ಅರಣ್ಯ ಇಲಾಖೆಗೆ ಸೆಡ್ಡು ಹೊಡೆದು ಬಂಡೀಪುರ ವ್ಯಾಪ್ತಿಯಲ್ಲಿ ರೆಸಾರ್ಟ್?
ಬಂಡೀಪುರ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿಯನ್ನು ಪಡೆದುಕೊಳ್ಳದೆ, ಅಕ್ರಮವಾಗಿ ರಸ್ತೆ ಹಾಗೂ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.
ಚಾಮರಾಜನಗರ, ಡಿಸೆಂಬರ್ 8: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯಲ್ಲಿ ವಸತಿ ಯೋಜನೆ ಫಲಾನುಭವಿಗಳು ಮನೆಗಳನ್ನು ಕಟ್ಟಿಕೊಳ್ಳಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು ಎಂಬ ನಿಯಮವಿದೆ. ಹೀಗಿರುವಾಗ ಕುಂದಕೆರೆ ವಲಯದ ಅಂಚಿನಲ್ಲಿ ಪ್ರಭಾವಿಯೊಬ್ಬರು ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿಯನ್ನು ಪಡೆದುಕೊಳ್ಳದೆ, ಅಕ್ರಮವಾಗಿ ರಸ್ತೆ ಹಾಗೂ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
ಸಾದ್ ಬಿನ್ ಜಂಗ್ ಎಂಬುವರು ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ವ್ಯಕ್ತಿ. ಇವರು ಪ್ರಭಾವಿಗಳು ಎನ್ನಲಾಗುತ್ತಿದ್ದು, ಸ್ಥಳೀಯರಿಗೂ ಇವರ ಪೂರ್ವಾಪರ ತಿಳಿದಿಲ್ಲ.[ಹುಲಿ ಗಣತಿಗಾಗಿ ಬಂಡೀಪುರದಲ್ಲಿ 670 ಕ್ಯಾಮೆರಾ ಅಳವಡಿಕೆ]

ಕುಂದಕೆರೆ ವಲಯದ ಅಂಚಿನಲ್ಲಿ 5 ಎಕರೆ ಜಮೀನು ಖರೀದಿಸಿ, 2014ರಲ್ಲಿ 2 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಿಸಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಂಡಿದ್ದರು. ನಂತರದ ದಿನಗಳಲ್ಲಿ ಈ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ ಹಾಗೂ ನಿಗದಿತ ಕಾಲಮಿತಿಯಲ್ಲಿ ಕಟ್ಟಡ ನಿರ್ಮಾಣ ಮಾಡದ ಕಾರಣಕ್ಕೆ ಅರಣ್ಯ ಇಲಾಖೆಯು ಅನುಮತಿ ನಿರಾಕರಿಸಿ, ಕಾಮಗಾರಿ ನಡೆಸದಂತೆ ಸೂಚಿಸಿತ್ತು.
ಹೀಗಾಗಿ ಇವರು ಮತ್ತೊಮ್ಮೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ 20 ಗುಂಟೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಹುದೇ ಎಂದು ಅರಣ್ಯಾಧಿಕಾರಿ ಕಚೇರಿಗೆ ನವೆಂಬರ್ 27ರಂದು ಪತ್ರ ಬರೆಯಲಾಗಿತ್ತು. ಆದರೆ ಇದಕ್ಕೆ ಅರಣ್ಯ ಇಲಾಖೆ ಆಕ್ಷೇಪಣೆ ಸಲ್ಲಿಸಿತ್ತು.[ಇನ್ನೂ ಬೇಸಿಗೆ ದೂರವಿದೆ, ಕಾಡಿನಲ್ಲಿ ನೀರಿಲ್ಲ, ಪ್ರಾಣಿಗಳಿಗೆ ಮೇವಿಲ್ಲ]

ಇನ್ನು ಸ್ಥಳೀಯ ಗ್ರಾಮ ಪಂಚಾಯಿತಿ, ಪರಿಸರ ಇಲಾಖೆ ಮುಂತಾದ ಯಾವುದೇ ಸಕ್ಷಮ ಪ್ರಾಧಿಕಾರಗಳ ಅನುಮತಿಯನ್ನು ಪಡೆಯದೆ ಕಟ್ಟಡ ನಿರ್ಮಾಣ ನಡೆಯುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಸದ್ಯ ಚೆನ್ನಿಕಟ್ಟೆ ಹಾಡಿಯಿಂದ 5 ಕಿಲೋ ಮೀಟರ್ ದೂರದಲ್ಲಿ ಎತ್ತರದ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.[ಬಂಡೀಪುರ ಅರಣ್ಯಕ್ಕೆ ಲಂಟಾನ ಕಾಟ, ಪ್ರಾಣಿಗಳ ಪಾಡು ಕೇಳೋರ್ಯಾರು?]
ಅಲ್ಲಿಗೆ ತೆರಳಲು ರಸ್ತೆ ಮಾಡುವ ಕಾರ್ಯವೂ ನಡೆಯುತ್ತಿದೆ. ಸಂಬಂಧಿಸಿದವರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದರ ಬಗ್ಗೆ ಜನ ಕಾದು ನೋಡುತ್ತಿದ್ದಾರೆ.












Click it and Unblock the Notifications