ಗುಂಡ್ಲುಪೇಟೆ: ಬೈಕ್ ನಲ್ಲಿ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ
ಚಾಮರಾಜನಗರ, ಮೇ 09: ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಮತದಾರರನ್ನು ಸೆಳೆಯುವ ತಂತ್ರ ಆರಂಭಗೊಂಡಿದ್ದು, ಹಣ, ಮದ್ಯ ಹಂಚುತ್ತಿರುವ ಸುದ್ದಿಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಚುನಾವಣಾಧಿಕಾರಿಗಳು ನಿಗಾವಹಿಸಿದ್ದು, ಮದ್ಯ ಹಂಚುತ್ತಿರುವ ಕಾರ್ಯಕ್ಕೆ ತಡೆಯೊಡ್ಡುತ್ತಿದ್ದಾರೆ. ಆದರೂ ಕೆಲವರು ಚುನಾವಣಾಧಿಕಾರಿಗಳ ಕಣ್ತಪ್ಪಿಸುತ್ತಿದ್ದಾರೆ. ಈ ನಡುವೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಮದ್ಯವನ್ನು ಹಂಚಿ ಮತ ಪಡೆಯುವ ಹುನ್ನಾರದಲ್ಲಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಚುನಾವಣಾಧಿಕಾರಿಗಳ ತಂಡ ಮದ್ಯವನ್ನು ವಶಪಡಿಸಿಕೊಂಡಿದೆ.
ವ್ಯಕ್ತಿಯೊಬ್ಬ ಬೈಕ್ ನಲ್ಲಿ ಮದ್ಯವನ್ನು ತಾಲೂಕಿನ ಹಂಗಳ ಗ್ರಾಮದಿಂದ ಬೊಮ್ಮಲಾಪುರದತ್ತ ಕೊಂಡೊಯ್ಯುತ್ತಿದ್ದ ಎನ್ನಲಾಗಿದ್ದು, ಈ ಸಂಬಂಧ ಮಾಹಿತಿ ಬಂದ ಹಿನ್ನಲೆಯಲ್ಲಿ ಫ್ಲೆಯಿಂಗ್ ಸ್ಕ್ವಾಡ್ ಅಧಿಕಾರಿ ಬಸವರಾಜು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ತನ್ನತ್ತ ಬರುತ್ತಿರುವುದನ್ನು ಕಂಡ ಕೂಡಲೇ ಸವಾರ ಸ್ಥಳದಲ್ಲಿ ಬೈಕ್ ಹಾಗೂ ಮದ್ಯವನ್ನು ಬಿಟ್ಟು ಪರಾರಿಯಾಗಿದ್ದಾನೆ. ಬೈಕಿನಲ್ಲಿದ್ದ ಚೀಲದಲ್ಲಿ ಬೆಂಗಳೂರು ಮೂಲದ ಡಿಸ್ಟಿಲರಿಗೆ ಸೇರಿದ 180 ಮಿಲೀ ಅಳತೆಯ 200 ಮದ್ಯದ ಪೌಚುಗಳಿದ್ದು, ಇವುಗಳನ್ನು ಅಬಕಾರಿ ಇಲಾಖೆಯ ವಶಕ್ಕೆ ನೀಡಲಾಗಿದೆ.
ನೀತಿ ಸಂಹಿತೆ: ಮುಚ್ಚಿದ ಬಾರ್ಗಳು ಸದ್ದಿಲ್ಲದೆ ಓಪನ್
ಹೊಸದಾಗಿ ಖರೀದಿಸಿದ ಈ ಪ್ಲಾಟಿನಾ ಬೈಕ್, ಇನ್ನೂ ನೋಂದಣಿಯಾಗಿಲ್ಲ! ಈ ಬೈಕ್ ಯಾರಿಗೆ ಸೇರಿದ್ದು, ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.