ಚಾಮರಾಜನಗರ: ಪೊಲೀಸ್ ಜೀಪ್ ಗೆ ಹೆದರಿದ ಯುವಕ ಕುಸಿದು ಬಿದ್ದು ಸಾವು
ಚಾಮರಾಜನಗರ, ಜುಲೈ 27: ಭಾನುವಾರದ ಕರ್ಫ್ಯೂ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನ ಕಂಡು ಹೆದರಿ, ಯುವಕನೊಬ್ಬ ಓಡಿ ನಂತರ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಚಾಮರಾಜನಗರ ಸಮೀಪದ ಯಲಕ್ಕೂರು ಗ್ರಾಮದಲ್ಲಿ ನಡೆದಿದೆ.
Recommended Video
ಮೃತನನ್ನು ಯಲಕ್ಕೂರು ಗ್ರಾಮದ ಶಂಕರ (25) ಎಂದು ಗುರುತಿಸಲಾಗಿದ್ದು, ಈತ ಜೀವನ ನಿರ್ವಹಣೆಗೆ ಅಡುಗೆ ಕೆಲಸ ಮಾಡಿಕೊಂಡಿದ್ದ. ಕರ್ಫ್ಯೂ ಹಿನ್ನೆಲೆಯಲ್ಲಿ ಕುದೇರು ಪೊಲೀಸರು ಭಾನುವಾರ ಸಂಜೆ 6.30 ರ ಸಮಯದಲ್ಲಿ ಜೀಪಿನಲ್ಲಿ ಗಸ್ತು ತಿರುಗುತ್ತಿದ್ದು ಮೈಕ್ ಬಳಸಿ ಕೊರೊನಾ ಸೋಂಕು ಹರಡುವ ಕಾರಣದಿಂದ ಯಾರೂ ಗುಂಪು ಗೂಡಬೇಡಿ, ಮಾಸ್ಕ್ ಧರಿಸಿ ಎಂದು ಹೇಳುತ್ತಾ ಹೋಗುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮದಲ್ಲಿ ಹರಟೆ ಹೊಡೆಯುತ್ತಾ ಕುಳಿತ್ತಿದ್ದ ಯುವಕರ ಗುಂಪು ಪೊಲೀಸರನ್ನು ಕಂಡದ್ದೇ ತಡ ಕಾಲಿಗೆ ಬುದ್ದಿ ಹೇಳಿದ್ದಾರೆ. ಹೀಗೆ ಸ್ವಲ್ಪ ದೂರ ಓಡಿ ಹೋದ ನಂತರ ಶಂಕರ ಎದುಸಿರು ಬಿಡುತ್ತಾ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾನೆ.

ಕೂಡಲೇ ಆತನನ್ನು ಸಮೀಪದ ಸಂತೆಮರಹಳ್ಳಿ ಖಾಸಗಿ ಆಸ್ಪತ್ರೆಗೆ ಕರೆತಂದು, ಬಳಿಕ ಚಾಮರಾಜನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆತ ಚಿಕಿತ್ಸೆಗೆ ಸ್ಪಂದಿಸದೇ 8 ಘಂಟೆ ವೇಳೆಗೆ ಮೃತಪಟ್ಟಿದ್ದಾನೆ.












Click it and Unblock the Notifications