ಹನೂರು: ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿರುವ ಜೆ.ಪಿ. ನಡ್ಡಾ: ಜನರ ಸಮಸ್ಯೆಗೆ ಮುಕ್ತಿ ಸಿಗುತ್ತಾ?
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ.
ಚಾಮರಾಜನಗರ, ಮಾರ್ಚ್, 01: ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆ ಬೆನ್ನಲ್ಲೇ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಸಲು ಮುಂದಾಗಿದೆ. ರಾಜ್ಯದ ದಕ್ಷಿಣ ತುಟ್ಟ ತುದಿ ಮಲೆಮಹದೇಶ್ವರ ಬೆಟ್ಟದಿಂದ ಬುಧವಾರ (ಮಾರ್ಚ್ 01) ಯಾತ್ರೆ ಆರಂಭವಾಗಲಿದೆ.
ಪ್ರಮುಖ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರು, ಸಂಸದರು ಸಾಥ್ ಕೊಡಲಿದ್ದಾರೆ.

ಸೋಲಿಗರೊಟ್ಟಿಗೆ ಸಂವಾದ, ರೋಡ್ ಶೋ, ಸಮಾವೇಶ
ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಡ್ಡಾ ಅವರು ಯಾತ್ರೆಗೆ ಚಾಲನೆ ಕೊಡಲಿದ್ದಾರೆ. ಬಳಿಕ, ಸೋಲಿಗರು ಹಾಗೂ ಬೇಡಗಂಪಣ ಜನಾಂಗದವರೊಂದಿವೆ ಸಂವಾದ ನಡೆಯಲಿದ್ದು. ಅದಾದ ನಂತರ ಸಾಲೂರು ಮಠಕ್ಕೆ ಭೇಟಿ ಕೊಡಲಿದ್ದಾರೆ. ಮಧ್ಯಾಹ್ನ 2 ಗಂಟೆ ವೇಳೆಗೆ ರಾಜ್ಯ ನಾಯಕರು ಹನೂರಿನಲ್ಲಿ ಬಹಿರಂಗ ಸಮಾವೇಶ ನಡೆಸಲಿದ್ದಾರೆ. ಹಾಗೆಯೇ ಕೊಳ್ಳೇಗಾಲದಲ್ಲಿ ರೋಡ್ ಶೋ ಹಾಗೂ ಬಹಿರಂಗ ಸಮಾವೇಶ ನಡೆಯಲಿದೆ.
4 ತಂಡಗಳಿಂದ ಯಾತ್ರೆ ಆರಂಭ
ಚಾಮರಾಜನಗರದಲ್ಲಿ ಮಾರ್ಚ್ 2ರಂದು ನಗರದ ಆದಿಶಕ್ತಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಯಲಿದ್ದು, ಮಧ್ಯಾಹ್ನ ಗುಂಡ್ಲುಪೇಟೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ರಾಜ್ಯದಲ್ಲಿ 4 ತಂಡಗಳು ಯಾತ್ರೆ ನಡೆಸಲಿದ್ದು, ಗಡಿಜಿಲ್ಲೆಯಲ್ಲೇ ಮೊದಲ ಯಾತ್ರೆ ನಡೆಯಲಿರುವುದು ವಿಶೇಷವಾಗಿದೆ. ಇನ್ನು, ಈಗಾಗಲೇ ಸಮಾವೇಶ ಸ್ಥಳಗಳಲ್ಲಿ ಬಿಜೆಪಿ ಪಡೆ ಸಕಲ ತಯಾರಿ ನಡೆಸುತ್ತಿದೆ.
ಸಮಸ್ಯೆಗೆ ಮುಕ್ತಿ ಕೊಡ್ತಾರಾ?
ರಥಯಾತ್ರೆಗೆ ಚಾಲನೆ ಕೊಟ್ಟ ಬಳಿಕ ಬೇಡಗಂಪಣ ಸಮುದಾಯ ಹಾಗೂ ಸೋಲಿಗ ಸಮಯದಾಯದೊಟ್ಟಿಗೆ ಜೆ.ಪಿ.ನಡ್ಡಾ ಸಂವಾದ ನಡೆಸಲಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಪಾಲಾರ್, ಮೆದಗಣಾನೆ, ಪಡಿಸಲನತ್ತ, ಮೆಂದಾರೆ, ಇಂಡಿಗನತ್ತ, ತೊಳಸಿಕೆರೆ, ಕೊಕ್ಕೆಬೊರೆ, ತೋಕೆರೆ, ದೊಡ್ಡಾಣೆ ಗ್ರಾಮಗಳಲ್ಲಿ ಈಗಲೂ ವಿದ್ಯುತ್ ಸಂಪರ್ಕ ಇಲ್ಲ.

ವಿದ್ಯುತ್ ಇಲ್ಲದೆ ಜನರ ಪರದಾಟ
ಇಲ್ಲಿನ ಜನರು ಸೋಲರ್ ದೀಪಗಳನ್ನು ಆಶ್ರಯಿಸಬೇಕಿದ್ದು, ಹಾಗಾಗ್ಗೆ ಇದು ರಿಪೇರಿಗೆ ಬಂದು ತಿಂಗಳುಗಟ್ಟಲೇ ಬುಡ್ಡಿ ದೀಪಗಳನ್ನೇ ಆಶ್ರಯಿಸುವಂತಾಗಿದೆ. ಇದು ಕೂಡ ನಡ್ಡಾ ನಡೆಸುವ ಸಂವಾದದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು, ಮಲೆಮಹದೇಶ್ವರ ಬೆಟ್ಟದ ಬಹುಪಾಲು ಗ್ರಾಮಗಳಿಗೆ ರಸ್ತೆ ಸಂಪರ್ಕವಿಲ್ಲದೇ ವಾಹನಗಳು ಕೂಡ ಇಲ್ಲಿಗೆ ಬರುತ್ತಿಲ್ಲ. ಇದು ಇಲ್ಲಿನ ಜನರಿಗೆ ದೊಡ್ಡ ಸಮಸ್ಯೆಯಾಗಿದ್ದು, ಈಗಲೂ ಕೂಡ ರೋಗಿಗಳನ್ನು ಡೋಲಿ ಮೂಲಕ ಆಸ್ಪತ್ರೆಗೆ ಹೊತ್ತೊಯ್ತುವ ಪರಿಸ್ಥಿತಿ ಇದೆ.
ಇದರೊಟ್ಟಿಗೆ, ಬೇಡಗಂಪಣ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂಬ ಒತ್ತಾಯ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕೆನ್ನುವ ಪ್ರಸ್ತಾಪವನ್ನು ನಡ್ಡಾ ಅವರ ಗಮನಕ್ಕೆ ತರಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನಡೆಸುವ ಸಂವಾದ ಕಾರ್ಯಕ್ರಮದ ಮೂಲಕ ಈಗಲಾದರೂ ಮಲೆಮಹದೇಶ್ವರ ಬೆಟ್ಟದ ಜನರ ಸಮಸ್ಯೆಗೆ ಮುಕ್ತಿ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications