ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಲ್ಲರನ್ನೂ ಬಯ್ಯೋದೇ ವಿಶೇಷ.!-ಬೈಗಳು ಹೇಗಿರುತ್ತವೆ ಗೊತ್ತಾ?
ಚಾಮರಾಜನಗರ, ಮಾರ್ಚ್, 19: ಈ ಊರಲ್ಲಿ 12 ವರ್ಷಗಳಿಗೊಮ್ಕೆ ವಿಶೇಷ ಜಾತ್ರೆ ನಡೆಯಲಿದೆ. ಆದರೆ, ಎಲ್ಲಾ ಜಾತ್ರೆಗಳಂತೆ ಸಾಮಾನ್ಯವಾದ ಜಾತ್ರೆ ಇದಲ್ಲ. ಒಂದು ಸಮುದಾಯದ ಜನರು ಎಲ್ಲಾರನ್ನೂ ಬೈದು, ವಿಡಂಬನೆ ಮಾಡಿ ಹಾಸ್ಯದ ಹೊನಲು ಹರಿಸುವುದೇ ಈ ಜಾತ್ರೆಯ ವಿಶೇಷತೆಯಾಗಿದೆ. ಹಾಗಾದರೆ ಇದನ್ನು ಹೇಗೆಲ್ಲಾ ಆಚರಣೆ ಮಾಡುತ್ತಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರ ತಾಲೂಕಿನ ಮಂಗಲ ಎಂಬ ಗ್ರಾಮದಲ್ಲಿ ಕಳೆದ ಮಾರ್ಚ್ 17ರಿಂದ ಆರಂಭವಾಗಿದ್ದು, ಇಂದಿನ ತನಕ ಮೂರು ದಿನಗಳ ಕಾಲ ಅದ್ಧೂರಿಯಾಗಿ ಹಬ್ಬ ನಡೆಯಲಿದ್ದು, ಇದು ಹಿರಿಯ ಹಬ್ಬ ಅಂತಲೇ ಜನಪ್ರಿಯವಾಗಿದೆ.

ಹತ್ತಾರು ಸಮುದಾಯಗಳು ಈ ಗ್ರಾಮದಲ್ಲಿ ನೆಲೆಸಿದ್ದು, ಎಲ್ಲರೂ ಸೇರಿ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಾರೆ. ಕುರುಬ ಸಮುದಾಯ ಈ ಜಾತ್ರೆಯ ಆಕರ್ಷಣೆ ಕೇಂದ್ರ ಆಗಿದ್ದು, ಎದುರಿಗೆ ಬಂದ ಪ್ರಮುಖರನ್ನು, ಊರಿನ ಮುಖಂಡರನ್ನು ಅಶ್ಲೀಲವಾಗಿ, ಕೊಂಕು, ವಿಡಂಬನೆಯಿಂದ ಬಾಜಿ ಕಟ್ಟಿದ್ದಂತೆ ಬೈಯ್ಯಲಿದ್ದಾರೆ. ಇನ್ನು ಇವರ ಬೈಗುಳವನ್ನು ಕೇಳಿ ಎಲ್ಲರೂ ನಕ್ಕು ಸುಮ್ಮನಾಗಲಿದ್ದು, ಇವರ ಬೈಗುಳ ಕೇಳಲೆಂದೇ ಅಕ್ಕಪಕ್ಕದ ಊರಿನ ಜನರು ಸೇರಿ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸುತ್ತಾರೆ.
ಮಂಗಲ ಗ್ರಾಮದ ವಿಪ್ರ ಮುಖಂಡರಾದ ಶ್ರೀಕಂಠಮೂರ್ತಿ ಹಾಗೂ ಉಪ್ಪಾರ ಸಮುದಾಯದ ಯಜಮಾನರಾದ ಕ್ಯಾತಶೆಟ್ಟಿ ಈ ಕುರಿತು ಮಾತನಾಡಿ, ಶತಮಾನಗಳಿಂದಲೂ ಈ ಹಿರಿಯ ಹಬ್ಬ ಆಚರಣೆಯಲ್ಲಿದ್ದು, ಬೀರೇಶ್ವರ ಸ್ವಾಮಿ ಉತ್ಸವ ಹಾಗೂ ಓಕುಳಿ ಆಡಲಿದ್ದಾರೆ. ಎಲ್ಲಾ ಸಮುದಾಯವೂ ಈ ಜಾತ್ರೆಯಲ್ಲಿ ಪಾಲ್ಗೊಂಡು ಸಹಬಾಳ್ವೆಗೆ ಮುನ್ನುಡಿ ಬರೆಯಲಿದ್ದು, ಕುರುಬ ಸಮುದಾಯ ಈ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಲಿದೆ. ಆ ಸಮುದಾಯ ಮಾತ್ರ ಈ ಬೈಗುಳದಲ್ಲಿ ಪಾಲ್ಗೊಳ್ಳಬೇಕು. ಅವರು ಮಾತ್ರ ಬೈಯ್ಯಲಿದ್ದು, ಒಂದು ರೀತಿ ಮನರಂಜನೆಯಾಗಿಯೂ ಇದು ಕಾಣಲಿದೆ ಎಂದರು.
ಒಟ್ಟಿನಲ್ಲಿ ಜಾತ್ರೆ ಎಂದರೆ ಕೇವಲ ಉತ್ಸವ ಮಾತ್ರ ನಡೆಯುವುದು ಸಾಮಾನ್ಯ. ಆದರೆ, ವಾಚಮಗೋಚರವಾಗಿ ಬೈಯ್ಯುವುದು ಕೂಡ ಇದರ ಭಾಗವಾಗಿರುವುದು ವಿಶೇಷವೇ ಆಗಿದೆ.












Click it and Unblock the Notifications