ಚಾಮರಾಜನಗರದಲ್ಲಿ ಶಿಷ್ಯನ ವಿರುದ್ಧ ರೋಚಕ ಗೆಲುವು ಕಂಡ ಶ್ರೀನಿವಾಸಪ್ರಸಾದ್
Recommended Video
ಚಾಮರಾಜನಗರ, ಮೇ 23: ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ವಿ. ಶ್ರೀನಿವಾಸ್ ಪ್ರಸಾದ್ ಅಚ್ಚರಿಯ ಗೆಲುವು ಸಾಧಿಸಿದ್ದಾರೆ.
ಚುನಾವಣೆ ಫಲಿತಾಂಶ 2019: ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕಾಂಗ್ರೆಸ್ನ ಆರ್. ಧ್ರುವನಾರಾಯಣ್ ಎದುರು ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ರೋಚಕ ರೀತಿಯಲ್ಲಿ ಮುನ್ನಡೆ ಪಡೆದುಕೊಂಡಿದ್ದರು. ಅಂತಿಮ ಚುನಾವಣಾ ಫಲಿತಾಂಶದ ಬಳಿಕ ಅವರು 1,806 ಮತಗಳ ಅಂತರದಿಂದ ಶ್ರೀನಿವಾಸ್ ಪ್ರಸಾದ್ ಗೆಲುವು ಸಾಧಿಸಿದ್ದಾರೆ. ಚಾಮರಾಜನಗರ ಲೋಕಸಭೆ ಇತಿಹಾಸದಲ್ಲಿಯೇ ಬಿಜೆಪಿಗೆ ಇದು ಮೊದಲ ಗೆಲುವಾಗಿದೆ.
ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಧ್ರುವನಾರಾಯಣ್ ಗೆದ್ದೇಬಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ, 20ನೇ ಸುತ್ತಿನ ವೇಳೆಗೆ ಫಲಿತಾಂಶಕ್ಕೆ ರೋಚಕ ತಿರುವು ಸಿಕ್ಕಿತು. ಅಲ್ಲಿಯವರೆಗೂ ಹಿನ್ನಡೆ ಅನುಭವಿಸಿದ್ದ ಬಿಜೆಪಿಯ ವಿ. ಶ್ರೀನಿವಾಸ ಪ್ರಸಾದ್, ಮುನ್ನಡೆ ಸಾಧಿಸಿದ್ದರು.
ಹೌ ಈಸ್ ದಿ ಜೋಶ್?: ಗೆಲುವಿನ ಖುಷಿಯಲ್ಲಿ ಬೀಗಿದ ಬಿಜೆಪಿ
ಅದರಲ್ಲಿಯೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಆಪ್ತರ ಬಳಗದ ಅಭ್ಯರ್ಥಿಗಳೆಲ್ಲರೂ ಸೋಲು ಕಂಡಿದ್ದರು. ಚಾಮರಾಜನಗರದಲ್ಲಿ ಆರ್. ಧ್ರುವನಾರಾಯಣ್ ಗೆಲುವು ಸಾಧಿಸುವ ನಿರೀಕ್ಷೆಯಿತ್ತು. ಮೀಸಲು ಕ್ಷೇತ್ರವಾದ ಚಾಮರಾಜನಗರದಲ್ಲಿ ಕಾಂಗ್ರೆಸ್ನ ಆರ್. ಧ್ರುವನಾರಾಯಣ್, ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ವಿರುದ್ಧ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಲೆಕ್ಕಾಚಾರಗಳು ತಲೆಕೆಳಗಾಗಿವೆ.
2009 ಮತ್ತು 2014ರ ಚುನಾವಣೆಗಳಲ್ಲಿ ಧ್ರುವನಾರಾಯಣ್ ಗೆದ್ದು ಸಂಸತ್ ಪ್ರವೇಶಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಆರ್. ಧ್ರುವನಾರಾಯಣ್ 5,67,782 ಮತಗಳನ್ನು ಪಡೆದಿದ್ದರೆ, ಅವರ ಎದುರಾಳಿ ಬಿಜೆಪಿಯ ಎ.ಆರ್. ಕೃಷ್ಣಮೂರ್ತಿ 4,26,600 ಮತಗಳನ್ನು ಪಡೆದುಕೊಂಡಿದ್ದರು.
ಗೆಲುವಿಗೆ ನೆರವಾಗಿದ್ದು ಬಿಎಸ್ಪಿ ಅಭ್ಯರ್ಥಿ
ಶ್ರೀನಿವಾಸ್ ಪ್ರಸಾದ್ ಅವರು ಕೊನೆಯ ಹಂತದಲ್ಲಿ ರೋಚಕ ಗೆಲುವು ಸಾಧಿಸಲು ಕಾರಣವಾಗಿದ್ದು ಬಿಎಸ್ಪಿ ಅಭ್ಯರ್ಥಿ ಡಾ. ಶಿವಕುಮಾರ್. ಬಹುಜನ ಸಮಾಜಪಕ್ಷದ ಅಭ್ಯರ್ಥಿ ಶಿವಕುಮಾರ್ ಅವರು 86 ಸಾವಿರ ಮತ ಪಡೆದಿದ್ದಾರೆ. ಇದರಿಂದ ಕಾಂಗ್ರೆಸ್ಗೆ ಬೀಳಬಹುದಾಗಿದ್ದ ಅಲ್ಪಸಂಖ್ಯಾತರು, ದಲಿತರ ಮತಗಳು ಬಿಎಸ್ಪಿ ಪಾಲಾಗಿದೆ. ಇದು ಶ್ರೀನಿವಾಸ್ ಪ್ರಸಾದ್ ಅವರ ಗೆಲುವಿಗೆ ಕಾರಣವಾಗಿದೆ.
ಕಾಂಗ್ರೆಸ್ ನ ಗಾಂಧಿ ಕುಟುಂಬದಿಂದ ನಾಯಕತ್ವ ಹೊರಬರಲು ಸೂಕ್ತ ಕಾಲ!; ಇವೆಲ್ಲ ಜನರೇ ಹೇಳಿದ ಪಾಠಗಳು
ಜೆಡಿಎಸ್ ತೊರೆದಿದ್ದ ಬಿಎಸ್ಪಿ
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೂಡಿ ಸ್ಪರ್ಧಿಸಿದ್ದ ಬಿಎಸ್ಪಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಕೊಳ್ಳೇಗಾಲ ಶಾಸಕ ಮಹೇಶ್ ರಾಜ್ಯ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಆದರೆ, ಬಿಎಸ್ಪಿ ನಾಯಕಿ ಮಾಯಾವತಿ, ಜೆಡಿಎಸ್ಗೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡಿದ್ದರು. ಇದರಿಂದ ಮಹೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿ ಮೈತ್ರಿ ಮಾಡಿಕೊಳ್ಳದೆ ಸ್ಪರ್ಧಿಸಿತ್ತು.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಶಿಷ್ಯನಿಗೆ ಗುರು ತಿರುಮಂತ್ರ
ರಾಜಕೀಯ ಜೀವನದಲ್ಲಿ ಶ್ರೀನಿವಾಸ ಪ್ರಸಾದ್ ಮತ್ತು ಆರ್. ಧ್ರುವನಾರಾಯಣ್ ಗುರು ಶಿಷ್ಯರು. ಮೈಸೂರಿನಲ್ಲಿ ನೆಲೆಸಿದ್ದರೂ ಶ್ರೀನಿವಾಸ ಪ್ರಸಾದ್ ಅವರು ಚಾಮರಾಜನಗರದಲ್ಲಿ ಐದು ಬಾರಿ ಗೆಲುವು ಕಂಡಿದ್ದಾರೆ. ಕ್ಷೇತ್ರದ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಇದೆ. ಚಾಮರಾಜನಗರದ ಅಭ್ಯರ್ಥಿಯನ್ನಾಗಿ ಬಿಜೆಪಿ ಕೊನೆಯ ಹಂತದಲ್ಲಿ ಅವರನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸಿತ್ತು. 20 ವರ್ಷಗಳ ಬಳಿಕ ವಿ.ಶ್ರೀನಿವಾಸ ಪ್ರಸಾದ್ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. 1984, 1989, 1991, 1999ರಲ್ಲಿ ಸಂಸದರಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಬಿಜೆಪಿಯಿಂದ ಚಾಮರಾಜನಗರದಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದರು.
ಖಾತೆ ತೆರೆದ ಬಿಜೆಪಿ
ಚಾಮರಾಜನಗರ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಬಿಜೆಪಿಗೆ ಇದು ಮೊದಲ ಗೆಲುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಅಷ್ಟೇನೂ ಗಮನಾರ್ಹ ಸಾಧನೆ ಮಾಡಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗುಂಡ್ಲುಪೇಟೆಯಲ್ಲಿ ಮಾತ್ರ ಬಿಜೆಪಿ ಗೆಲುವು ಕಂಡಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ನ ಅಬೇಧ್ಯ ಕೋಟೆಯಂತಿದ್ದ ಚಾಮರಾಜನಗರಕ್ಕೆ ಬಿಜೆಪಿ ಈ ಮೂಲಕ ಲಗ್ಗೆ ಇಟ್ಟಿದೆ. ಹಿಂದಿನ 14 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್ ಗೆದ್ದಿದೆ. 4 ಬಾರಿ ಜನತಾ ಪರಿವಾರದ ಅಭ್ಯರ್ಥಿ ಗೆದ್ದಿದ್ದಾರೆ. ಈ ಬಾರಿ ಬಿಜೆಪಿ ಕೊನೆಗೂ ಖಾತೆ ತೆರೆದಿದೆ.