ಟ್ಯಾಂಕರ್ ಉರುಳಿ ಪೆಟ್ರೋಲ್, ಡೀಸೆಲ್ ರಸ್ತೆ ಪಾಲು: ತಪ್ಪಿದ ಭಾರಿ ಅನಾಹುತ
ಚಾಮರಾಜನಗರ, ಅಕ್ಟೋಬರ್ 9: ಪೆಟ್ರೋಲ್, ಡೀಸೆಲ್ ತುಂಬಿದ ಟ್ಯಾಂಕರ್ ವೊಂದು ಉರುಳಿದ ಪರಿಣಾಮ ಒಬ್ಬ ವ್ಯಕ್ತಿಗೆ ತೀವ್ರ ಗಾಯವಾಗಿದ್ದು, ಭಾರಿ ಅವಘಡವೊಂದು ಸ್ವಲ್ಪದರಲ್ಲಿ ತಪ್ಪಿದೆ. ಒಂದು ವೇಳೆ ಬೆಂಕಿ ಸೋಕಿದ್ದರೆ ಅನಾಹುತವನ್ನು ಊಹಿಸಲು ಅಸಾಧ್ಯವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಹಾಸನದಿಂದ ಹೊರಟಿದ್ದ ಟ್ಯಾಂಕರ್ ಚಾಮರಾಜನಗರ ಕಡೆಗೆ ಬರುತ್ತಿತ್ತು. ಪಟ್ಟಣದ ಹತ್ತಿರವೇ ಇರುವ ಬ್ರಾಹ್ಮಣ ಸಮುದಾಯದ ಸ್ಮಶಾನದ ಮುಂಭಾಗದಲ್ಲಿ ಇರುವ ಚಿಕ್ಕ ಸೇತುವೆಗೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಹೆಚ್ಚಿನ ತೊಂದರೆ ಇಲ್ಲದೆ ಪಾರಾಗಿದ್ದಾರೆ.[ಚಿತ್ರದುರ್ಗ : ಭೀಕರ ಅಪಘಾತ, 7 ವಿದ್ಯಾರ್ಥಿನಿಯರು ಸಾವು]
ಚಾಮರಾಜನಗರದ ವೆಂಕಟೇಶ್ವರ ಬಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಸವರಾಜು ಎಂಬುವರಿಗೆ ತೀವ್ರ ಗಾಯಗಳಾಗಿವೆ. ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ 8 ಸಾವಿರ ಲೀಟರ್ ಪೆಟ್ರೋಲ್, 4 ಸಾವಿರ ಲೀಟರ್ ಡೀಸೆಲ್ ರಸ್ತೆ ಪಾಲಾಗಿದೆ. ಇನ್ನು ಅಪಘಾತದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.[ಬೆಂಗಳೂರು : ಮರ ಬಿದ್ದು ಬೈಕ್ ಸವಾರ ಸಾವು]
ಅಪಘಾತದ ಸುದ್ದಿ ತಲುಪಿದ ತಕ್ಷಣ ಎಚ್ಚೆತ್ತುಕೊಂಡ ಅಗ್ನಿಶಾಮಕ ದಳದ ಸಿಬ್ಬಂದಿ ಸಂಭವನೀಯ ಅನಾಹುತವನ್ನು ತಪ್ಪಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಂಚಾರ ಪೊಲೀಸರು ರಸ್ತೆ ಬಂದ್ ಮಾಡಿದ್ದರಿಂದ ಐದು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.