ಬಂಡಳ್ಳಿ ಗ್ರಾಮ ಪಂಚಾಯಿತಿ ಬಲೇ ಗಲೀಜು ಕಣ್ರೀ..!
ಚಾಮರಾಜನಗರ, ಸೆಪ್ಟೆಂಬರ್ 16: ಈಗಾಗಲೇ ಡೆಂಗ್ಯು ಮತ್ತು ಚಿಕೂನ್ ಗುನ್ಯಾದಂತಹ ರೋಗಗಳು ಹರಡುತ್ತಿದ್ದರೂ ಸ್ವಚ್ಛತೆಗೆ ಗಮನಹರಿಸದೆ ಕೊಳ್ಳೇಗಾಲ ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿ ಮೌನಕ್ಕೆ ಜಾರಿದ್ದು, ಪರಿಣಾಮ ಗ್ರಾಮ ಪಂಚಾಯಿತಿ ಕಾರ್ಯಾಲಯದ ಸುತ್ತಮುತ್ತಲೇ ಅಶುಚಿತ್ವ ತಾಂಡವಾಡುತ್ತಿದೆ.
ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗವೇ ಇರುವ ನೀರಿನ ತೊಂಬೆಯ ಮುಚ್ಚಳಿಕೆ ಹಾರಿ ಹೋಗಿ, ಅದ್ಯಾವ ಕಾಲವಾಗಿದೆಯೋ! ಅತ್ತ ಗಮನಹರಿಸಿ ಮುಚ್ಚಳ ಮುಚ್ಚದ ಕಾರಣ ನೀರಿಗೆ ದೂಳು, ಕಸ- ಕಡ್ಡಿ ಬಿದ್ದು ಕೊಳೆಯುತ್ತಿದೆ. ಅದೇ ನೀರನ್ನು ನಾಗರಿಕರು ಕುಡಿಯುವಂತಾಗಿದೆ. ಹೀಗಿದ್ದರೂ ಜನಪ್ರತಿನಿಧಿಗಳು ತಮಗೇನೂ ಗೊತ್ತೇ ಇಲ್ಲ ಎಂಬಂತೆ ಇದ್ದಾರೆ.[ಬಂಡೀಪುರ ಅರಣ್ಯಕ್ಕೆ ಲಂಟಾನ ಕಾಟ, ಪ್ರಾಣಿಗಳ ಪಾಡು ಕೇಳೋರ್ಯಾರು?]

ಇನ್ನು ಗ್ರಾಮ ಪಂಚಾಯಿತಿ ಕಾರ್ಯಾಲಯದ ಅಕ್ಕ- ಪಕ್ಕ ಮತ್ತು ಮುಂಭಾಗದಲ್ಲಿರುವ ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಅವುಗಳನ್ನು ತೆರವುಗೊಳಿಸದ ಕಾರಣ ತ್ಯಾಜ್ಯ ನೀರು ಹರಿಯದೆ ಗಬ್ಬೆದ್ದು ನಾರುತ್ತಿದೆ. ಇಡೀ ವಾತಾವರಣವೇ ಅಸಹ್ಯ ಎನಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಶುಚಿಗೊಳಿಸದಿರುವುದು ಅಚ್ಚರಿ ಮೂಡಿಸಿದೆ.

ಇನ್ನು ಪ್ರಯಾಣಿಕರಿಗಾಗಿ ನಿರ್ಮಿಸಿರುವ ತಂಗುದಾಣದ ಸ್ಥಿತಿಯಂತೂ ಹೇಳತೀರದಾಗಿದೆ. ಇಲ್ಲಿ ಕೆಲವರು ಮದ್ಯಪಾನ, ಧೂಮಪಾನ ಮಾಡಿ ಬಾಟಲಿ ಹಾಗೂ ಸಿಗರೇಟು ತುಂಡುಗಳನ್ನು ಎಸೆಯುತ್ತಿರುವುದರಿಂದ ದುರ್ವಾಸನೆ ಬರುತ್ತಿದೆ. ತಂಗುದಾಣದಲ್ಲಿ ಕೂರಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.[ಅರಣ್ಯ ಅಧಿಕಾರಿಗಳಿಂದಲೇ ವಾಹನಶೆಡ್ ಗೆ ಕಾಡುಮರ ಬಳಕೆ!]

ಒಟ್ಟಾರೆ ಹೇಳಬೇಕೆಂದರೆ ಬಂಡಳ್ಳಿ ಗ್ರಾಮವು ರೋಗ- ರುಜಿನಗಳ ತಾಣವಾಗಿದೆ. ಸೊಳ್ಳೆಗಳ ಆವಾಸ ತಾಣವಾಗಿದೆ. ದೇಶದಾದ್ಯಂತ ಸ್ವಚ್ಛತಾ ಆಂದೋಲನ ನಡೆಯುತ್ತಿದ್ದರೆ, ಇಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಗ್ರಾಮ ಪಂಚಾಯಿತಿ ತುರ್ತಾಗಿ ಗಮನಹರಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನಾದರೂ ಇತ್ತ ಗಮನಹರಿಸಬಹುದೇ ಎಂದು ಕಾದು ನೋಡಬೇಕಿದೆ.












Click it and Unblock the Notifications