ಚಾಮರಾಜನಗರದಲ್ಲಿ ಭಾರಿ ಮಳೆ: ಕೆಸರುಮಯವಾದ ಸಿಎಂ ಕಾರ್ಯಕ್ರಮದ ಸ್ಥಳ
ಚಾಮರಾಜನಗರ, ಡಿಸೆಂಬರ್12: ಎರಡನೇ ಬಾರಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಲಿರುವ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗುವ ಆತಂಕ ಶುರುವಾಗಿದೆ.
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಿಎಂ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಆದರೆ, ಮಳೆ ಬಂದು ವೇದಿಕೆ ಆವರಣ ಕೆಸರುಮಯವಾಗಿದ್ದು ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿವೆ ಚಳಿಗಾಲಕ್ಕೆ ಸೂಕ್ತ ಪ್ರವಾಸಿ ತಾಣಗಳು, ತಲುಪುವ ಮಾರ್ಗಗಳ ವಿವರ ಇಲ್ಲಿದೆ
ಮಾಂಡೌಸ್ ಚಂಡಮಾರುತದ ಪರಿಣಾಮ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನೂ 3 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರಿಂದ ಸಿಎಂ ಕಾರ್ಯಕ್ರಮಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಈಗಾಗಲೇ ಕಾರ್ಯಕ್ರಮದ ಸ್ಥಳದಲ್ಲಿ ಕೆಸರುಮಯವಾದ ಸ್ಥಳಕ್ಕೆ ಮಣ್ಣು ಸುರಿದು ಹದ ಮಾಡಲಾಗಿದೆ. ನೀರು ಕ್ರೀಡಾಂಗಣದ ಒಳಕ್ಕೆ ನುಗ್ಗದಂತೆ ಚರಂಡಿಗಳನ್ನು ಸಹ ತೆಗೆಯಲಾಗಿದ್ದು, ಮಂಗಳವಾರಿ ಭಾರಿ ಮಳೆಯಾದರೆ ಎನ್ನುವ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿ ಎರಡನೇ ಬಾರಿ ಜಿಲ್ಲೆಗೆ ಭೇಟಿ ಕೊಡುತ್ತಿದ್ದು, ನೂರಾರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಚಾಲನೆ ಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ 25 ಸಾವಿರ ಆಸನ ವ್ಯವಸ್ಥೆ ಕಲ್ಪಿಸಿರುವ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಸದ್ಯ ಈ ಪ್ರದೇಶ ಕೆಸರುಮಯವಾಗಿದೆ.
ಸಿಎಂ ಬೊಮ್ಮಾಯಿ ಸ್ವಾಗತಕ್ಕೆ ಹಾಕಿರುವ ಫ್ಲೆಕ್ಸ್ಗಳನ್ನು ತೆಗೆಯುವಂತೆ ಪ್ರತಿಭಟನೆ
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದದ್ಯಾಂತ ಬಿಜೆಪಿ ಬಾವುಟ, ಬ್ಯಾನರ್ಗಳು ರಾರಾಜಿಸುತ್ತಿದ್ದು ನಗರಸಭೆ ವಿರುದ್ಧ ಇತರ ಪಕ್ಷಗಳು ತಿರುಗಿಬಿದ್ದಿವೆ.
ಈ ಹಿಂದೆ ಅನೇಕ ಗಣ್ಯರ ಜಯಂತಿಗಳಲ್ಲಿ ಹಾಕಲಾಗಿದ್ದ ಬ್ಯಾನರ್ ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನೆ ತಿಳಿಸಿ ಕಾರ್ಯಕರ್ತರು ಹಾಕಲಾಗಿದ್ದ ಕಟೌಟ್ಗಳನ್ನು ಚಾಮರಾಜನಗರ ನಗರಸಭೆ ತೆರವು ಮಾಡಿತ್ತು. ಆದರೆ ಈಗ ಸಿಎಂ ಬೊಮ್ಮಾಯಿ ಸ್ವಾಗತಕ್ಕೆ ಹಾಕಿರುವ ಬ್ಯಾನರ್ಗಳ ಬಗ್ಗೆ ಜಾಣ ಕುರುಡು ಪ್ರದರ್ಶನ ಮಾಡಿರುವುದರ ವಿರುದ್ಧ ಎಸ್ಡಿಪಿಐ, ಬಿಎಸ್ಪಿ ಜಂಟಿಯಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದೆ.
ಜಿಲ್ಲಾಡಳಿತ ಹಾಗೂ ನಗರಸಭೆಯು ಆಡಳಿತ ಪಕ್ಷಕ್ಕೊಂದು ನ್ಯಾಯ, ವಿಪಕ್ಷಗಳಿಗೊಂದು ನ್ಯಾಯ ಎಂಬಂತೆ ವರ್ತಿಸುತ್ತಿದ್ದು, ಕೂಡಲೇ ಬಿಜೆಪಿಯವರು ಹಾಕಿರುವ ಬ್ಯಾನರ್ ತೆರವು ಮಾಡಬೇಕು. ಒಂದು ವೇಳೆ ನಗರಸಭೆ ಸಿಬ್ಬಂದಿ ತೆರವುಗೊಳಿಸದಿದ್ದರೇ, ನಾವೇ ಫ್ಲೆಕ್ಸ್ಗಳನ್ನು ತೆಗೆಯುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.