ಚಾಮರಾಜನಗರ ಜಿಲ್ಲೆಯಲ್ಲಿ ಭಾರಿ ಮಳೆ: ಪೆಟ್ರೋಲ್ ಬಂಕ್ಗೆ ನೀರು ನುಗ್ಗಿ ಅವಾಂತರ
ಚಾಮರಾಜನಗರ, ಆಗಸ್ಟ್, 29: ಜಿಲ್ಲೆಯಲ್ಲಿ 6-7 ತಾಸು ಸತತವಾಗಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಗಣೇಶ ಹಬ್ಬದ ಸಡಗರಕ್ಕೆ ತಯಾರಿಯಲ್ಲಿದ್ದವರು ಮಳೆಯಲ್ಲಿ ಸಿಲುಕಿ ಪರದಾಡಿದ್ದಾರೆ.
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರಕ್ಕೆ ದಿಢೀರನೇ ಕೆರೆ ನೀರು ನುಗ್ಗಿ ಅಲ್ಲಿನ ಜನರು ದಿಕ್ಕು ತೋಚದಂತಾಗಿ ಪ್ರವಾಹದ ಸಂಕಟ ಅನುಭವಿಸಿದರು. ಗ್ರಾಮದಲ್ಲಿನ ಮನೆಗಳು, ಜಮೀನುಗಳು, ಅಂಗಡಿ-ಮಳಿಗೆಗಳಿಗೆ ನೀರು ನುಗ್ಗಿದ ಪರಿಣಾಮ ಅವಾಂತರವೇ ಸೃಷ್ಟಿ ಆಗಿತ್ತು. ಇನ್ನು ಮುಖ್ಯ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡಿದರು.
ಜ್ಯೋತಿಗೌಡನಪುರದ್ದು ಒಂದು ಕಥೆಯಾದರೇ, ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲದೇ ಚಾಮರಾಜನಗರ ತಾಲೂಕಿನ ಯಡಿಯೂರು, ರೈಲ್ವೇ ಬಡಾವಣೆ ಮನೆಗಳು ನೀರಿನ ಹೊಂಡಗಳಾಗಿದ್ದವು. ಕಾಲುವೆ ಒಡೆದು ಬಸಪ್ಪನದೊಡ್ಡಿ ಸೇರಿದಂತೆ ಯಳಂದೂರು ತಾಲೂಕಿನ ವಿವಿಧೆಡೆ ವರುಣ ದೊಡ್ಡ ಆಘಾತವನ್ನೇ ಸೃಷ್ಟಿಸಿದ್ದಾನೆ.

ರೈತರ ಮುಖದಲ್ಲಿ ಮಂದಹಾಸ:
ಕೆರೆ ಕೋಡಿ ಬಿದ್ದು 10 ವರ್ಷಗಳು ಕಳೆದಿದ್ದವು. ಈ ಬಾರಿ ಮಳೆಯಿಂದ ಕೆರೆಗಳ ಕೋಡಿ ಬಿದಿದ್ದು, ರೈತರಲ್ಲಿ ಮುಖದಲ್ಲಿ ಹರ್ಷವನ್ನುಂಟು ಮಾಡಿದೆ. ಚಾಮರಾಜನಗರ ತಾಲೂಕಿನ ಅಮ್ಮನಪುರ ಕೆರೆ 30 ವರ್ಷದ ಬಳಿಕ, 22 ವರ್ಷಗಳ ಬಳಿಕ ಮಾಲೆಗೆರೆ, ಹರದನಹಳ್ಳಿ ಕೆರೆ, ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ತಪ್ಪಲಿನಲ್ಲಿರುವ ಕೃಷ್ಣಯ್ಯನಕಟ್ಟೆ 20 ವರ್ಷಗಳ ಬಳಿಕ ಕೋಡಿ ಬಿದಿದ್ದು, ರೈತರ ಮುಖದಲ್ಲಿ ಮಂದಹಾಸವನ್ನು ತರಿಸಿದೆ.
ಮಳೆ ಅವಾಂತಕ್ಕೆ ನಲುಗಿದ ಚಾಮರಾಜನಗರ
ಚಾಮರಾಜನಗರ ತಾಲೂಕಿನ ಹೆಬ್ಬಸೂರು ಗ್ರಾಮದ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಸಾವಿರಾರು ತೆಂಗಿನ ಕಾಯಿಗಳು ಕೊಚ್ಚಿಕೊಂಡು ಹೀಗಿವೆ. ಮಳೆ ನೀರಿನ ರಭಸಕ್ಕೆ ತೆಂಗಿನ ಕಾಯಿಗಳು ಕೊಚ್ಚಿ ಹೋಗಿವೆ. ತೆಂಗಿನಕಾಯಿ ಕೊಚ್ಚಿಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಮರಾಜನಗರದ ಖಾಸಗಿ ಕಲ್ಯಾಣ ಮಂಟಪದ ಭೋಜನಾಲಯ ಮತ್ತು ಅಡುಗೆ ಕೋಣೆ, ಪೆಟ್ರೋಲ್ ಬಂಕ್ವೊಂದಕ್ಕೆ ನೀರು ನುಗ್ಗಿ ಅವಾಂತರವೇ ಸೃಷ್ಟಿ ಆಗಿದೆ.

ನೀರಿನಲ್ಲಿ ಕೊಚ್ಚಿಹೋದ ಭತ್ತದ ಪೈರು
ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ಇಂದು ರಜೆ ಘೋಷಿಸಿದ್ದರು. ಬೆಳಗ್ಗೆ ಶಾಲೆಗಳತ್ತ ತೆರಳಿದ್ದ ವಿದ್ಯಾರ್ಥಿಗಳು ಮಳೆ ಜೋರಾಗಿದ್ದರಿಂದ ಮತ್ತೇ ಮನೆಗೆ ಹಿಂತಿರುಗಲು ಪರದಾಡಿದರು. ಮಳೆಹಾನಿ ಪ್ರದೇಶಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಮತ್ತಿತ್ತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಳ್ಳೇಗಾಲ ತಾಲ್ಲೂಕಿನಲ್ಲಿ ಈಗ ತಾನೆ ರೈತರು ಭತ್ತ ನಾಟಿ ಮಾಡಿದ್ದರು. ಮಳೆರಾಯನ ಅಟ್ಟಹಾಸದಿಂದ ಹಲವೆಡೆ ಭತ್ತದ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕಜ್ಜಿಹುಂಡಿ ಗ್ರಾಮದಲ್ಲಿ ಹಾಕಿದ್ದ ಪೈರು ಮಳೆ ನೀರಿನಲ್ಲಿ ತೇಲಿಹೋಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಮರಾಜನಗರದಲ್ಲಿ ಸುರಿದ ಭಾರಿ ಮಳೆ ಒಂದು ಕಡೆ ಸಂತೋಷ ತರಿಸಿದರೆ, ಹಲವೆಡೆ ಅವಾಂತರಗಳನ್ನು ಸೃಷ್ಟಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.












Click it and Unblock the Notifications