ಚಾಮರಾಜನಗರದಲ್ಲಿ ತಪ್ಪಿದ ಭಾರೀ ಬೆಂಕಿ ಅನಾಹುತ!
ಚಾಮರಾಜನಗರ, ಜನವರಿ,13: ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ಸಕಾಲದಲ್ಲಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದ್ದರಿಂದ ಭಾರೀ ಅನಾಹುತ ತಪ್ಪಿರುವ ಘಟನೆ ನಗರದ ನ್ಯಾಯಾಲಯ ಹಾಗೂ ಕರಿನಂಜನಪುರ ರಸ್ತೆಯಲ್ಲಿರುವ ಮಹೇಶ್ ಗ್ಯಾಸ್ ಸರ್ವೀಸ್ ನ ಗೋದಾಮಿನಲ್ಲಿ ನಡೆದಿದೆ.
ಗೋದಾಮಿಗೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಭಯಭೀತರಾಗಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ ಬಳಿಕ ಎಲ್ಲರೂ ನಿಟ್ಟುಸಿರುಬಿಟ್ಟಿದ್ದಾರೆ. ಈ ವ್ಯಾಪ್ತಿಯಲ್ಲಿ ಜನವಸತಿಯಿದ್ದು ಸಿಲಿಂಡರ್ ಗಳಿಗೆ ಬೆಂಕಿ ತಗಲಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತು.[ಚಿಂತಾಮಣಿಯಲ್ಲಿ 900 ಸಿಲಿಂಡರ್ ಸ್ಫೋಟ, 2 ಲಾರಿ ಭಸ್ಮ]
ಚಾಮರಾಜನಗರ ನ್ಯಾಯಾಲಯ ಹಾಗೂ ಕರಿನಂಜನಪುರ ರಸ್ತೆಯಲ್ಲಿ ಮಹೇಶ್ ಗ್ಯಾಸ್ ಸರ್ವೀಸ್ ನ ಭಾರತ್ ಗ್ಯಾಸ್ ಸಿಲಿಂಡರ್ ಗೋದಾಮಿನಲ್ಲಿ ಸರ್ಕಾರಿ ಶಾಲೆಗಳಿಗೆ ಅಕ್ಷರ ದಾಸೋಹದ ಅಡುಗೆಗೆ ಕಳುಹಿಸಬೇಕಾಗಿದ್ದ 100ಕ್ಕೂ ಹೆಚ್ಚು ತುಂಬಿದ್ದ ಸಿಲಿಂಡರ್ ಗಳನ್ನು ಶೇಖರಿಸಿಡಲಾಗಿತ್ತು.
ಗುರುವಾರ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದ್ದರಿಂದ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಗೋದಾಮಿನಲ್ಲಿದ್ದ ಖಾಲಿ ಮತ್ತು ತುಂಬಿದ್ದ ಸಿಲಿಂಡರ್ಗಳು ಬೇರೆಡೆಗೆ ಸ್ಥಳಾಂತರ ಮಾಡಲಾಯಿತು. ಅಗ್ನಿ ಅವಘಡದಲ್ಲಿ ಗೋದಾಮಿನಲ್ಲಿ ಸಂಗ್ರಹಿಟ್ಟಿದ್ದ ಹೊಸ ಸ್ಟೌವ್ ಗಳು ನಾಶವಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ ಎನ್ನಲಾಗಿದೆ.