ಚಾಮರಾಜನಗರ: ತಾಳಿ ಭಾಗ್ಯ ಕರುಣಿಸಿ ಮಹಿಳೆಯೋರ್ವಳಿಗೆ ಕೈ ಕೊಟ್ಟ ಪೊಲೀಸಪ್ಪ, ಇವರಿಬ್ಬರ ಪ್ರೇಮ್ ಕಹಾನಿ ಮಾತ್ರ ರೋಚಕ!
ಚಾಮರಾಜನಗರ, ಜೂನ್, 27: ನ್ಯಾಯ ಕೊಡಿಸಬೇಕಾದ ಪೊಲೀಸ್ ಅಧಿಕಾರಿಯಿಂದಲೇ ಮಹಿಳೆ ಅನ್ಯಾಯಕ್ಕೊಳಗಾಗಿ ಅತಂತ್ರಳಾಗಿರುವ ಘಟನೆ ಚಾಮರಾಜನಗರ ತಾಲೂಕಿನಲ್ಲಿ ನಡೆದಿದೆ.
41 ವರ್ಷದ ವಿವಾಹಿತ ಮಹಿಳೆ ಜೊತೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದ ಚಾಮರಾಜನಗರ ಪೂರ್ವ ಠಾಣೆಯ ಕಾನ್ಸ್ಟೇಬಲ್ ಅಶೋಕ್ ಎಂಬಾತ 20 ದಿನಗಳಿಂದ ನಾಪತ್ತೆಯಾಗಿದ್ದಾನೆ. ಇದೀಗ ಅನ್ಯಾಯಕ್ಕೊಳಗಾದ ಮಹಿಳೆ ನ್ಯಾಯಕ್ಕಾಗಿ ಮಹಿಳಾ ಠಾಣೆ ಮೆಟ್ಟಿಲೇರಿದ್ದಾಳೆ.

ಏನಿದು ಪ್ರೇಮ್ ಕಹಾನಿ?
ಚಾಮರಾಜನಗರ ತಾಲೂಕಿನ ಗ್ರಾಮವೊಂದರ 41 ವರ್ಷದ ಮಹಿಳೆ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಅಶೋಕ್ ಕಳೆದ 2020ರಿಂದ ಪರಿಚಿತರಾಗಿದ್ದರು. ಹೀಗೆ ಇವರಿಬ್ಬರ ಪರಿಚಯ ವಿವಾಹೇತರ ಸಂಬಂಧದ ತನಕ ಬಂದುಮುಟ್ಟಿದೆ. ಇವರ ಕಹಾನಿ ಮತ್ತಷ್ಟು ಗಟ್ಟಿಯಾದ ಹಿನ್ನೆಲೆ ಕಳೆದ ಕೆಲವು ತಿಂಗಳುಗಳಿಂದ ಚಾಮರಾಜನಗರದಲ್ಲೇ ಮನೆ ಮಾಡಿ ಇಬ್ಬರೂ ಲಿವಿಂಗ್ ಟುಗೆದರ್ನಲ್ಲಿದ್ದರು.
ಆದರೆ, ಪೋಷಕರ ಒತ್ತಾಯದಿಂದ ಅಶೋಕ್ ಪ್ರೇಯಸಿ ಜೊತೆ ಅಂತರ ಕಾಯ್ದುಕೊಂಡು ಬೇರೆ ಮದುವೆಯಾಗಲು ತಯಾರಿ ನಡೆಸುತ್ತಿದ್ದ. ಆದರೆ ತನಗೇ ಆತನ ಜೊತೆಯೇ ಜೀವನ ಸಾಗಿಸಬೇಕು ಎಂದು ವಿವಾಹಿತೆ ಪಟ್ಟು ಹಿಡಿದಿದ್ದಾಳೆ.
ತಾಳಿ ಭಾಗ್ಯ ಕರುಣಿಸಿ ಕೈ ಕೊಟ್ಟ ಪೊಲೀಸಪ್ಪ!
ಪೊಲೀಸ್ ವಸತಿ ನಿಲಯದಲ್ಲೇ ಇಬ್ಬರೂ ಲಿವಿಂಗ್ ಟುಗೆದರ್ನಲ್ಲಿದ್ದ ವೇಳೆ ದೇವರ ಫೋಟೋ ಮುಂದೆ ಅರಿಶಿನ ಕೊಂಬು ಕಟ್ಟಿದ್ದರಂತೆ ಅಶೋಕ್. ಜೊತೆಗೆ, ವಿವಾಹೇತರ ಸಂಬಂಧದ ವಾಟ್ಸ್ ಆ್ಯಪ್ ಚಾಟ್, ಫೋಟೋಗಳ ಜೊತೆ ಸಂತ್ರಸ್ತ ಮಹಿಳೆ ತನಗೇ ತನ್ನ ಪ್ರಿಯಕರ ಬೇಕು, ಆತನ ಜೊತೆ ಜೀವನ ನಡೆಸಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ಸದ್ಯ, ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಶೋಕ್ ಸೇರಿದಂತೆ ಅವರ ಪಾಲಕರ ವಿರುದ್ಧ ಮಹಿಳೆ ದೂರು ಕೊಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಚಾನೆಲ್ ಬದಲಿಸುವ ವಿಚಾರಕ್ಕೆ ಜಗಳ, ದಂಪತಿ ಸಾವು
ಇನ್ನು ರಿಮೋಟ್ನಲ್ಲಿ ಚಾನೆಲ್ ಬದಲಿಸುವ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆರಂಭವಾದ ಜಗಳ ಕೊನೆಗೆ ಸಾವಿನಲ್ಲಿ ಅಂತ್ಯವಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಅಂತೀರಾ ಇಲ್ಲಿದೆ ನೋಡಿ ವಿವರ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದಲ್ಲಿ ರಿಮೋಟ್ನಲ್ಲಿ ಚಾನೆಲ್ ಬದಲಿಸುವ ವಿಚಾರಕ್ಕೆ ಗಂಡ-ಹೆಂಡತಿ ಪರಸ್ಪರ ಹೊಡೆದಾಡಿಕೊಂಡು ಸಾವನ್ನಪ್ಪಿದ್ದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಇನ್ನು ದಂಪತಿಗಳ ದುರಂತ ಸಾವಿನಿಂದ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ದಂಪತಿ ಯಶೋಧ ಮತ್ತು ಇಮ್ಯಾನುಲ್ ತೋಟದ ಕೆಲಸಕ್ಕೆ ಬಂದು ಕಾರ್ಕಳದಲ್ಲಿ ನೆಲೆಸಿದ್ದರು. ಮಧ್ಯಾಹ್ನ ಊಟದ ಬಳಿಕ ದಂಪತಿಗಳು ಇಬ್ಬರು ಮಕ್ಕಳೊಂದಿಗೆ ಟಿವಿ ನೋಡುತ್ತಾ ಮನೆಯಲ್ಲಿ ಕುಳಿತಿದ್ದರು.ಈ ನಡುವೆ ಚಾನೆಲ್ ಚೇಂಜ್ ಮಾಡಲು ದಂಪತಿ ನಡುವೆ ಕಿರಿಕಿರಿ ನಡೆದಿದೆ.
ಜಗಳದಿಂದ ಮನನೊಂದು ಪತ್ನಿ ಮನೆ ಸಮೀಪದಲ್ಲಿದ್ದ ನೀರು ತುಂಬಿದ್ದ ಗುಂಡಿಗೆ ಹಾರಿದ್ದಾರೆ. ಇನ್ನು ಪತ್ನಿಯನ್ನು ರಕ್ಷಿಸಲು ಪತಿ ಕೂಡ ನೀರಿಗೆ ಧುಮುಕಿದ್ದಾನೆ. ಬಳಿಕ ಗುಂಡಿಯಿಂದ ಹೊರಬರಲಾರದೇ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ದಂಪತಿಗಳ ಮೃತದೇಹವನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಸುಮಿತ್ ನಲ್ಲೂರು ಮತ್ತು ಗೆಳೆಯರು ಮೇಲೆತ್ತಿದ್ದಾರೆ. ಸದ್ಯ ಈ ಪ್ರಕರಣ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.












Click it and Unblock the Notifications