ಚಾಮರಾಜನಗರ ಉಸ್ತುವಾರಿ ಸಚಿವರ ಮುಂದೆ ಸಮಸ್ಯೆಗಳ ಸುರಿಮಳೆ
ಚಾಮರಾಜನಗರ, ಅಕ್ಟೋಬರ್ 4: ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಾಡಂಚಿನ ಗ್ರಾಮಸ್ಥರು ತಾವು ಎದುರಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರ ಮುಂದೆ ಶನಿವಾರ ಬಿಚ್ಚಿಟ್ಟರು.
ಅರಣ್ಯದ ಇಂಡಿಗನತ್ತ, ದೊಡ್ಡಾಣೆ, ಮೆಂದಾರೆ, ಕೊಕ್ಕಬರೆ, ಕೊಮ್ಮಡಿಕ್ಕಿ, ಆನೆಹೊಲ, ತೇಕಾಣೆ, ನಾಗಮಲೆ, ಹಳೆಯೂರು ಹಾಗೂ ಇನ್ನಿತರ ಗ್ರಾಮಸ್ಥರು ರಸ್ತೆ, ವಿದ್ಯುತ್ , ಶಾಲಾ ಕೊಠಡಿ ದುರಸ್ತಿ, ಪಡಿತರ ವಿತರಣೆ ಹಾಗೂ ಆಸ್ಪತ್ರೆ ಸಿಬ್ಬಂದಿ ನೇಮಕ, ಆ್ಯಂಬುಲೆನ್ಸ್ ವ್ಯವಸ್ಥೆ, ಅಂಗನವಾಡಿ ಕೆಂದ್ರಕ್ಕೆ ಸ್ವಂತ ಕಟ್ಟಡ, ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಸೌಕರ್ಯ ಒದಗಿಸಿಕೊಡುವಂತೆ ಮನವಿ ಮಾಡಿದರು.
ಶಾಲೆ ತೆರೆಯುವ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತೆ ಸ್ಪಷ್ಟನೆ!
ಅರಣ್ಯ ಪ್ರದೇಶದಲ್ಲಿರುವ ಗ್ರಾಮಗಳ ಜನರ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸುವುದಕ್ಕಾಗಿ ಸಚಿವ ಸುರೇಶ್ ಕುಮಾರ್ ಅವರು ಸ್ಥಳೀಯ ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆ ತೋಡಿಕೊಂಡರು.
ಮೊದಲು ಮೆದಗಾಣೆ ಗ್ರಾಮದಲ್ಲಿ ಸಚಿವರು ಅಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಶಾಲೆ ಸೇರಿದಂತೆ ಗ್ರಾಮಕ್ಕೆ ರಸ್ತೆ, ನೀರು, ವಿದ್ಯುತ್ ಸಂಪರ್ಕ, ಕೆರೆಗೆ ನೀರು, ಚೆಕ್ಡ್ಯಾಂ ನಿರ್ಮಾಣ, ವಸತಿ ಸೌಲಭ್ಯ, ಪಡಿತರ ವ್ಯವಸ್ಥೆ ಹಾಗೂ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್ ಅವರು, ಮಳೆಗಾಲ ಮುಗಿದ ನಂತರ ಕಾಮಗಾರಿ ಕೈಗೆತ್ತಿಕೊಂಡು ರಸ್ತೆ ನಿರ್ಮಿಸಲಾಗುವುದು. ಅರಣ್ಯ ಹಾಗೂ ಸೆಸ್ಕ್ ಅಧಿಕಾರಿಗಳ ಜೊತೆ ಚರ್ಚಿಸಿ ಶಾಶ್ವತ ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡುವುದಾಗಿ ಪಡಿತರವನ್ನು ವಾಹನದ ಮೂಲಕ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಜನರಿಗೆ ಜಾಬ್ ಕಾರ್ಡ್ ವಿತರಣೆ ಮಾಡಿ ನರೇಗಾ ಅಡಿ ಉದ್ಯೋಗ, ಸೇವಾಮಿತ್ರ ಯೋಜನೆಯಡಿ ವೃದ್ಧಾಪ್ಯ ವೇತನದ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.
ತುಳಸಿಕೆರೆ ಗ್ರಾಮದಲ್ಲಿಯೂ ಇಂತಹದೇ ಸಮಸ್ಯೆಗಳನ್ನು ಜನರು ಪ್ರಸ್ತಾಪಿಸಿದರು. ಸುರೇಶ್ ಕುಮಾರ್ ಅವರು ಮಾತನಾಡಿ, ಇಲ್ಲಿಯ ಗ್ರಾಮಗಳಿಂದ ಮಹದೇಶ್ವರ ಬೆಟ್ಟ ಶಾಲೆಗೆ ತೆರಳುವ ಮಕ್ಕಳಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು, ತಹಶೀಲ್ದಾರ್ ನಾಗರಾಜು ಇನ್ನಿತರ ಅಧಿಕಾರಿಗಳು ಹಾಜರಿದ್ದರು.