ತಾಕತ್ ಇದ್ದರೆ 15 ನಿಮಿಷ ಚೀಟಿಯಿಲ್ಲದೆ ಮಾತಾಡಲಿ : ರಾಹುಲ್ಗೆ ಮೋದಿ ಸವಾಲು
ಬೆಂಗಳೂರು, ಮೇ 01 : "ಕರ್ನಾಟಕದ ಸಾಧನೆಯನ್ನು ಯಾವುದೇ ಚೀಟಿಯಲ್ಲಿ ಬರೆದುಕೊಳ್ಳದೆ, ಯಾವುದೇ ಭಾಷೆಯಲ್ಲಿ, ಕನ್ನಡ, ಹಿಂದಿ, ಇಂಗ್ಲಿಷ್ ಅಥವಾ ತಮ್ಮ ಮಾತೆಯ ಮಾತೃ ಭಾಷೆಯಲ್ಲಿ ಕೇವಲ 15 ನಿಮಿಷ ಮಾತಾಡಿಬಿಡಲಿ. ಅವರ ಸಾಮರ್ಥ್ಯವೇನೆಂದು ಗೊತ್ತಾಗುತ್ತದೆ!"
ಹೀಗೆಂದು ವ್ಯಂಗ್ಯಭರಿತ ಭರ್ಜರಿ ಸವಾಲನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಸೆದಿದ್ದಾರೆ. ಚಾಮರಾಜನಗರದ ಸಂತೇಮಾನರಹಳ್ಳಿಯಲ್ಲಿ ಮೋದಿ ಅವರ ಭಾಷಣದುದ್ದಕ್ಕೂ ರಾಹುಲ್ ಅವರ ಸಾಮರ್ಥ್ಯವನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಮೋದಿ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ, 5 ಬಾರಿ ವಿಶ್ವೇಶ್ವರಯ್ಯ ಎನ್ನಲಿ ಸಾಕು: ಮೋದಿ
ಈ ಸವಾಲು ಎಸೆದಿದ್ದೇಕೆಂದರೆ, ಕರ್ನಾಟಕದಲ್ಲಿ ಹಲವಾರು ಕಡೆಗಳಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ ಅವರು, ಸಂಸತ್ತಿನಲ್ಲಿ ತಾವು ಕೇವಲ 15 ನಿಮಿಷ ಭಾಷಣ ಮಾಡಿದರೆ ಅವರ ಮುಂದೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನಿಂತುಕೊಳ್ಳಲು ಆಗುವುದಿಲ್ಲ ಎಂದು ವ್ಯಂಗ್ಯವಾಡಿದ್ದರು. ಈ ಸವಾಲನ್ನು ರಾಹುಲ್ ಗಾಂಧಿಯವರು ಸ್ವೀಕರಿಸಿ, ತಮ್ಮ ಸಾಮರ್ಥ್ಯ ಏನೆಂದು ಸಾಬೀತು ಮಾಡಲಿ.
ಆ ಸವಾಲಿಗೆ ಇಂದು ಭರ್ಜರಿ ಜವಾಬು ನೀಡಿರುವ ನರೇಂದ್ರ ಮೋದಿಯವರು, ನನ್ನ ಮುಂದೆ ನಿಂತು ಹದಿನೈದು ನಿಮಿಷವೂ ರಾಹುಲ್ ಅವರಿಗೆ ಮಾತನಾಡಲು ಬರುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ. ಏಕೆಂದರೆ, ವಂದೇ ಮಾತರಂ ಬಗ್ಗೆ ತಾತ್ಸಾರ ಇರುವ ಅವರಿಗೆ ದೇಶದ ಹಿರಿತನದ ಬಗ್ಗೆ, ದೇಶದ ಇತಿಹಾಸದ ಬಗ್ಗೆ, ಅವರ ಪಕ್ಷದ ನಾಯಕರ ಬಗ್ಗೆಯೇ ಗೊತ್ತಿಲ್ಲ ಎಂದು ನೇರವಾಗಿಯೇ ಚಾಟಿ ಬೀಸಿದರು.
ಕರ್ನಾಟಕದಲ್ಲಿ ಬಿಜೆಪಿ ಅಲೆ ಅಲ್ಲ, ಬಿರುಗಾಳಿ ಎದ್ದಿದೆ: ಮೋದಿ
ಕಾಂಗ್ರೆಸ್ ಅಧ್ಯಕ್ಷರು ತಮ್ಮ ಆ ಭಾಷಣದಲ್ಲಿ ಕನಿಷ್ಠ 5 ಬಾರಿ ವಿಶ್ವೇಶ್ವರಯ್ಯ ಅವರ ಹೆಸರನ್ನು ಸರಿಯಾಗಿ ಹೇಳಿಬಿಡಲಿ. ನಿಮ್ಮ ಮಾತಿನಲ್ಲಿ ಎಷ್ಟು ಧಂ ಇದೆ ಎಂದು ಆಗ ಜನ ನಿರ್ಧರಿಸುತ್ತಾರೆ ಎಂದು ಮೋದಿಯವರು ತಿವಿದರು. ಈ ಮಾತು ಪ್ರಸ್ತಾಪಿಸಿದ್ದೇಕೆಂದರೆ, ಮಂಡ್ಯದಲ್ಲಿ ಭಾಷಣ ಮಾಡುವಾದ ವಿಶ್ವೇಶ್ವರಯ್ಯ ಹೆಸರು ಹೇಳುವಾಗ ರಾಹುಲ್ ಗಾಂಧಿಯವರು ಎರಡು ಮೂರು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು.
ಮೋದಿ ಅವರ ಪ್ರತಿ ಮಾತುಗಳಿಗೆ ಭರ್ಜರಿ ಕರದಾಡನ ಬೀಳುತ್ತಿದ್ದವು. ಹಾಸ್ಯ, ವ್ಯಂಗ್ಯ, ಮೊನಚಿನ ಮಾತುಗಳಿಂದ ನರೇಂದ್ರ ಮೋದಿಯವರು ರಾಹುಲ್ ಗಾಂಧಿಯವರನ್ನು ತಿವಿಯುತ್ತಲೇ ಇದ್ದರು. ಕರ್ನಾಟಕದ ಭವಿಷ್ಯಕ್ಕಾಗಿ, ಕರ್ನಾಟಕದ ಸ್ವಾಭಿಮಾನಕ್ಕಾಗಿ, ಕರ್ನಾಟಕದ ವಿಕಸನಕ್ಕಾಗಿ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ಹಾಕಿ ಎಂದು ಮೋದಿ ಕರೆ ನೀಡಿದರು.