ನಾಯಿ ಬೇಟೆಯಾಡಲು ಸರಗೂರಿನಲ್ಲಿ ಮನೆಗೆ ನುಗ್ಗಿದ ಚಿರತೆ
ಚಾಮರಾಜನಗರ ಜಿಲ್ಲೆಯ ಸರಗೂರಿನಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ನಾಯಿಯನ್ನು ಬೇಟೆಯಾಡಲು ಯತ್ನಿಸಿದೆ. ಇದೀಗ ಸರಗೂರಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಚಿರತೆ ಸೆರೆಗೆ ಸ್ಥಳೀಯರು ಆಗ್ರಹಿಸಿದ್ದಾರೆ
ಸರಗೂರು, ಏಪ್ರಿಲ್ 24: ಇದುವರೆಗೆ ಕಾಡಿನಂಚಿನ ಜನರಿಗೆ ಕಾಟ ಕೊಡುತ್ತಿದ್ದ ಚಿರತೆ ಪಟ್ಟಣದತ್ತ ಆಹಾರ ಅರಸಿಕೊಂಡು ಬರತೊಡಗಿದ್ದು, ಸಾಕುನಾಯಿಗಳ ಮೇಲೆ ದಾಳಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಸರಗೂರಿನ ಮನೆಯೊಳಗೆ ನುಗ್ಗಿದ ಚಿರತೆ ಮನೆಯಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಕಚ್ಚಿ ಗಾಯಗೊಳಿಸಿದ್ದು, ನಾಯಿಯ ಅರಚಾಟಕ್ಕೆ ಮನೆಯವರು ಬೊಬ್ಬೆ ಹಾಕುತ್ತಾ ಮನೆಯಿಂದ ಬಂದಿದ್ದರಿಂದ ಹೆದರಿದ ಚಿರತೆ ಓಡಿಹೋಗಿದೆ. ಇದರಿಂದ ಪಟ್ಟಣದ ಜನರು ಆತಂಕಗೊಂಡಿದ್ದಾರೆ.[ದಾವಣಗೆರೆ: ಮೇಕೆ ಮರಿ ಹಿಡಿದ ಚಿರತೆಯನ್ನು ಜೀವಂತವಾಗಿ ಸುಟ್ಟರು]
ಬಸ್ ನಿಲ್ದಾಣ ಸಮೀಪದ ಚರ್ಚ್ ಬಳಿಯಿರುವ ಶಿವಶಂಕರ್ ಎಂಬುವರ ಮನೆಯಲ್ಲಿ ಸುಮಾರು 15 ಸಾವಿರ ರುಪಾಯಿಗೂ ಹೆಚ್ಚು ಬೆಲೆಯುಳ್ಳ ಮುಧೋಳ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಇದನ್ನು ದೂರದಿಂದಲೇ ಕಂಡ ಚಿರತೆ ನಾಯಿಯನ್ನು ತಿನ್ನಲು ಯತ್ನಿಸಿ, ನಾಯಿಯ ಕತ್ತಿಗೆ ಬಲವಾಗಿ ಕಚ್ಚಿದೆ.
ಈ ವೇಳೆ ನಾಯಿ ಅರಚತೊಡಗಿದೆ. ಆಗ ಮನೆಯ ಮಾಲೀಕ ಮನೆಯೊಳಗಿನಿಂದ ಬೊಬ್ಬೆ ಹಾಕುತ್ತಾ ಹೊರಬಂದಿದ್ದು, ಆಗ ಹೆದರಿದ ಸುಮಾರು 4 ಅಡಿ ಎತ್ತರದ ಚಿರತೆ ಮನೆಯ ತಡೆಗೋಡೆ ಹಾರಿ ಓಡಿಹೋಗಿದೆ.[ಅಂತೂ ಇಂತೂ ಉಡುಪಿಯ ಚಿರತೆ ಬೋನಿಗೆ ಬಿತ್ತು!]
ಈ ಸಂಬಂಧ ಅರಣ್ಯ ಇಲಾಖೆಯವರ ಗಮನಕ್ಕೆ ತರಲಾಗಿದ್ದ, ಸರಕಾರಿ ಪಶು ಚಿಕಿತ್ಸಾಲಯದ ಸಿಬ್ಬಂದಿ ರಫೀಕ್, ದೊಳಪ್ಪ ಎಂಬುವರು ನಾಯಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಪಟ್ಟಣದೊಳಗೆ ಚಿರತೆ ಬಂದಿರುವ ವಿಚಾರ ತಿಳಿದ ಜನ ಭಯಗೊಂಡಿದ್ದು, ಅರಣ್ಯ ಇಲಾಖೆ ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.