ವಕಾಲತ್ತು ವಹಿಸದ ವಕೀಲರು: ವಿಷಪ್ರಸಾದ ಆರೋಪಿಗಳಿಗೆ ಜೈಲೇ ಗತಿ!
ಚಾಮರಾಜನಗರ, ಜನವರಿ 17: ದ್ವೇಷದ ಹಿನ್ನಲೆಯಲ್ಲಿ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಭಕ್ತರಿಗೆ ನೀಡಲಾದ ಪ್ರಸಾದಕ್ಕೆ ವಿಷ ಬೆರೆಸಿ 17 ಮಂದಿಯನ್ನು ಬಲಿಪಡೆದು ನೂರಾರು ಮಂದಿ ನರಳುವಂತೆ ಮಾಡಿದ ಆರೋಪಿಗಳ ಪರ ಇಲ್ಲಿವರೆಗೆ ಯಾವುದೇ ವಕೀಲರು ವಕಾಲತ್ತು ವಹಿಸಲು ಬಾರದ ಕಾರಣದಿಂದಾಗಿ ವಿಷಜಂತುಗಳಿಗೆ ಜೈಲೇ ಗತಿಯಾಗಿದೆ.
ಈಗಾಗಲೇ ಮೈಸೂರಿನ ಕಾರಾಗೃಹದಲ್ಲಿ ಮುದ್ದೆ ಮುರಿಯುತ್ತಿರುವ ನಾಲ್ವರು ಆರೋಪಿಗಳ ವಿಚಾರಣೆಯನ್ನು ನ್ಯಾಯಾಧೀಶರು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ್ದಾರೆ. ಈ ಹಿಂದೆ ಆರೋಪಿಗಳನ್ನು ಕೊಳ್ಳೇಗಾಲ ನ್ಯಾಯಾಲಯಕ್ಕೆ ಕರೆತರಲಾಗಿತ್ತಾದರೂ ಈ ಬಾರಿ ವೀಡಿಯೋ ಕಾನ್ಫರೆನ್ಸ್ ಮೂಲಕವೇ ನ್ಯಾಯಾಧೀಶರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ವಿಚಾರಣೆಯನ್ನು ಜ.29ಕ್ಕೆ ಮುಂದೂಡಲಾಗಿದೆ.
ಸುಳ್ವಾಡಿ ದುರಂತಕ್ಕೆ ಒಂದು ತಿಂಗಳು : ಇನ್ನೂ ಮಾಸದ ಸಾವಿನ ನೋವು
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿ ಗ್ರಾಮದ ಹೊರ ವಲಯದಲ್ಲಿರುವ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಡಿ.14 ರಂದು ವಿಷ ಮಿಶ್ರಿತ ಪ್ರಸಾದ ತಯಾರಿಸಿ ಅಮಾಯಕ ಭಕ್ತರಿಗೆ ವಿತರಣೆ ಮಾಡಿದ್ದರಿಂದ 17 ಮಂದಿ ಸಾವನ್ನಪ್ಪಿದ್ದು, 107 ಮಂದಿ ಅಸ್ವಸ್ಥರಾಗಿದ್ದರು.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಘಟನೆಗೆ ಕಾರಣರಾದ ದೇವಾಲಯದ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ ನಾಗದೇವಾಲಯದ ಅರ್ಚಕ ದೊಡ್ಡಯ್ಯ ಮತ್ತು ಟ್ರಸ್ಟ್ ಮ್ಯಾನೇಜರ್ ಮಾದೇಶ್ ಅವರನ್ನು ಬಂಧಿಸಿದ್ದು ಮೈಸೂರಿನ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಈ ಸಂಬಂಧ ಆರೋಪಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸಂತ್ರಸ್ಥರಿಗೆ ಪರಿಹಾರ ನೀಡಲಾಗಿದೆಯಾ?
ಇದೀಗ ಬಂಧಿತ ಆರೋಪಿಗಳ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಪ್ರಕರಣಗಳು ಕೂಡ ದಾಖಲಾಗಿರುವ ಹಿನ್ನಲೆಯಲ್ಲಿ ಸಂತ್ರಸ್ಥರಿಗೆ ಪರಿಹಾರ ನೀಡಲಾಗಿದೆಯಾ ಎಂದು ವಿಚಾರಣೆ ವೇಳೆ ನ್ಯಾಯಾಧೀಶರು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ವಿಚಾರಣೆ ಜ.29ಕ್ಕೆ ಮುಂದೂಡಿಕೆ
ಈ ನಡುವೆ ನ್ಯಾಯಾಧೀಶರು ಆರೋಪಿಗಳ ವಿಚಾರಣೆ ನಡೆಸಿ ನಿಮ್ಮ ಪರ ಯಾರದರೂ ವಕಾಲತ್ತು ವಹಿಸುತ್ತಾರಾ ಎಂದು ಕೇಳಿದ್ದು, ಇದಕ್ಕೆ ಆರೋಪಿಗಳು ಹತ್ತು ದಿನಗಳ ಕಾಲಾವಕಾಶ ಕೋರಿದ್ದರೂ ಎನ್ನಲಾಗಿದೆ. ಹೀಗಾಗಿ ವಿಚಾರಣೆಯನ್ನು ಜ.29ಕ್ಕೆ ಮುಂದೂಡಿದ್ದಾರೆ ಎಂದು ಹೇಳಲಾಗಿದೆ.
ಪ್ರಸಾದಕ್ಕೆ ವಿಷ ಬೆರೆಸಿದ ಆರೋಪಿಗಳನ್ನು ಪೊಲೀಸರು ಹಿಡಿದ ರೋಚಕ ಕತೆ
ಆರೋಪಿಗಳ ಪರ ವಕಾಲತ್ತು ವಹಿಸುತ್ತಿಲ್ಲ
ಮೈಸೂರು ಮತ್ತು ಚಾಮರಾಜನಗರದ ವಕೀಲರು ಆರೋಪಿಗಳ ಪರ ವಕಾಲತ್ತು ವಹಿಸದಿರುವ ತೀರ್ಮಾನ ಕೈಗೊಂಡಿರುವ ಹಿನ್ನಲೆಯಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸುವ ಸಲುವಾಗಿ ಹಾಗೂ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆದಿಲ್ಲ.
ಯಾವ ವಕೀಲರು ಕೂಡ ಮುಂದೆ ಬಂದಿಲ್ಲ
ಆರೋಪಿಗಳ ಪರ ವಕಾಲತ್ತು ವಹಿಸಲು ಎಲ್ಲ ರೀತಿಯ ಕಸರತ್ತು ನಡೆಯುತ್ತಿದೆಯಾದರೂ ಇಲ್ಲಿವರೆಗೆ ಯಾವ ವಕೀಲರು ಕೂಡ ಮುಂದೆ ಬಂದಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಆರೋಪಿಗಳು ಜೈಲಿನಲ್ಲೇ ಮುದ್ದೆ ಮುರಿಯುತ್ತಿದ್ದಾರೆ.