ಚಾಮರಾಜನಗರದ ಆಲೆಮನೆಯಲ್ಲಿ ತಯಾರಾಗುತ್ತೆ ಸಕ್ಕರೆ!
ಈ ನಡುವೆ ಬೆಲ್ಲ ತಯಾರಿಸಿ ಬದುಕು ಸಾಗಿಸೋದು ಕಷ್ಟ ಎಂಬುದು ಅರಿವಾಗುತ್ತಿದ್ದಂತೆಯೇ ಬೆಲ್ಲದ ಬದಲಿಗೆ ಆಲೆಮನೆಯಲ್ಲೇ ಸಕ್ಕರೆ ತಯಾರಿಸಿ ಜೀವನ ನಿರ್ವಹಣೆಗೆ ಚಾಮರಾಜನಗರದ ಹರದನಹಳ್ಳಿ ಬಳಿಯಿರುವ ಆಲೆಮನೆಗಳು ಮುಂದಾಗಿವೆ.
ಸಾಮಾನ್ಯವಾಗಿ ಆಲೆಮನೆಗಳೆಂದರೆ ಬೆಲ್ಲ ತಯಾರಿಸುವ ಕಾರ್ಖಾನೆ ಎಂದರೂ ತಪ್ಪಾಗಲಾರದು. ಆದರೆ ಇಂತಹ ಆಲೆಮನೆಗಳೇ ಸಕ್ಕರೆ ತಯಾರಿಕೆಗೆ ಮುಂದಾಗಿರುವುದು ಅಚ್ಚರಿಯಾದರೂ ಸತ್ಯ. ಮಂಡ್ಯ ವ್ಯಾಪ್ತಿಯಲ್ಲಿ ಹೆಚ್ಚಿನ ಆಲೆಮನೆಗಳಿದ್ದು, ಇಲ್ಲಿ ಉತ್ಪಾದನೆಯಾಗುವ ಬೆಲ್ಲಗಳು ರಾಜ್ಯ ಮಾತ್ರವಲ್ಲದೆ, ಹೊರರಾಜ್ಯಗಳಿಗೂ ಸಾಗಾಟವಾಗುತ್ತವೆ. ಆದರೆ ಆಗಾಗ್ಗೆ ದರದಲ್ಲಿ ಕುಸಿತವಾಗುವುದರಿಂದಾಗಿ ಬೆಲ್ಲ ತಯಾರಿಸುವ ಆಲೆಮನೆಗಳು ಸಂಕ್ಷಷ್ಟಕ್ಕೀಡಾಗುತ್ತಿವೆ.

ಇದನ್ನೆಲ್ಲ ಅರಿತ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯಲ್ಲಿ ಆಲೆಮನೆ ಹೊಂದಿರುವ ರೈತರು ಬೆಲ್ಲ ತಯಾರಿಸುವ ಬದಲಿಗೆ ಸಕ್ಕರೆಯತ್ತ ಒಲವು ತೋರಿದ್ದು, ಈಗಾಗಲೇ ಇಲ್ಲಿ ಉತ್ಪಾದನೆಯಾಗುವ ಸಕ್ಕರೆಗೆ ತಮಿಳುನಾಡಿನಲ್ಲಿ ಒಳ್ಳೆಯ ಮಾರುಕಟ್ಟೆಯೂ ದೊರೆತಿರುವುದರಿಂದ ಹುರುಪಿನಿಂದ ಸಕ್ಕರೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ.
ಇಲ್ಲಿನ ರೈತರು ಕೊಪ್ಪರಿಗೆಯಲ್ಲಿ ತುಂಬಿಸಿ ಕುದಿಸಿ ಅದಕ್ಕೆ ಬೆಲ್ಲಕ್ಕೆ ಬಳಸುತ್ತಿದ್ದ ರಾಸಾಯನಿಕಗಳಲ್ಲೇ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಸೋಡಾ, ಹೈಡ್ರಸ್, ಸುಣ್ಣ ಬಳಸಿ ಪಾಕವನ್ನು ಪುಡಿ ಮಾಡುವ ಮೂಲಕ ಸಕ್ಕರೆಯನ್ನು ಉತ್ಪಾದಿಸುತ್ತಿದ್ದಾರೆ. ಹೀಗೆ ಉತ್ಪಾದನೆಯಾದ ಸಕ್ಕರೆಯನ್ನು ತಮಿಳುನಾಡಿಗೆ ಸಾಗಿಸಿದರೆ ಅಲ್ಲಿ ಒಂದು ಕಿಲೋಗ್ರಾಂಗೆ 35 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಚಿಲ್ಲರೆಯಾಗಿ ತೆಗೆದುಕೊಳ್ಳುವುದಾದರೆ ರೂ. 45ರಷ್ಟು ದರವನ್ನು ವಿಧಿಸಲಾಗುತ್ತಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಹರದನಹಳ್ಳಿಯ ಆಲೆಮನೆಗಳಲ್ಲಿ ಸಕ್ಕರೆ ತಯಾರಿಸಲು ಆರಂಭಿಸಿದ ಬಳಿಕ ಆರ್ಥಿಕವಾಗಿ ಸುಧಾರಣೆ ಕಂಡಿದ್ದರಿಂದ ಧೈರ್ಯ ಬಂದಿದೆ. ಹೀಗಾಗಿ ಬೆಲ್ಲದ ತಯಾರಿಕೆಗಿಂತ ಸಕ್ಕರೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.












Click it and Unblock the Notifications