ಭಾನುವಾರವೂ ಮಲೆ ಮಾದೇಶ್ವರನ ದರ್ಶನ ಪಡೆಯಿರಿ
ಚಾಮರಾಜನಗರ, ಆಗಸ್ಟ್ 02 : ಭಾನುವಾರದ ಲಾಕ್ ಡೌನ್ ಅನ್ನು ಕರ್ನಾಟಕ ಸರ್ಕಾರ ವಾಪಸ್ ಪಡೆದಿದೆ. ಚಾಮರಾಜನಗರದ ಮಲೆ ಮಾದೇಶ್ವರ ದೇವಾಲಯದಲ್ಲಿ ಭಕ್ತರು ಭಾನುವಾರವೂ ದೇವರ ದರ್ಶನ ಪಡೆಯಲು ಜಿಲ್ಲಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡದಂತೆ ಶನಿವಾರ ಸಂಜೆ 4 ರಿಂದ ಸೋಮವಾರ ಬೆಳಗ್ಗೆ 6 ಗಂಟೆಯ ತನಕ ಜಾರಿಗೊಳಿಸಿದ್ದ ಲಾಕ್ ಡೌನ್ಅನ್ನು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ತೆರವುಗೊಳಿಸಿದ್ದಾರೆ. ಭಕ್ತರಿಗೆ ದೇವರ ದರ್ಶನ ಪಡೆಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಭಾನುವಾರ ಭಕ್ತರು ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ತನಕ ಮಾದಪ್ಪನ ದರ್ಶನ ಪಡೆಯಬಹುದಾಗಿದೆ. ಹಲವಾರು ದಿನಗಳ ಬಳಿಕ ಭಾನುವಾರ ದೇವಾಲಯದ ಬಾಗಿಲು ತೆರೆದಿದ್ದು, ಭಕ್ತರಿಗೆ ದರ್ಶನ ಪಡೆಯಲು ಅವಕಾಶ ಸಿಕ್ಕಿದೆ.

ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿದ್ದು, "ದೇವಾಲಯದಲ್ಲಿ ಇನ್ನು ಮುಂದೆ ವಾರದ ಎಲ್ಲಾ ದಿನವೂ ಭಕ್ತರಿಗೆ ದರ್ಶನ ಲಭ್ಯವಾಗಲಿದೆ" ಎಂದು ಹೇಳಿದ್ದಾರೆ.
"ಭಾನುವಾರದ ಲಾಕ್ ಡೌನ್ ಅಂತ್ಯಗೊಂಡಿರುವುದರಿಂದ ಭಾನುವಾರ ಸಹ ಭಕ್ತರು ಭೇಟಿ ನೀಡಬಹುದು. ಆದರೆ, ವಾಸ್ತವ್ಯಕ್ಕೆ ಮಾತ್ರ ಅವಕಾಶವಿಲ್ಲ" ಎಂದು ಸ್ಪಷ್ಟಪಡಿಸಿದರು.
ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಹಸಿರು ವಲಯದಲ್ಲಿದ್ದ ಚಾಮರಾಜನಗರ ಜಿಲ್ಲೆಯಲ್ಲಿಯೂ ಈಗ ಕೊರೊನಾ ವೈರಸ್ ಸೋಂಕಿನ ಪ್ರಕರಣ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಶನಿವಾರ 43 ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 712ಕ್ಕೆ ಏರಿಕೆಯಾಗಿದೆ.












Click it and Unblock the Notifications