ವೈನಾಡಿನಲ್ಲಿ ಮಳೆ, ಬಂಡೀಪುರದ ಮೂಲೆಹೊಳೆಗೆ ಜೀವಕಳೆ
ಚಾಮರಾಜನಗರ, ಅಕ್ಟೋಬರ್ 17 : ಹಲವು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿದ್ದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಹರಿಯುವ ಮೂಲೆಹೊಳೆ ತುಂಬಿ ಹರಿಯುತ್ತಿದೆ,
ಕಳೆದ ಕೆಲವು ವರ್ಷಗಳಿಂದ ಮೂಲೆಹೊಳೆಯಲ್ಲಿ ನೀರಿಲ್ಲದೇ ಇಲ್ಲಿನ ವನ್ಯ ಪ್ರಾಣಿಗಳು ಸಂಕಷ್ಟ ಅನುಭವಿಸಿದ್ದವು. ಆದರೆ, ಇದೀಗ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಹೊಳೆ ತುಂಬಿ ಹರಿಯುತ್ತಿದೆ.
ಕೇರಳದ ವೈನಾಡು ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಆಗದ ಕಾರಣದಿಂದಾಗಿ ಅಷ್ಟೊಂದಾಗಿ ನೀರು ಹರಿದಿರಲಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ವೈನಾಡು ಸೇರಿದಂತೆ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವುದರಿಂದ ಮೂಲೆಹೊಳೆಯು ತುಂಬಿಹರಿಯುತ್ತಿದೆ.
ಬರದಿಂದ ತತ್ತರಿಸಿದ್ದ ಚಾಮರಾಜನಗರಕ್ಕೆ ವರವಾದ ಹಿಂಗಾರು
ಈ ಹಿಂದೆ ವೈನಾಡು ಪ್ರದೇಶದಲ್ಲಿಯೂ ಮಳೆಯ ಕೊರತೆಯಿಂದ ಸುಲ್ತಾನ್ ಭತ್ತೇರಿ ಬಳಿ ಹೊಳೆಗೆ ಅಡ್ಡಲಾಗಿ ಮರಳಿನ ಮೂಟೆಗಳನ್ನು ಇಟ್ಟು ನೀರನ್ನು ತಡೆಯಲಾಗಿತ್ತು. ಇದರಿಂದ ವನ್ಯಜೀವಿಗಳು ಕಲ್ಲುಬಂಡೆಗಳ ನಡುವೆ ಸಂಗ್ರಹವಾಗಿದ್ದ ಅಲ್ಪ ಸ್ವಲ್ಪ ನೀರನ್ನೇ ಕುಡಿಯುವಂತಾಗಿತ್ತು.
ಮೂಲೆಹೊಳೆ, ಮದ್ದೂರು, ಕಲ್ಕೆರೆ, ರಾಂಪುರ ಆನೆಶಿಬಿರ, ಹೆಡಿಯಾಲ ಮುಂತಾದ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಕೊರತೆಯುಂಟಾಗಿ ಕಬಿನಿ ಹಿನ್ನೀರಿನತ್ತ ವಲಸೆ ತೆರಳಿದ್ದವು. ಆದರೆ, ಮೇ ಮತ್ತು ಜೂನ್ ತಿಂಗಳಲ್ಲಿ ಒಂದಷ್ಟು ಮಳೆ ಬಂದು ಕೆರೆಗಳು ತುಂಬಿದ್ದವು. ಇದಲ್ಲದೆ ಬತ್ತಿ ಹೋಗಿದ್ದ ಹೊಳೆಯಲ್ಲಿ ನೀರಿನ ಸೆಲೆ ಕಂಡು ಬಂದಿತ್ತು.
ಮಳೆಗಾಲ ಪ್ರಾರಂಭವಾದ ನಂತರ ಇದೀಗ ಮೂಲೆಹೊಳೆ ವಲಯದಲ್ಲಿರುವ ಸುಮಾರು 32 ಕೆರೆಗಳಿಗೂ ನೀರು ಹರಿದುಬರುತ್ತಿದ್ದು, ಬಹುತೇಕ ತುಂಬಿಕೊಳ್ಳುತ್ತಿವೆ. ದೊಡ್ಡಕೆರೆಯಾದ ಮಾಡ್ರಕಟ್ಟೆಯು ಭರ್ತಿಯಾಗಿದ್ದು, ವಲಸೆ ಹೋಗಿದ್ದ ವನ್ಯಜೀವಿಗಳು ಹಿಂದುರುಗಿವೆ.
ಮದ್ದೂರಿನಿಂದ ಮೂಲೆಹೊಳೆ ದಾಟುವವರೆಗೆ ಆನೆಗಳ ಹಿಂಡು, ಜಿಂಕೆಗಳ ಗುಂಪು ಹಾಗೂ ಕಾಟಿಗಳು ರಸ್ತೆಯ ಬದಿಯಲ್ಲಿಯೇ ಕಾಣಸಿಗುತ್ತಿವೆ.
ಬೇಸಿಗೆಯಲ್ಲಿ ನೀರಿಲ್ಲದೆ ಕಾಣುತ್ತಿದ್ದ ಕಲ್ಲುಬಂಡೆಗಳು ನೀರಿನಲ್ಲಿ ಮುಳುಗಿವೆ. ಒಟ್ಟಾರೆಯಾಗಿ ಮೂಲೆಹೊಳೆ ತುಂಬಿಹರಿಯುತ್ತಿರುವುದರಿಂದ ನೆಮ್ಮದಿಯುಸಿರು ಬಿಡುವಂತಾಗಿದೆ.