ಕನ್ನಡ ರಾಜ್ಯೋತ್ಸವ 2024: ಚಾಮರಾಜನಗರದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ
ಚಾಮರಾಜನಗರ, ನವೆಂಬರ್, 01: ಇಂದು (ನವೆಂಬರ್ 01) ಕರುನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಹಾಗೆಯೇ ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣಗೊಂಡು 50 ವರ್ಷ ಪೂರ್ಣಗೊಂಡಿದ್ದು ಹಾಗೂ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಹಿನ್ನೆಲೆ ಚಾಮರಾಜನಗರದಲ್ಲಿ ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ ಮಾಡಲಾಯಿತು.
ಚಾಮರಾಜನಗರದ ವರನಟ ಡಾ.ರಾಜ್ಕುಮಾರ್ ರಂಗಮಂದಿರ ಮುಂಭಾಗ ಶುಕ್ರವಾರ (ನವೆಂಬರ್ 01) ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಅನಾವರಣ ಮಾಡಿದರು.

ಕನ್ನಡದ ಮೊದಲ ಶಿಲಾ ಶಾಸನವಾದ 'ಹಲ್ಮಿಡಿ ಶಾಸನ'ದ ಕಲ್ಲಿನ ಪ್ರತಿಕೃತಿ ರಚಿಸಲಾಗಿದೆ. ಹಲ್ಮಿಡಿ ಶಾಸನವು ಕನ್ನಡ ಭಾಷೆಯಲ್ಲಿ ಸಿಕ್ಕಿರುವ ಅತ್ಯಂತ ಹಳೆಯ ಶಾಸನ ಆಗಿದ್ದು, ಇದರ ಕಾಲವು ಕ್ರಿ.ಶ. 450 ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಚಾಮರಾಜನಗರದಲ್ಲಿ ಧ್ವಜಾರೋಹಣ: ಇನ್ನು 69ನೇ ಕನ್ನಡ ರಾಜ್ಯೋತ್ಸವವನ್ನು ಚಾಮರಾಜನಗರ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಆಚರಿಸಲಾಯಿತು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ರಾಷ್ಟ ಹಾಗೂ ರಾಜ್ಯ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವ ನಮ್ಮೆಲ್ಲರ ನಿತ್ಯೋತ್ಸವ ಆಗಬೇಕು. ಕನ್ನಡ ಹಾಗೂ ಕರ್ನಾಟಕ ಎಂವುದು ನೆಲ, ಭಾಷೆಯಷ್ಟೇ ಅಲ್ಲದೆ, ಭಾವನೆ ಮತ್ತು ಭಾಂಧವ್ಯ ಎನಿಸಿಕೊಂಡಿದೆ ಎಂದರು. ಅಲ್ಲದೆ, ಚಾಮರಾಜನಗರವು ಕೇರಳ ಹಾಗೂ ತಮಿಳುನಾಡು ಎರಡು ರಾಜ್ಯಗಳ ಗಡಿ ಹಂಚಿಕೊಂಡರೂ ಭಾಷಾ ಸಾಮಾರಸ್ಯ ಕಾಪಾಡಿಕೊಂಡು ಬಂದಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಆಕರ್ಷಕ ಪಥ ಸಂಚಲನ: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಪೊಲೀಸ್, ಅರಣ್ಯ, ಗೃಹ ರಕ್ಷಕ ದಳ ಸೇರಿದಂತೆ ಶಾಲಾ-ಕಾಲೇಜಿನ ವಿವಿಧ ತುಕಡಿಗಳು ಆಕರ್ಷಕ ಪಥ ಸಂಚಲನ ನಡೆಸಿದ್ದು, ಈ ವೇಳೆ ಸಚಿವರಿಗೆ ಗೌರವ ವಂದನೆ ಸಲ್ಲಿಸಿದರು. ಫಥ ಸಂಚಲನದ ಬಳಿಕ ವಿವಿಧ ಕ್ಷೇತ್ರಗಳ 21 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.
ಇನ್ನು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರು ತೀರಾ ಅತ್ಯಲ್ಪ ಸಂಖ್ಯೆಯಲ್ಲಿ ಭಾಗಿಯಾಗಿದ್ದು ಕಂಡುಬಂದಿತು. ವಿವಿಧ ಕನ್ನಡಪರ ಸಂಘಟನೆಗಳು, ಸಂಸ್ಥೆಗಳು ಪ್ರತ್ಯೇಕವಾಗಿ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಕುರ್ಚಿಗಳು ಖಾಲಿ-ಖಾಲಿ ಇದ್ದವು. ಗೌರವ ವಂದನೆ ಸ್ವೀಕರಿಸುವ ವೇಳೆಯಂತು ಸಚಿವರಿಗೆ ಖಾಲಿ-ಖಾಲಿ ಕುರ್ಚಿಗಳ ದರ್ಶನವಾಯಿತು.












Click it and Unblock the Notifications