ಜನರಿಗೆ ಮಾರಕವಾದ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ
ಚಾಮರಾಜನಗರ, ಏಪ್ರಿಲ್ 12: ಗ್ರಾಮಸ್ಥರು, ರೈತರ ತೀವ್ರ ವಿರೋಧದ ನಡುವೆ ಆರಂಭವಾಗಿರುವ ತಾಲೂಕಿನ ಕಗ್ಗಳದಹುಂಡಿ ಸಮೀಪದ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ಆರಂಭವಾದ ಬೆನ್ನಲ್ಲೇ ಅದರಿಂದ ಹೊರಬಂದ ಹೊಗೆಯಿಂದ ಸುತ್ತಲಿನ ಮೂವತ್ತಕ್ಕೂ ಹೆಚ್ಚು ಜನರಿಗೆ ಉಸಿರಾಟದ ತೊಂದರೆಯಾಗಿ ಹತ್ತುಕ್ಕೂ ಹೆಚ್ಚು ಮಂದಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಘಟನೆ ನಡೆದಿದೆ.
ಕಗ್ಗಳದ ಹುಂಡಿ ಸಮೀಪದಲ್ಲಿ ಸ್ಥಾಪನೆಯಾಗಿರುವ ಚೀನಾ ಮೂಲದ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ಏ.10ರ ಸಂಜೆಯಿಂದ ಕಾರ್ಯಾರಂಭ ಮಾಡಿದ್ದು ಇಲ್ಲಿಂದ ಹೊರಬಂದ ಹೊಗೆಯಿಂದ ಸುತ್ತಲಿನ ಕಂದೇಗಾಲ, ಮೊಳ್ಳಯ್ಯನಹುಂಡಿ, ಶಿಂಡನಪುರ, ಬೆಟ್ಟಹಳ್ಳಿ, ಬೊಡ್ಡತುಪ್ಪೂರು, ಕೆಲಸೂರುಪುರ ಹಾಗೂ ಇಂಗಲವಾಡಿ ಗ್ರಾಮಗಳ ಸಾರ್ವಜನಿಕರಿಗೆ ತಲೆಸುತ್ತು, ವಾಕರಿಕೆ, ಸುಸ್ತು, ನಿದ್ರಾಹೀನತೆ, ಅಲರ್ಜಿ ಕಾಣಿಸಿಕೊಂಡಿದೆ.
ಜರ್ಮನಿಯಲ್ಲಿ ಹೂವಿನ ಮೇಲೊಂದು ಕತ್ತರಿ ಪ್ರಯೋಗ
ಮೊದಲಿಗೆ ಹಳಸಿದ ಘಾಟು ದುರ್ವಾಸನೆಯನ್ನು ಸಹಿಸಲಾಗದ ಜಮೀನಿನಲ್ಲಿ ಕೆಲಸಮಾಡುತ್ತಿದ್ದ ರೈತರು, ಕಾರ್ಮಿಕರು ದನಗಾಹಿಗಳು ಮನೆಗೆ ಹಿಂದಿರುಗುವ ವೇಳೆಗೆ ಸುಸ್ತಿನಿಂದ ಬಳಲಿದ್ದಾರೆ. ಸ್ವಲ್ಪ ಆರೈಕೆ ಮಾಡಿದರೂ ತಲೆಸುತ್ತು ಹಾಗೂ ಸುಸ್ತು ಹೆಚ್ಚಾಗಿ ತಮ್ಮ ಅನಾರೋಗ್ಯಕ್ಕೆ ಕಾರಣ ತಿಳಿಯದೆ ಪಟ್ಟಣದ ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಇನ್ನು ಚೆಂಡು ಮಲ್ಲಿಗೆ ಘಟಕದಲ್ಲಿ ಕೆಲಸ ಮಾಡಲು ಹೋಗಿದ್ದವರು ವಾಸನೆಯನ್ನು ಸಹಿಸಲಾಗದೆ ಹಿಂತಿರುಗಿದ್ದು, ಅವರು ಕಾರ್ಖಾನೆಯಿಂದಲೇ ವಾಸನೆ ಬರುತ್ತಿರುವ ಬಗ್ಗೆ ಹೇಳಿದ್ದರಿಂದ ಸ್ಥಳೀಯರು ಆತಂಕ ಗೊಂಡಿದ್ದಲ್ಲದೆ, ಆಕ್ರೋಶಗೊಂಡ ಗ್ರಾಮಸ್ಥರು ಶಿಂಡನಪುರ ಗ್ರಾಮಪಂಚಾಯಿತಿ ಎದುರು ತೆರಳಿ ಕೂಡಲೇ ಸಂಸ್ಕರಣಾ ಘಟಕ ಮುಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ತಹಸೀಲ್ದಾರ್ ಚಂದ್ರಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಕಂದಾಯಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದು ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ವರದಿ ಮಾಡುವುದಾಗಿ ಹೇಳಿದ್ದಾರೆ. ಸದ್ಯ ಸಂಸ್ಕರಣಾ ಘಟಕದ ಸುತ್ತಮುತ್ತಲಿನ ಜನ ಆತಂಕದಲ್ಲಿದ್ದು ಮುಂದೇನು ಕಾದಿದೆಯೋ ಎಂಬ ಭಯದಲ್ಲಿ ಬದುಕುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಇದೇ ಕಾರಣಕ್ಕೆ ಗುಂಡ್ಲುಪೇಟೆ ಭಾಗದಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಬಣ್ಣದ ಉತ್ಪಾದನೆಗಾಗಿ ಬಳಸುವ ಈ ಹೂವುಗಳನ್ನು ಸಂಸ್ಕರಿಸುವ ಸಮಯದಲ್ಲಿ ಉಪಯೋಗಿಸುವ ರಾಸಾಯನಿಕಗಳಿಂದಾಗಿ ಸುತ್ತ ಮುತ್ತಲಿನ ಜನ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.