗಳಿಗೂ ಆಹಾರವಾಗುತ್ತದೆ. ಜತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಲಸು, ಹೆಬ್ಬಲಸು, ಸೇರಿದಂತೆ ಪ್ರಾಣಿಗಳಿಗೆ ಅನುಕೂಲವಾಗುಂತಹ ಗಿಡಗಳನ್ನು ನೆಟ್ಟರೆ ಭವಿಷ್ಯದ ದಿನಗಳಲ್ಲಿ ಉತ್ತಮವಾಗಲಿದೆ.

 ಬಿದಿರು, ಹುಲ್ಲಿನ ಬೀಜಗಳ ಬಿತ್ತನೆ ಕಾರ್ಯ

ಬಿದಿರು, ಹುಲ್ಲಿನ ಬೀಜಗಳ ಬಿತ್ತನೆ ಕಾರ್ಯ

ಬಂಡೀಪುರ ಹುಲಿ ಯೋಜನೆ ನಿರ್ದೇಶಕರಾದ ಬಾಲಚಂದ್ರ ಅವರು, ಬೆಂಕಿಯಿಂದ ಹಾನಿ ಉಂಟಾಗಿರುವ ಪ್ರದೇಶದಲ್ಲಿ ಬಿದಿರು ಮತ್ತು ಹುಲ್ಲಿನ ಬೀಜಗಳ ಬಿತ್ತನೆ ಕಾರ್ಯ ಮಾಡಲಾಗುತ್ತಿದ್ದು, ಈ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಿರುವ ಕಾರಣ ಸೆಪ್ಟೆಂಬರ್ ತಿಂಗಳಲ್ಲೂ ಬಿತ್ತನೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಪರಿಸರಕ್ಕೆ ಹೊಂದಿಕೊಂಡು ಬೆಳೆಯುವ ಹೊಂಗೆ, ದಿಂಡಿಲು ಮತ್ತು ಹೆಬ್ಬೇವು ಬೀಜಗಳನ್ನು ಕಡಿಮೆ ಪ್ರಮಾಣದಲ್ಲಿ ಬಿತ್ತನೆ ಮಾಡುವ ಉದ್ದೇಶ ಹೊಂದಲಾಗಿರುವುದಾಗಿಯೂ ಹೇಳಿದ್ದಾರೆ.

 ಬೆಂಕಿಯ ಕೆನ್ನಾಲಿಗೆಗೆ ಸಿಲುಕುತ್ತಿರುವ ಅರಣ್ಯ

ಬೆಂಕಿಯ ಕೆನ್ನಾಲಿಗೆಗೆ ಸಿಲುಕುತ್ತಿರುವ ಅರಣ್ಯ

ಪ್ರತಿವರ್ಷವೂ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಾಡ್ಗಿಚ್ಚುಗಳು ಸಂಭವಿಸದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದ್ದರೂ, ಕೆಲವು ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿಯೇ ಬೆಂಕಿ ಹಚ್ಚುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಅರಣ್ಯ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಶವಾಗುತ್ತಲೇ ಇದೆ. ಇದರ ಜೊತೆಗೆ ಅದೆಷ್ಟು ಸೂಕ್ಷ್ಮ ಜೀವಿಗಳು, ಪ್ರಾಣಿ, ಪಕ್ಷಿಗಳು ನಾಶವಾಗಿವೆಯೋ ದೇವರಿಗೆ ಗೊತ್ತು.

 ಯಥಾಸ್ಥಿತಿಗೆ ಬರಲು ಕಾಯಬೇಕು

ಯಥಾಸ್ಥಿತಿಗೆ ಬರಲು ಕಾಯಬೇಕು

ಈ ಬಾರಿಯ ಬೇಸಿಗೆಯಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಈ ಪ್ರದೇಶಗಳು ಮತ್ತೆ ಯಥಾಸ್ಥಿತಿಗೆ ಬರಲು ಇನ್ನಷ್ಟು ವರ್ಷಗಳು ಕಾಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಉತ್ತಮ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಹಕಾರ ನೀಡಬೇಕಿದೆ. ಇನ್ನು ಮುಂದೆಯಾದರೂ ಬೇಸಿಗೆ ದಿನಗಳಲ್ಲಿ ಕಿಡಿಗೇಡಿಗಳತ್ತ ನಿಗಾವಹಿಸಿ ಅರಣ್ಯಕ್ಕೆ ಬೆಂಕಿ ಇಡುವುದನ್ನು ಅರಣ್ಯ ಇಲಾಖೆ ತಪ್ಪಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+