ಮಳೆಗಾಗಿ ಶಿವನ ಮೊರೆ ಹೋದ ಚಾಮರಾಜನಗರ ಜನತೆ
ಚಾಮರಾಜನಗರ, ಏಪ್ರಿಲ್ 29:ಬೇಸಿಗೆಯ ಧಗೆಯನ್ನು ತಣಿಸಲು ಆಗೊಮ್ಮೆ ಈಗೊಮ್ಮೆ ಮಳೆ ಬರಲೇ ಬೇಕು...ಮಳೆ ಬಾರದೆ ಹೋದರೆ ಜನ ಮುಗಿಲತ್ತ ನೋಡುವುದು ಸಾಮಾನ್ಯ. ಮಲೆನಾಡಿನಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಸಾಮಾನ್ಯವಾಗಿ ಮಳೆ ಸುರಿಯುತ್ತದೆ. ಆದರೆ ಬಯಲು ಸೀಮೆಗಳಲ್ಲಿ ಮಳೆ ಯಾವಾಗ ಬರುತ್ತದೆ ಎಂದು ಕಾಯುವುದು ಅನಿವಾರ್ಯವಾಗಿದೆ.
ಅದರಲ್ಲೂ ಚಾಮರಾಜನಗರದಲ್ಲಿ ಸಮರ್ಪಕವಾಗಿ ಮಳೆ ಬಾರದಿರುವುದು ಇಲ್ಲಿನವರನ್ನು ಆತಂಕಕ್ಕೀಡು ಮಾಡಿದ್ದು, ಹೀಗಾಗಿಯೇ ಇಲ್ಲಿನ ಜನ ಶಿವನ ಮೊರೆ ಹೋಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹಲವೆಡೆ ಉತ್ತಮವಾಗಿ ಮಳೆಯಾಗುತ್ತಿದ್ದರೂ ಜಿಲ್ಲೆಯ ಕೇಂದ್ರ ಬಿಂದು ಚಾಮರಾಜನಗರದಲ್ಲಿ ಮಳೆಯಾಗುತ್ತಿಲ್ಲ ಎಂಬುದು ಜನರ ಆತಂಕವಾಗಿದೆ. ಈಗಾಗಲೇ ಜನ ಬಿಸಿಲಿನಿಂದ ಬಸವಳಿದಿದ್ದು, ಮಳೆ ಸುರಿಯದ ಕಾರಣ ಆತಂಕಗೊಂಡಿದ್ದಾರೆ. ಹೀಗಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ಮೊರೆ ಹೋಗಿದ್ದಾರೆ.

ಈ ನಡುವೆ ಚಾಮರಾಜನಗರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಕನಿಷ್ಟ ವೇತನ ಆಯೋಗದ ಮಾಜಿ ಅಧ್ಯಕ್ಷ ವಕೀಲ ಎಂ. ಚಿನ್ನಸ್ವಾಮಿ ಮತ್ತಿತರರು ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗ ಇರುವ ಉದ್ಯಾನವನದ ಮದ್ಯ ಭಾಗದಲ್ಲಿ ಶಿವನ ಮೂರ್ತಿಯನ್ನಿಟ್ಟು, ನೀರಿನ ಅಭಿಷೇಕ ಮಾಡುವ ಮೂಲಕ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ನಾಡು ಸುಭೀಕ್ಷೆಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಕುರಿತು ಮಾಹಿತಿ ನೀಡಿದ ಎಂ.ರಾಮಚಂದ್ರ ಅವರು, ಕಳೆದ ಹಲವಾರು ವರ್ಷಗಳಿಂದ ಚಾಮರಾಜನಗರ ಪಟ್ಟಣ ಹೊರತುಪಡಿಸಿ ಉಳಿದೆಡೆ ಮಳೆಯಾಗುತ್ತಿದೆ, ಇದನ್ನು ಗಮನಿಸಿದ ನಾಗರಿಕರು ಕೃಷಿ ಮತ್ತು ಇತರೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡಿದಾಗ ಮಳೆಯಾಗುವ ಭರವಸೆ ನೀಡುತ್ತಿದ್ದರು. ಆದರೆ ಮಳೆ ಮಾತ್ರ ಪಟ್ಟಣ ಪ್ರದೇಶದಲ್ಲಿ ಬೀಳುತ್ತಿಲ್ಲ. ಹೀಗಾಗಿ ಶಿವನನ್ನು ಪ್ರಾರ್ಥನೆ ಮಾಡಿ ಮಳೆಯಾಗಲಿ ಎಂದು ಪೂಜೆ ಸಲ್ಲಿಸಿದ್ದೇವೆ ಎಂದರು.
ಜನಾರ್ದನ ಪ್ರತಿಷ್ಠಾನದ ಅರ್ಚಕ ಅನಂತಪ್ರಸಾದ್ ಅವರು ಹೇಳುವ ಪ್ರಕಾರ ಈ ಹಿಂದೆ ಮಳೆ ಬಾರದಿದ್ದಾಗ ಪ್ರಜನ್ಯ ಜಪ ಮಾಡಿ ಶಿವನಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ ಮಾಡಿ ಭಗವಂತನನ್ನು ಪ್ರಾರ್ಥಿಸಿದ್ದು, ಪೂಜೆ ಮಾಡಿ ವಾರದೊಳಗೆ ಮಳೆ ಬಂದಿರುವುದನ್ನು ಕಂಡಿದ್ದೇವೆ. ಹೀಗಾಗಿ ಶಿವನಿಗೆ ನೀರಿನ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದು, ವಾರದೊಳಗೆ ಮಳೆಯಾಗುವ ನಿರೀಕ್ಷೆಯನ್ನು ಹೊರಹಾಕಿದ್ದಾರೆ. ಅದು ಏನೇ ಇರಲಿ ವರುಣ ಜಿಲ್ಲೆಯತ್ತ ಕೃಪೆ ತೋರಿಸಿದ್ದೇ ಆದರೆ ರೈತಾಪಿ ವರ್ಗ ಸೇರಿದಂತೆ ಜನ ಸಾಮಾನ್ಯರು ನೆಮ್ಮದಿಯುಸಿರು ಬಿಡಬಹುದಾಗಿದೆ.












Click it and Unblock the Notifications