ಹೊಸತನದಿಂದ ಕಂಗೊಳಿಸುವ ಗುಂಡ್ಲುಪೇಟೆಯ ವಿದ್ಯಾರ್ಥಿ ನಿಲಯಗಳು
ಚಾಮರಾಜನಗರ, ಜನವರಿ 5: ಸರ್ಕಾರಿ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯಗಳೆಂದರೆ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇರುವುದಿಲ್ಲ. ಆದರೆ ಅವುಗಳ ಆವರಣದಲ್ಲಿ ಒಂದು ಸುಂದರ ಉದ್ಯಾನ, ಕೈತೋಟ ನಿರ್ಮಾಣ ಮಾಡಿ, ಕಟ್ಟಡಕ್ಕೊಂದು ಸುಂದರ ಚಿತ್ತಾರ ಬಿಡಿಸಿದರೆ ಎಷ್ಟು ಸೊಗಸಾಗಿರುತ್ತದೆ ಅಲ್ವಾ?
ಸರ್ಕಾರದ್ದಲ್ವ ಹಾಗಾಗಿ ತಮ್ಮ ಕರ್ತವ್ಯ ಏನಿದೆಯೋ ಅಷ್ಟು ಮಾಡಿಕೊಂಡು ಹೋದರೆ ಸಾಕು, ಇಲ್ಲದ ಉಸಾಬರಿ ನಮಗೆ ಏಕೆ ಎಂದು ಹೆಚ್ಚಿನವರು ಕೈಚೆಲ್ಲಿ ಕೂತು ಬಿಡುತ್ತಾರೆ. ಆದರೆ ಒಬ್ಬ ಉತ್ಸಾಹಿ ಅಧಿಕಾರಿಯಿದ್ದರೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರ ಸಹಕಾರ ಪಡೆದು ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಈಗಾಗಲೇ ಅಂಗನವಾಡಿ, ಶಾಲೆ, ಹಾಸ್ಟೆಲ್, ಆಸ್ಪತ್ರೆ, ಪೊಲೀಸ್ ಠಾಣೆ ಹೀಗೆ ಕಟ್ಟಡಗಳು ಪರಿಸರ ಸ್ನೇಹಿಯಾಗಿ ಉದ್ಯಾನ, ಗಿಡಮರಗಳಿಂದ ಕಂಗೊಳಿಸುತ್ತಾ ಗಮನ ಸೆಳೆಯುತ್ತಿವೆ.
ಹೊಸತನ ಕಂಡ ವಿದ್ಯಾರ್ಥಿ ನಿಲಯಗಳು
ಇನ್ನು ಸರ್ಕಾರಿ ಶಾಲೆಗಳ ವಿದ್ಯಾರ್ಥಿ ನಿಲಯಗಳ ಬಗ್ಗೆ ಹೇಳುವುದೇ ಬೇಡ. ಅವು ಹೇಗೆ ಇರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಇಂತಹ ವಿದ್ಯಾರ್ಥಿ ನಿಲಯಗಳ ನಡುವೆಯೂ ಗುಂಡ್ಲುಪೇಟೆ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಹೊಸತನ ನೀಡಲಾಗಿದ್ದು, ಸರ್ಕಾರಿ ವಿದ್ಯಾರ್ಥಿ ನಿಲಯಗಳೆಂದರೆ ಮೂಗು ಮುರಿಯುವವರು ಕೂಡ ಬೆರಗಾಗಿ ನೋಡುವಂತೆ ಮಾಡಿರುವುದು ವಿಶೇಷವೇ.
ಅಭಯಾರಣ್ಯಗಳಿಗೆ ಕಂಟಕವಾಗಿ ಬೆಳೆಯುತ್ತಿರುವ ಲಂಟನಾ!
ವಿದ್ಯಾರ್ಥಿನಿಲಯಗಳಲ್ಲಿ ಹಸಿರು ವಾತಾವರಣ
ಗುಂಡ್ಲುಪೇಟೆ ಪಟ್ಟಣದ ಹೊರವಲಯದ ಚಾಮರಾಜನಗರ ರಸ್ತೆಯ ಆದರ್ಶ ಶಾಲೆ ಬಳಿ ಇರುವ ದೇವರಾಜ ಅರಸು ಮೆಟ್ರಿಕ್ ಪೂರ್ವ ಹಾಗೂ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಊಟಿ ಮುಖ್ಯರಸ್ತೆ ಸೇರಿದಂತೆ ಬೇಗೂರು ಮತ್ತು ಪಟ್ಟಣದ ಬಾಲಕಿಯರ ವಿದ್ಯಾರ್ಥಿ ನಿಲಯಗಳು ಉತ್ತಮ ವಿದ್ಯಾರ್ಥಿ ನಿಲಯ ಎನಿಸಿಕೊಂಡಿವೆ. ಈ ವಿದ್ಯಾರ್ಥಿ ನಿಲಯಗಳ ಸುತ್ತಲೂ ಹಸಿರು ವಾತಾವರಣ ಕಂಗೊಳಿಸುತ್ತಿದ್ದು ಬಾಳೆ, ಪಪ್ಪಾಯಿ, ನಿಂಬೆ ದಾಳಿಂಬೆ ಬದನೆಕಾಯಿ ಸೇರಿದಂತೆ ಹಲವು ವೈವಿಧ್ಯಮಯ ತರಕಾರಿ, ತೇಗ, ತೆಂಗು ಸೇರಿದಂತೆ ಇನ್ನಿತರ ಮರಗಿಡಗಳನ್ನು ಆರೈಕೆ ಮಾಡಿ ಬೆಳೆಸಲಾಗಿದೆ. ಇದು ಮಕ್ಕಳು ಹಸಿರಿನ ನಡುವೆ ಖುಷಿಯಾಗಿ ಕಾಲ ಕಳೆಯಲು ಅವಕಾಶ ಮಾಡಿಕೊಟ್ಟಿದೆ.
ವಿಸ್ತರಣಾಧಿಕಾರಿ ಲಿಂಗರಾಜುರವರ ಕಾರ್ಯವೈಖರಿ
ಇವತ್ತು ಈ ವಿದ್ಯಾರ್ಥಿ ನಿಲಯಗಳು ಸುಂದರವಾಗಿ, ಪರಿಸರ ಸ್ನೇಹಿ ವಾತಾವರಣದಲ್ಲಿ ನೆಲೆನಿಲ್ಲಬೇಕಾದರೆ ಅದಕ್ಕೆ ಕಾರಣೀಕರ್ತರಾದವರು ಗುಂಡ್ಲುಪೇಟೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಲಿಂಗರಾಜು. ಇವರ ಉತ್ಸಾಹ, ಆಸಕ್ತಿ ಮತ್ತು ಏನಾದರೊಂದು ಮಾಡಬೇಕೆನ್ನುವ ಛಲವೇ ಇಂದು ಈ ವಿದ್ಯಾರ್ಥಿ ನಿಲಯಗಳು ಯಾವುದೇ ಖಾಸಗಿ ವಿದ್ಯಾರ್ಥಿನಿಲಯಕ್ಕಿಂತ ಕಡಿಮೆಯಿಲ್ಲದಂತೆ ಇರಲು ಸಾಧ್ಯವಾಗಿದೆ.
ಕಾಂಪೌಂಡ್ನಲ್ಲಿ ಮೂಡಿದ ಸುಂದರ ಚಿತ್ರಗಳು
ಲಿಂಗರಾಜು ಅವರು ಸರಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ಮುಟ್ಟಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಪರಿಸರದ ಅರಿವು ಮತ್ತು ಅವುಗಳನ್ನು ಉಳಿಸಿ ಬೆಳೆಸುವ ಕಾಳಜಿಯನ್ನು ಮೂಡಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿ ನಿಲಯದಲ್ಲಿ ಹಸಿರು ವಾತಾವರಣ ನಿರ್ಮಾಣವಾಗಲು ಸಾಧ್ಯವಾಗಿದೆ. ಇನ್ನು ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆಗೆ ಹೆಚ್ಜಿನ ಆದ್ಯತೆ ನೀಡಿದ್ದಾರೆ. ಸುಸಜ್ಜಿತ ಕಟ್ಟಡ, ಊಟಕ್ಕೆ ಟೇಬಲ್, ಮಲಗಲು ಕಬ್ಬಿಣದ ಮಂಚ, ಚಾಪೆ ದಿಂಬು, ಸ್ನಾನಕ್ಕೆ ಸೋಲಾರ್ ವ್ಯವಸ್ಥೆ ಮೂಲಕ ಬಿಸಿ ನೀರು ಲಭ್ಯವಾಗುತ್ತಿದೆ. ಇದರ ಜೊತೆಯಲ್ಲೇ ಹಾಸ್ಟೆಲ್ ಮುಂಭಾಗವಿರುವ ಕಾಂಪೌಂಡ್ ನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು ಚಿತ್ರಗಳು ಬಿಡಿಸಲಾಗಿದೆ. ರಾಷ್ಟ್ರಪತಿಗಳು, ಪ್ರಧಾನಮಂತ್ರಿ ಸೇರಿದಂತೆ ಇತಿಹಾಸ ನೆನಪಿಸುವ ಹಲವು ನಾಯಕರ ಭಾವಚಿತ್ರಗಳನ್ನು ಅಳವಡಿಸಲಾಗಿದೆ.
ಆಕರ್ಷಣೀಯವಾಗಿರುವ ವಿದ್ಯಾರ್ಥಿನಿಲಯಗಳು
ಹಾಗೆ ನೋಡಿದರೆ ಈ ವಿದ್ಯಾರ್ಥಿ ನಿಲಯಗಳು ಈ ಹಿಂದೆ ಈಗಿನಂತೆ ಇರಲಿಲ್ಲ. ಇಲ್ಲಿ ಹಲವು ಕೊರತೆಗಳು ತಾಂಡವವಾಡುತ್ತಿದ್ದವು. ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಯಾಗಿ ಸ್ಥಳೀಯ ಹೊನ್ನೇಗೌಡನಹಳ್ಳಿ ಗ್ರಾಮದ ಲಿಂಗರಾಜು ಅವರು ಅಧಿಕಾರ ವಹಿಸಿಕೊಂಡ ಬಳಿಕ ವಿದ್ಯಾರ್ಥಿಗಳ ಏಳಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡು ಅದರಲ್ಲಿ ಯಶಸ್ಸು ಸಾಧಿಸುವುದರೊಂದಿಗೆ ವಿದ್ಯಾರ್ಥಿ ನಿಲಯಗಳನ್ನು ಆಕರ್ಷಣಿಯವಾಗಿಸಿದ್ದಾರೆ.
Recommended Video
ಮಕ್ಕಳಿಗೆ ಪರಿಸರದ ಪಾಠ ಕಲಿಕೆ
ವಿದ್ಯಾರ್ಥಿ ನಿಲಯಗಳಲ್ಲಿ ಶೌಚಾಲಯ ನಿರ್ವಹಣೆ, ಹನಿ ನೀರಾವರಿ ಪದ್ದತಿ, ಹಾಸ್ಟೆಲ್ ಮುಂಭಾಗ ಮತ್ತು ಒಳಾಂಗಣದಲ್ಲಿ ವಿವಿಧ ರೀತಿಯಲ್ಲಿ ಹಣ್ಣಿನ ಗಿಡಗಳು ಹಾಗೂ ತರಕಾರಿಯನ್ನು ಬೆಳೆಯುತ್ತಿದ್ದು, ಇದಕ್ಕೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿ ನೀರನ್ನು ಮಿತವಾಗಿಬಳಕೆ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಕೃಷಿಯ ಬಗೆಗೂ ಅನುಭವವಾಗುವುದರೊಂದಿಗೆ ಆಸಕ್ತಿಯೂ ಬೆಳೆಯುತ್ತಿದೆ. ಜತೆಗೆ ಅಡುಗೆಗೆ ಬೇಕಾದ ತರಕಾರಿಯೂ ಸಿಗುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಇದೇ ರೀತಿ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದೇ ಆದರೆ ನಮ್ಮ ಸುತ್ತಮುತ್ತ ಇರುವ ಬಹಳಷ್ಟು ವಿದ್ಯಾರ್ಥಿ ನಿಲಯಗಳು ಅಭಿವೃದ್ಧಿಯ ಹಾದಿಯಲ್ಲಿ ಸಾಗುವುದರಲ್ಲಿ ಎರಡು ಮಾತಿಲ್ಲ.