ಗುಂಡ್ಲುಪೇಟೆಯಲ್ಲಿ ಎಗ್ಗಿಲ್ಲದೆ ಸಾಗಿದ ಕೇರಳ ಲಾಟರಿ ದಂಧೆ
ಚಾಮರಾಜನಗರ, ಆಗಸ್ಟ್ 24 : ರಾಜ್ಯದಲ್ಲಿ ಲಾಟರಿ ನಿಷೇಧವಾದ ಬಳಿಕ ಬಹಳಷ್ಟು ಕುಟುಂಬಗಳು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕರ್ನಾಟಕಕ್ಕೆ ಹೊಂದಿಕೊಂಡಿರುವ ರಾಜ್ಯಗಳಲ್ಲಿ ಲಾಟರಿ ನಿಷೇಧಿಸದೆ ಇರುವುದರಿಂದಾಗಿ ಗಡಿಭಾಗಗಳಲ್ಲಿ ಲಾಟರಿ ಟಿಕೆಟ್ಗಳ ಅಕ್ರಮ ಮಾರಾಟ ಸದ್ದಿಲ್ಲದೆ ನಡೆಯುತ್ತಿದ್ದು ಇದಕ್ಕೆ ಗುಂಡ್ಲುಪೇಟೆ ಸಾಕ್ಷಿಯಾಗಿದೆ.
ಎಲ್ಲವೂ ಗುಪ್ತವಾಗಿಯೇ ನಡೆಯುತ್ತಿರುವುದರಿಂದ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೇರಳ ಮತ್ತು ತಮಿಳುನಾಡಿನ ಲಾಟರಿ ಟಿಕೆಟ್ಗಳು ಯಾರಿಗೂ ಗೊತ್ತೇ ಆಗದಂತೆ ಬಿಕರಿಯಾಗುತ್ತಿವೆ. ಒಳಗೊಳಗೆ ನಡೆಯುವ ಈ ದಂಧೆಯಿಂದ ಒಂದಷ್ಟು ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ. ಲಾಟರಿ ನಿಷೇಧ ದಳಕ್ಕಾಗಲೀ, ಪೊಲೀಸರಿಗಾಗಲೀ ಇವರು ಸಿಕ್ಕಿ ಬೀಳುತ್ತಲೇ ಇಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ.[ಲಾಟರಿ ಹಗರಣ : ಕರ್ನಾಟಕಕ್ಕೂ ಬೆಂಗಾಲಕ್ಕೂ 4,500 ಕೋಟಿ ರು ಲಿಂಕ್]

ಹಾಗೆ ನೋಡಿದರೆ ಗುಂಡ್ಲುಪೇಟೆ ಕೇರಳ ಮತ್ತು ತಮಿಳುನಾಡಿಗೆ ಹೊಂದಿಕೊಂಡಿರುವುದರಿಂದ ಅಕ್ರಮ ಚಟುವಟಿಕೆಗಳು ಇಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವೇಶ್ಯಾವಾಟಿಕೆ, ಜೂಜು, ಅಕ್ರಮಸಾರಾಯಿ ಮಾರಾಟ, ಲಾಟರಿ ದಂಧೆ ಮೊದಲಾದವು ಎಗ್ಗಿಲ್ಲದೆ ನಡೆಯುತ್ತಿದೆ. ಗೌಪ್ಯವಾಗಿಯೇ ನಡೆಯುವ ದಂಧೆಗಳು ಕೆಲವೊಮ್ಮೆ ಮಾತ್ರ ಬೆಳಕಿಗೆ ಬರುತ್ತದೆ.[ಲಾಟರಿ ಕಿಂಗ್ ಪಿನ್ ಕೈ ಹಿಡಿದ ಪುಢಾರಿಗಳ ಗೆಳೆತನ]
ಲಾಟರಿ ಟಿಕೆಟ್ಗಳಿಗೆ ಈ ವ್ಯಾಪ್ತಿಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ವೃತ್ತಿನಿರತ ಕೆಲವು ಏಜೆಂಟರು ಕೇರಳದ ಸುಲ್ತಾನ್ ಬತ್ತೇರಿ, ಕ್ಯಾಲಿಕಟ್ನಿಂದ ಟಿಕೆಟ್ಗಳನ್ನು ಖರೀದಿಸಿ ತಂದು ಗುಂಡ್ಲುಪೇಟೆಯಲ್ಲಿ ಮಾರಾಟ ಮಾಡುತ್ತಾರೆ. ಗುಂಡ್ಲುಪೇಟೆಯಲ್ಲಿ ಮಲಯಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಲ್ಲಿಗೆ ಕೇರಳದ ಪತ್ರಿಕೆಗಳು ಕೂಡ ಬರುವುದರಿಂದ ಲಾಟರಿ ಫಲಿತಾಂಶ ನೋಡಲು ಅನುಕೂಲವಾಗುತ್ತದೆ.[ಲಾಟರಿ ಮಾರ್ಟಿನ್ ಕರಾಳ ಸಾಮ್ರಾಜ್ಯದಲ್ಲಿ ಒಂದು ಸುತ್ತು]
ಇಲ್ಲಿ ಲಾಟರಿ ಮಾರಾಟ ಅಕ್ರಮವಾಗಿ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಕೆಲವು ಸಮಯಗಳ ಹಿಂದೆ ದುಂದಾಸನಪುರ ಗ್ರಾಮದ ವ್ಯಕ್ತಿಯೊಬ್ಬರಿಗೆ 1 ಕೋಟಿ ರೂ. ಹಾಗೂ ಪಟ್ಟಣದಲ್ಲಿ ಹೋಟೆಲ್ ವ್ಯಾಪಾರ ಮಾಡುವ ವ್ಯಕ್ತಿಯೊಬ್ಬರಿಗೆ 35 ಲಕ್ಷ ರೂ ಲಾಟರಿ ಹೊಡೆದಿದೆ ಎಂಬ ಸುದ್ದಿಗಳು ಹರಿದಾಡಿದ್ದವು.
ನಿಷೇಧಿತ ಸ್ಥಳದಲ್ಲೇ ನಿಷೇಧಿತ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂಬ ಸೂತ್ರವನ್ನು ಕಂಡುಕೊಂಡಿರುವ ಅಕ್ರಮ ಲಾಟರಿ ಮಾರಾಟದ ದಂಧೆಕೋರರು ವ್ಯವಸ್ಥಿತವಾಗಿಯೇ ಮಾರಾಟ ಮಾಡಿ ತಮ್ಮ ತಿಜೋರಿಯನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನಾದರೂ ಪೊಲೀಸರು ಗುಂಡ್ಲುಪೇಟೆಯತ್ತ ನಿಗಾ ವಹಿಸಲಿ ಮತ್ತು ಇಲ್ಲಿ ನಡೆಯುವ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲಿ.












Click it and Unblock the Notifications