ಆರದ ಕಾಡ್ಗಿಚ್ಚಿನ ಜ್ವಾಲೆ, ಬಂಡೀಪುರದಲ್ಲಿ ಠಿಕಾಣಿ ಹೂಡಿದ ಸತೀಶ್ ಜಾರಕಿಹೊಳಿ
ಚಾಮರಾಜನಗರ, ಫೆಬ್ರವರಿ 25: ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯದಲ್ಲಿ ಬೆಂಕಿಯ ಅಟ್ಟಹಾಸ ಮುಂದುವರಿದಿದ್ದು, ರಸ್ತೆ ಬದಿಯವರೆಗೂ ಬೆಂಕಿ ಆವರಿಸಿದೆ. ಇತ್ತ ಮದ್ದೂರು ವಲಯಕ್ಕೂ ಬೆಂಕಿ ಹರಡುವ ಭೀತಿಯಿದ್ದು, ಬೆಂಕಿ ನಂದಿಸಲು ಕೈಗೊಳ್ಳುವ ತುರ್ತು ಕ್ರಮಗಳ ಬಗ್ಗೆ ಅರಣ್ಯಾಧಿಕಾರಿಗಳು ಚಿಂತಿಸಿದ್ದಾರೆ.
ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ
ಬಂಡೀಪುರ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟದ ತಳ ಭಾಗದಲ್ಲಿಯೂ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಅಂಗಡಿಗಳ ಸಮೀಪವೇ ಬೆಂಕಿಯ ಜ್ವಾಲೆ ಆವರಿಸಿದೆ. ಅಂಗಡಿ ವ್ಯಾಪಾರಿಗಳು ತಮ್ಮ ಅಂಗಡಿಯನ್ನು ಉಳಿಸಿಕೊಳ್ಳಲು ನೀರು ಎರಚುತ್ತಿರುವ ದೃಶ್ಯ ಕಂಡು ಬಂದಿದೆ.
ಬಿಸಿಲಿನ ತೀವ್ರತೆಗೆ ಬೆಂಕಿ ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿದ್ದು ಅಗ್ನಿ ಜ್ವಾಲೆಯನ್ನು ನಂದಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ, ಸ್ವಯಂಸೇವಕರು ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೂ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ. ಬೆಂಕಿ ವ್ಯಾಪಿಸುವ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಫಾರಿಯನ್ನು ಬಂದ್ ಮಾಡಲಾಗಿದೆ.
ಅಗ್ನಿಶಾಮಕದಳದ ನಾಲ್ಕು ವಾಹನಗಳು ಮತ್ತು ಸಿಬ್ಬಂದಿಗಳಿಂದ ನಿರಂತರ ಬೆಂಕಿ ನಂದಿಸುವ ಕೆಲಸ ನಡೆಯುತ್ತಲೇ ಇದೆ.

ಬೆಂಕಿ ಉರಿಯುತ್ತಲೇ ಇತ್ತು
ಕಳೆದೆರಡು ದಿನಗಳಿಂದ ರಾತ್ರಿಯಿಡೀ ಗೋಪಾಲಸ್ವಾಮಿ ಬಂಡೀಪುರ ಅರಣ್ಯ ವಲಯದಲ್ಲಿ ಬೆಂಕಿ ಉರಿಯುತ್ತಲೇ ಇತ್ತು. ಗಾಳಿ ತೀವ್ರತೆ ಹೆಚ್ಚಿದ್ದರಿಂದ ಬೆಂಕಿಯ ಜ್ವಾಲಾಗ್ನಿ ಹೆಚ್ಚಾಗಿ, ತೀವ್ರತೆ ಏರಿಕೆಯಾಗುತ್ತಲೇ ಇದೆ. ಸಾವಿರಾರು ಎಕರೆ ಅರಣ್ಯ ಸಂಪೂರ್ಣ ನಾಶವಾಗಿರುವುದರಿಂದ ಕಾಡು ಪ್ರಾಣಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಂಕಿಗೆ ಆಹುತಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಅಧಿಕಾರಿಗಳೊಂದಿಗೆ ಚರ್ಚೆ
ಇನ್ನು ಬಂಡೀಪುರಕ್ಕೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಬಂಡೀಪುರ ಗೋಪಾಲಸ್ವಾಮಿ ಬೆಟ್ಟಕ್ಕೆ ಬೆಂಕಿ ಬಿದ್ದಿದ್ದು, ಬೆಂಕಿಯ ತೀವ್ರತೆ ಹೆಚ್ಚಾಗಿ ಅಪಾರ ಪ್ರಮಾಣದ ಕಾಡು ನಾಶವಾಗಿದೆ ಎಂಬ ವಿಚಾರ ತಿಳಿದು ಬಂಡೀಪುರಕ್ಕೆ ಆಗಮಿಸಿ, ಇಲ್ಲೇ ಠಿಕಾಣಿ ಹೂಡಿದ ಅರಣ್ಯ ಸಚಿವರು ಪರಿಶೀಲನೆ ಸಹ ನಡೆಸಿದ್ದಾರೆ.

ತನಿಖೆ ನಡೆಸಲು ಸೂಚನೆ
ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ಬೇಸಿಗೆ ಸಂದರ್ಭದಲ್ಲಿ ನೈಸರ್ಗಿಕವಾಗಿ ಬೆಂಕಿ ಬೀಳುತ್ತದೆ. ಆದರೆ ಕೆಲವು ಕಿಡಿಗೇಡಿಗಳು ಇಂತಹ ಕೃತ್ಯ ಎಸಗುತ್ತಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ತಿಳಿಸಿದ್ದೇನೆ ಎಂದರು.

ವಿವರ ತಿಳಿದ ನಂತರ ಮುಂದಿನ ಕ್ರಮ
ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ, ಅಗ್ನಿಶಾಮಕದಳ ಸ್ಥಾಪನೆಯಲ್ಲಿ ಬೇಜವಾಬ್ದಾರಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವಿನ ಕೊರತೆ ಹಾಗೂ ಆಧುನಿಕ ಸಲಕರಣೆಗಳ ಕೊರತೆಯಿಂದ ಅರಣ್ಯದಲ್ಲಿ ಬೆಂಕಿ ಬೀಳುತ್ತಿದೆ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಕರಣದ ಸಂಪೂರ್ಣ ವಿವರ ತಿಳಿದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.












Click it and Unblock the Notifications