ಗುಂಡ್ಲುಪೇಟೆ: ಮೈಸೂರು-ಊಟಿ ಹೆದ್ದಾರಿಯಲ್ಲಿ ಅಕ್ರಮವಾಗಿ ಕೊಡಗು ವೈನ್ ಮಾರಾಟ, ಆರೋಪಿ ಬಂಧನ
ಚಾಮರಾಜನಗರ, ಮಾರ್ಚ್, 18: ಅಕ್ರಮವಾಗಿ ಕೊಡಗು ವೈನ್ ಮಾರಾಟ ಮಾಡುತ್ತಿದ್ಧ ಮಾಲು ಸಹಿತ ಆರೋಪಿಯನ್ನು ಬಂಧಿಸಿರುವ ಘಟನೆ ಮೈಸೂರು-ಊಟಿ ಹೆದ್ದಾರಿ ಹಾದು ಹೋಗುವ ಗುಂಡ್ಲುಪೇಟೆ ರಸ್ತೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು ನಿವಾಸಿ ದಿನೇಶ್ ನಾಯ್ಡು ಬಂಧಿತ ಆರೋಪಿ. ಯಾವುದೇ ಪರವಾನಗಿ ಪಡೆಯದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳಿಗೆ ತೆರೆದು ಕೊಡಗು ವೈನ್ ಹಾಗೂ ಸಾಂಬಾರ ಪದಾರ್ಥ ಮಾರಾಟ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿ 750 ಮಿಲಿ ಲೀಟರ್ನ 380 ಬಾಟಲಿಗಳು ಸೇರಿ ಒಟ್ಟು 285 ಲೀಟರ್ ವೈನ್ (ಒಟ್ಟು ಮೌಲ್ಯ ₹3,04,000) ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿಯನ್ನು ನ್ಯಾಯಾಂಗಕ್ಕೆ ಒಪ್ಪಿಸಿ ಅಬಕಾರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
2 ಕ್ವಿಂಟಲ್ ಬೆಳ್ಳುಳ್ಳಿ ಕಳವು: ಕೆ.ಜಿ. ಬೆಳ್ಳುಳ್ಳಿ ದರ ಕೆಲವು ದಿನಗಳ ಹಿಂದೆಯಷ್ಟೇ 500-600 ರೂಪಾಯಿವರೆಗೂ ತಲುಪಿತ್ತು. ಇದೀಗ ತುಸು ಇಳಿಕೆಯಾಗಿದೆ. ಆದರೂ ಮತ್ತೆ ಬೆಲೆ ದುಪ್ಪಟ್ಟಾಗಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿತ್ತು. ಇಂತಹ ಸಮಯದಲ್ಲಿ ಬೆಳೆ ಉಳಿಸಿಕೊಳ್ಳುವುದೇ ಬೆಳೆಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಬರಗಾಲದಲ್ಲೂ ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಎರೆ ಹೊಸಳ್ಳಿ ಗ್ರಾಮದ ರೈತ ಮಹಿಳೆಯೊಬ್ಬರ 80,000 ರೂಪಾಯಿ ಮಲ್ಯದ ಬೆಳ್ಳುಳ್ಳಿಯನ್ನು ದುಷ್ಕರ್ಮಿಗಳು ಕದ್ದು ಪರಾರಿಯಾದ ಘಟನೆ ಸಂಭವುಸಿದ್ದು, ಬೆಳೆಗಳನ್ನು ಉಳಿಸಿಕೊಳ್ಳುವುದೇ ಬೆಳೆಗಾರರಿಗೆ ದೊಡ್ಡ ಸವಾಲಾಗಿತ್ತು.
ಮೊದಲೆಲ್ಲ ಅಡಿಕೆ, ತೆಂಗಿನಕಾಯಿಯನ್ನು ಕಳ್ಳತನ ಮಾಡುತ್ತಿದ್ದರು. ಇತ್ತೀಚೆಗಷ್ಟೇ ದರ ಏರಿಕೆ ಹಿನ್ನೆಲೆ ಬೆಳ್ಳುಳ್ಳಿಯನ್ನು ದುಷ್ಕರ್ಮಿಗಳು ಕಳ್ಳತನ ಮಾಡಲು ಆರಂಭಿಸಿದ್ದರು. ಹೊಸಳ್ಳಿ ಗ್ರಾಮದ ಚಂದ್ರಮ್ಮ ಎರಡು ಹೆಕ್ಟೇರ್ ಜಮೀನಿನಲ್ಲಿ ಗುತ್ತಿಗೆ ಪಡೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳ್ಳುಳ್ಳಿ ಬೆಳೆಯನ್ನು ಬೆಳೆದಿದ್ದರು.
ಯಾರೋ ದುಷ್ಕರ್ಮಿಗಳು ರಾತ್ರೋರಾತ್ರಿ 80,000 ರೂಪಾಯಿ ಮೌಲ್ಯದ 2 ಕ್ವಿಂಟಲ್ ತೂಕದ ಬೆಳ್ಳುಳ್ಳಿಯನ್ನು ಎಗರಿಸಿದ್ದರು. ಇನ್ನು ಈ ಘಟನೆ ಗ್ರಾಮದಲ್ಲಿ ಜಾತ್ರೆಯ ಸಮಯದಲ್ಲಿ ನಡೆದಿದೆ ಎಂದು ತಿಳಿದುಬಂದಿತ್ತು.












Click it and Unblock the Notifications