ಸೋಲಿಗರ ಈ ಸ್ಥಿತಿ ನೋಡಿದರೆ ನಿಮ್ಮ ಮನಸ್ಸೂ ಕರಗಬಹುದು, ಆದರೆ...
ಚಾಮರಾಜನಗರ, ನವೆಂಬರ್ 27: ಪ್ರತಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ನಾಯಕರು ಕೋಟ್ಯಂತರ ರೂ.ಗಳ ಯೋಜನೆಗಳ ಕುರಿತಂತೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುತ್ತಾರೆ. ಆದರೆ ಹಳ್ಳಿಗಳ ಬದುಕು ಮಾತ್ರ ಇನ್ನೂ ಉದ್ಧಾರವಾಗಿಲ್ಲ. ಇದಕ್ಕೆ ಗುಂಡ್ಲುಪೇಟೆ ತಾಲೂಕಿನ ಕಣಿಯನಪುರ ಕಾಲೋನಿಯ ಸೋಲಿಗರ ಬದುಕೇ ಸಾಕ್ಷಿ.
ಸರ್ಕಾರದಿಂದ ಅದೆಷ್ಟೋ ಯೋಜನೆಗಳು ಬಿಡುಗಡೆಯಾಗಿದ್ದರೂ ಅದ್ಯಾವುದೂ ಇಲ್ಲಿ ಅನುಷ್ಠಾನಗೊಂಡಿಲ್ಲ ಎಂಬುದು ಇಲ್ಲಿನವರ ಬದುಕನ್ನು ನೋಡಿದರೆ ಅರ್ಥವಾಗಿಬಿಡುತ್ತದೆ. ಇಲ್ಲಿ ಸೋಲಿಗರು ವಾಸ ಮಾಡುತ್ತಿದ್ದು, ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿದ್ದರೂ ಮೂಲ ಸೌಕರ್ಯಗಳಿಲ್ಲದೆ, ಅವರು ಆದಿ ಮಾನವರಂತೆ ಬದುಕು ಸಾಗಿಸುತ್ತಿರುವುದು ನಮ್ಮ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಚಿತ್ರದುರ್ಗದಲ್ಲಿ 50 ಲಕ್ಷದ ರಸ್ತೆಗೆ ಮೂರೇ ತಿಂಗಳು ವ್ಯಾಲಿಡಿಟಿ!
ಕಣಿಯನಪುರ ಕಾಲೋನಿಯು ಗುಂಡ್ಲುಪೇಟೆ ತಾಲೂಕು ಕೇಂದ್ರದಿಂದ ಕೇವಲ 25 ಕಿ.ಮೀ ದೂರದಲ್ಲಿದ್ದು, ಬಂಡೀಪುರ ಅರಣ್ಯ ವ್ಯಾಪ್ತಿಗೆ ಹೊಂದಿಕೊಂಡಂತಿದೆ. ಇಲ್ಲಿ 80 ಮನೆಗಳಿದ್ದು ಸುಮಾರು 130 ಮಂದಿ ಮತದಾರರು ಇದ್ದಾರೆ. ಆದರೆ ಇವರೆಲ್ಲರೂ ರಸ್ತೆ, ನೀರು, ವಿದ್ಯುತ್ ಇಲ್ಲದೆ ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತ್ತಿರುವುದು ಬೇಸರದ ಸಂಗತಿ. ಇಲ್ಲಿ ನೆಲೆಸಿರುವ ಜನರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಅದರಿಂದ ಬರುವ ಆದಾಯದಲ್ಲಿ ಜೀವನ ನಡೆಸುತ್ತಿದ್ದಾರೆ.
ಸರ್ಕಾರದಿಂದ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಕೋಟಿ ಕೋಟಿ ಹಣ ಹರಿದುಬಂದರೂ ಇಲ್ಲಿಗೆ ಯಾವ ಯೋಜನೆಗಳು ತಲುಪಿದಂತೆ ಕಂಡು ಬರುತ್ತಿಲ್ಲ. ಅದನ್ನು ಅವರ ಬದುಕೇ ಹೇಳುತ್ತಿದೆ. ಗುಡಿಸಲಲ್ಲೇ ಬದುಕುವ ಇಲ್ಲಿನ ಜನ ಸುರಿಯುವ ಮಳೆ, ಬೀಸುವ ಗಾಳಿ, ಚಳಿಗೆ ಮೈಯೊಡ್ಡಿ ಬದುಕು ಸಾಗಿಸುವಂತಾಗಿದೆ.
ನೀರಿಲ್ಲ, ರೋಡಿಲ್ಲ; ಪಾಲಿಕೆ ಚುನಾವಣೆ ಬಹಿಷ್ಕಾರಕ್ಕೆ ಕರೂರು ಗ್ರಾಮಸ್ಥರ ತೀರ್ಮಾನ
ಇಲ್ಲಿಂದ ಶಾಲೆಗೆ ತೆರಳಲು ಮಕ್ಕಳಿಗೆ ಸಮರ್ಪಕವಾದ ರಸ್ತೆ ಕೂಡ ಇಲ್ಲ. ಸಾರಿಗೆ ಸಂಪರ್ಕ ಮರೀಚಿಕೆಯಾಗಿದೆ. ಇರುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಹಾಡಿಯಲ್ಲಿ ಯಾರಾದರು ಅನಾರೋಗ್ಯಕ್ಕೀಡಾದರೆ ಆ ರಸ್ತೆಯಲ್ಲಿ ಬರುವ ತನಕ ಆಯುಷ್ಯ ಗಟ್ಟಿ ಇದ್ದರೆ ಮಾತ್ರ ಬದುಕುತ್ತಾರಷ್ಟೆ. ಇಲ್ಲಿಗೆ ವಿದ್ಯುತ್ ಇನ್ನೂ ಬಂದಿಲ್ಲ. ಜತೆಗೆ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿದೆ. ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ಸಾಗಿಸುವಂತಾಗಿದೆ.
ಚುನಾವಣೆ ಬಂದಾಗ ಮಾತ್ರ ಹಣ ಹೆಂಡ ನೀಡಿ ಮತ ಹಾಕಿಸಿಕೊಳ್ಳುವ ರಾಜಕಾರಣಿಗಳು ಆನಂತರ ಈ ಕಡೆ ತಿರುಗಿಯೂ ನೋಡುವುದಿಲ್ಲ. ಅವರ ಕಷ್ಟ ಸುಖ ವಿಚಾರಿಸುವುದಿಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಇವರಿಗೊಂದು ಒಳ್ಳೆಯ ಬದುಕು ಕಲ್ಪಿಸಿಕೊಡಲಿ.