ಉಪಕಾರ ಕಾಲೋನಿಯ ಅವ್ಯವಸ್ಥೆ: ಎಚ್ಚೆತ್ತುಕೊಂಡ ಜಿಲ್ಲಾಡಳಿತ
ಚಾಮರಾಜನಗರ, ಅಕ್ಟೋಬರ್ 13: ಸರ್ಕಾರದ ಸೌಲಭ್ಯದಿಂದ ವಂಚಿತರಾಗಿ ಜ್ವರ ಹಾಗೂ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದ್ದ ತಾಲೂಕಿನ ಉಪಕಾರ ಕಾಲೋನಿಗೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸೆ ನೀಡಿದ್ದಾರೆ.
ಉಪಕಾರ ಕಾಲೋನಿಯ ದುಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.

ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ ಹಾಗೂ ಉದ್ಭವ ಸಂಸ್ಥೆಯ ಮೊಬೈಲ್ ಚಿಕಿತ್ಸಾ ವಾಹನದಲ್ಲಿ ಕಾಲೋನಿಗೆ ತೆರಳಿ ಮಕ್ಕಳು, ಮಹಿಳೆಯರು ಹಾಗೂ ಪುರುಷರೂ ಸೇರಿದಂತೆ ಸುಮಾರು 150 ಜನರ ಆರೋಗ್ಯ ತಪಾಸಣೆ ನಡೆಸಿದರು. ಹಲವಾರು ದಿನಗಳಿಂದ ಕಾಯಿಲೆಬಿದ್ದು ನರಳುತ್ತಿದ್ದ ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ಶಂಕಿತ ಕಾಮಾಲೆಯಿಂದ ನರಳುತ್ತಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಿದ್ದಾರೆ.

ಗ್ರಾಮದಲ್ಲಿ ಅಶುಚಿತ್ವದಿಂದಾಗಿ ವೈರಲ್ ಜ್ವರ ಹರಡಿದ್ದು ನಿವಾಸಿಗಳು ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದ ಕಾರಣದಿಂದ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದೆ. ಜತೆಗೆ ಜನರನ್ನು ಪೌಷ್ಟಿಕಾಂಶದ ಕೊರತೆಯೂ ಕಾಡುತ್ತಿದ್ದು ಚರಂಡಿಗಳ ಹೂಳೆತ್ತಿಸಿ ಸ್ವಚ್ಛತೆ ಕಾಪಾಡುವುದು ಅಗತ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಚಿಕಿತ್ಸೆ ಪಡೆದ ಹಲವರು ಚೇತರಿಸಿಕೊಳ್ಳುತ್ತಿದ್ದಾರೆ. ಕಾಲೋನಿಯತ್ತ ಸರ್ಕಾರ ಗಮನಹರಿಸಿದ್ದೇ ಆದರೆ ಅವರು ಕೂಡ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ಬದುಕಲು ಸಾಧ್ಯವಾಗಲಿದೆ.












Click it and Unblock the Notifications