ಗುಂಡ್ಲುಪೇಟೆ ಶಾಲೆ ಕಟ್ಟಡ ಉದ್ಘಾಟನೆ ಮುನ್ನವೇ ಕುಡುಕರಿಗೆ ಅರ್ಪಣೆ!
ಚಾಮರಾಜನಗರ, ಜನವರಿ 17: ಗ್ರಾಮಪಂಚಾಯಿತಿ ಮತ್ತು ಗುತ್ತಿಗೆ ಪಡೆದ ಸಂಸ್ಥೆಯ ನಡುವಿನ ತಿಕ್ಕಾಟದಿಂದ ಪ್ರೌಢಶಾಲೆಯ ಕಟ್ಟಡ ಕಾಮಗಾರಿ ಮುಗಿದರೂ ಶಿಕ್ಷಣ ಇಲಾಖೆಗೆ ಹಸ್ತಾಂತರಿಸದ ಕಾರಣ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದ ಕಟ್ಟಡವೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಅಣ್ಣೂರುಕೇರಿಯ ಉನ್ನತೀಕರಿಸಿದ ಪ್ರೌಢಶಾಲೆಯ ಕಟ್ಟಡ ಮಕ್ಕಳ ಶಿಕ್ಷಣಕ್ಕೆ ಉಪಯೋಗಬೇಕಾಗಿತ್ತಾದರೂ ಪುಂಡ ಪೋಕರಿಗಳ, ಮದ್ಯವ್ಯಸನಿಗಳಿಗೆ ಅಡ್ಡೆಯಾಗಿ ಮಾರ್ಪಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಪಂನ ನಿರ್ಲಕ್ಷ್ಯ ಗುತ್ತಿಗೆದಾರ ಹಠಮಾರಿತನ ಕಾಮಗಾರಿ ಮುಕ್ತಾಯವಾಗಿದ್ದರೂ ಶಿಕ್ಷಣ ಇಲಾಖೆಯ ಉಪಯೋಗಕ್ಕೆ ಬಾರದೆ ಕಟ್ಟಡ ಹಾಳಾಗುತ್ತಿದೆ. ಇಷ್ಟರಲ್ಲೇ ನೂತನ ಕಟ್ಟಡ ಶಿಕ್ಷಣ ಇಲಾಖೆಯ ಬಳಕೆಗೆ ಸಿಗಬೇಕಿತ್ತು. ಆದರೆ ಪಂಚಾಯಿತಿ ಮಾಡಿದ ಎಡವಟ್ಟು ಇದೀಗ ಗುತ್ತಿಗೆ ಪಡೆದ ಸಂಸ್ಥೆ ಕಟ್ಟಡವನ್ನು ನೀಡದೆ ಸತಾಯಿಸುವಂತೆ ಮಾಡಿದೆ.[ಮಣಗಳ್ಳಿ ಜನಕ್ಕೆ ಬರ ಬಂದಾಗ ಬಾವಿ ನೆನಪಾಯಿತು!]
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಸುಮಾರು ರು 65.30 ಲಕ್ಷ ವೆಚ್ಚದಲ್ಲಿ ನೂತನ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ. ಗ್ರಂಥಾಲಯ, ಪ್ರಯೋಗಶಾಲೆ, ಸಭಾಂಗಣ, ಕ್ರೀಡಾ ಕೊಠಡಿ ಸೇರಿದಂತೆ 24 ಕೊಠಡಿಗಳು, ಪ್ರತ್ಯೇಕ ಅಡುಗೆ ಮನೆ, ಕೊಳವೆ ಬಾವಿ ಹಾಗೂ ಶೌಚಾಲಯ ಸೌಲಭ್ಯವಿದೆ. ಆದರೆ ಇನ್ನೂ ಕೂಡ ಏಕೆ ಈ ಕಟ್ಟಡವನ್ನು ಗುತ್ತಿಗೆದಾರ ಶಿಕ್ಷಣ ಇಲಾಖೆಗೆ ನೀಡಿಲ್ಲ ಎನ್ನು ಪ್ರಶ್ನೆಯಾಗಿಯೇ ಉಳಿದಿದೆ.
ಶಾಲೆಯ ಕಟ್ಟಡ ನಿರ್ಮಾಣಕ್ಕೆ ಕೊರೆಯಿಸಲಾಗಿದ್ದ ಕೊಳವೆ ಬಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ದೊರಕಿತ್ತು. ಹೀಗಾಗಿ ಈ ನೀರನ್ನು ಅಲ್ಲಿಂದ ಓವರ್ ಹೆಡ್ ಟ್ಯಾಂಕಿಗೆ ತುಂಬಿಸಿ ಗ್ರಾಮಸ್ಥರಿಗೆ ಸರಬರಾಜು ಮಾಡಲಾಗುತ್ತಿತ್ತು. ಹೀಗೆ ನೀರನ್ನು ಮೋಟಾರ್ ಮೂಲಕ ತುಂಬಿಸಿದರ ಪರಿಣಾಮ ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಖರ್ಚಾಗಿ ಸುಮಾರು 1 ಲಕ್ಷ ಬಿಲ್ ಬಂದಿದೆ.
ಈ ಹಣವನ್ನು ಗ್ರಾಪಂ ಪಾವತಿಸಿಯೇ ಇಲ್ಲ. ಇದನ್ನು ತಾವು ಮಾಡದ ಖರ್ಚಿಗೆ ಹಣ ಪಾವತಿಸಲು ಗುತ್ತಿಗೆ ಪಡೆದ ಸಂಸ್ಥೆ ಒಪ್ಪುತ್ತಿಲ್ಲ ಇಬ್ಬರ ತಿಕ್ಕಾಟದಲ್ಲಿ ಕಟ್ಟಡ ಶಿಕ್ಷಣ ಇಲಾಖೆಗೆ ಸಿಕ್ಕಿಲ್ಲ. ಪರಿಣಾಮ ಅನೈತಿಕ ತಾಣವಾಗಿ ಮಾರ್ಪಾಡಾಗುತ್ತಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕಾಗಿದೆ.