ಬರದಲ್ಲೂ ನೆರೆರಾಜ್ಯಕ್ಕೆ ಅಕ್ರಮ ಮೇವು ಸಾಗಾಟ
ರಾಜ್ಯ ಬರದಿಂದ ಕಂಗೆಡುತ್ತಿರುವಾಗ ಕೆಲ ಆಸೆಬುರುಕರು ಹಣಕ್ಕಾಗಿ ಮೇವನ್ನು ನೆರೆರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದಾರೆ. ಇದರಿಂದ ಜಾನುವಾರುಗಳು ಹೊಟ್ಟೆಗಿಲ್ಲದೆ ಪರಿತಪಿಸುವಂತಾಗಿದೆ.
ಚಾಮರಾಜನಗರ, ಮಾರ್ಚ್ 1: ಈಗಿನ್ನೂ ಮಾರ್ಚ್ ಆರಂಭವಾಗುತ್ತಿರುವಾಗಲೇ ರಾಜ್ಯದಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡಿದೆ. ಅದರಲ್ಲೂ ಚಾಮರಾಜನಗರದಲ್ಲಿ ನೀರು ಮತ್ತು ಮೇವಿಗಾಗಿ ಪರದಾಡುತ್ತಿರುವ ರೈತರು ತಮ್ಮ ಜಾನುವಾರುಗಳನ್ನು ಗೋಶಾಲೆಗೆ ಬಿಡುವ ಮಟ್ಟಕ್ಕೆ ಬಂದಿದ್ದಾರೆ.
ಹೀಗಿರುವಾಗ ಕರ್ನಾಟಕದಿಂದ ಹೊರಕ್ಕೆ ಅಕ್ರಮವಾಗಿ ಮೇವು ಸಾಗಾಟ ನಡೆಯುತ್ತಿರುವುದು ತೀವ್ರ ಆತಂಕವನ್ನುಂಟುಮಾಡಿದೆ.
ಹೊರ ರಾಜ್ಯಗಳಿಗೆ ಮೇವನ್ನು ಸಾಗಿಸದಂತೆ ನಿರ್ಬಂಧ ಹೇರಿದ್ದರೂ ಅಕ್ರಮವಾಗಿ ಗಡಿಯ ಚೆಕ್ಪೋಸ್ಟ್ಗಳಲ್ಲಿ ಹಣ ನೀಡಿ ಸಾಗಾಟ ಮಾಡುವ ಕಾರ್ಯ ಮಾತ್ರ ನಿರಂತರವಾಗಿ ಸಾಗುತ್ತಿದೆ. [ಬರ ತಂದ ಕರುಳು ಕತ್ತರಿಸುವಂಥ ಸನ್ನಿವೇಶ, ಅನ್ನದಾತನ ತಟ್ಟೆಯೇ ಖಾಲಿಖಾಲಿ]

ಕೇರಳಕ್ಕೆ ಅಕ್ರಮವಾಗಿ ಮೇವನ್ನು ರಾತ್ರಿ ಹೊತ್ತು ಸಾಗಿಸಲಾಗುತ್ತಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಮೇವಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಇಲ್ಲಿಂದ ಮೇವನ್ನು ಸಾಗಿಸಿ ಹಣ ಮಾಡುವ ದಂಧೆಯಲ್ಲಿ ಕೆಲವರು ನಿರತರಾಗಿದ್ದಾರೆ. ರಾತ್ರಿ ಹೊತ್ತಲ್ಲಿ ನಡೆಯುವ ಈ ದಂಧೆಯಲ್ಲಿ ಹಲವರು ಕೈಜೋಡಿಸುತ್ತಿರುವುದು ಕಂಡು ಬಂದಿದೆ.
ಚಾಮರಾಜನಗರದಲ್ಲಿ ಹಲವೆಡೆ ರೈತರ ಅನುಕೂಲಕ್ಕಾಗಿ ಗೋಶಾಲೆಗಳನ್ನು ತೆರೆಯಲಾಗಿದ್ದು, ಅಲ್ಲಿಯೇ ಮೇವಿನ ಕೊರತೆ ಕಾಣುತ್ತಿದೆ. ಹೀಗಿರುವಾಗ ಇಲ್ಲಿಂದ ಹೊರ ರಾಜ್ಯಗಳಿಗೆ ಮೇವನ್ನು ಸಾಗಾಟ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. [ಎಚ್ಚರಾ! ಎಚ್ಚರಾ! ಬೆಂಗಳೂರಿನಲ್ಲಿ ಬಿಸಿಗಾಳಿ ಚುರುಗುಟ್ಟಲಿದೆ]
ಇಲ್ಲಿರುವ ಗೋಶಾಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಜಾನುವಾರುಗಳಿದ್ದು ಪ್ರತಿದಿನವೂ ೫ ಟನ್ ಮೇವಿನ ಅಗತ್ಯವಿದೆ. ಉಳಿದಂತೆ ತಮ್ಮ ಮನೆಗಳಲ್ಲೇ ಸಾಕುತ್ತಿರುವ ಜಾನುವಾರುಗಳಿಗೆ ಮೇವು ಸಿಗದ ಕಾರಣ ಮಂಡ್ಯ ಮತ್ತು ಮೈಸೂರು ಕಡೆಗಳಿಂದ ಮೇವನ್ನು ಸಂಗ್ರಹಿಸಿ ರೈತರು ತರುತ್ತಿದ್ದಾರೆ. ಇದೆಲ್ಲದರ ನಡುವೆ ಇಲ್ಲಿಂದ ಹೊರರಾಜ್ಯಗಳಿಗೆ ಮೇವು ಸಾಗಾಟ ಮಾಡುತ್ತಿರುವುದು ಮಾತ್ರ ಅಚ್ಚರಿಗೆ ಕಾರಣವಾಗಿದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನಹರಿಸಿ ಅಕ್ರಮ ಮೇವು ಸಾಗಾಟಕ್ಕೆ ಅಂತ್ಯ ಹಾಡಬೇಕಿದೆ.












Click it and Unblock the Notifications