ಚಾಮರಾಜನಗರ; ಕೋವಿಡ್ಗೆ ಹೆದರಿ ನಾಲ್ವರ ಸಾಮೂಹಿಕ ಆತ್ಮಹತ್ಯೆ
ಚಾಮರಾಜನಗರ, ಜೂನ್ 02; ಕೊರೊನಾ ಸೋಂಕು ತಗಲುವ ಭೀತಿಯಿಂದ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್. ಮೂಕಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರನ್ನು ಗ್ರಾಮದ ಮಹದೇವಪ್ಪ (46) ಮತ್ತು ಈತನ ಪತ್ನಿ ಮಂಗಳಮ್ಮ (36) ಪುತ್ರಿಯರಾದ ಜ್ಯೋತಿ (14) ಹಾಗೂ ಗೀತಾ (12) ಎಂದು ಗುರುತಿಸಲಾಗಿದೆ. ಮನೆಯ ಯಜಮಾನ ಮಹದೇವಪ್ಪನಿಗೆ ಕಳೆದ 20 ದಿನಗಳ ಹಿಂದೆ ಕೊರೊನಾ ಸೋಂಕು ದೃಢವಾಗಿತ್ತಲ್ಲದೆ, ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದರು.
ಕೊರೊನಾ ವೇಳೆ ಅನುಭವಿಸಿದ ಕಷ್ಟನಷ್ಟದಿಂದಾಗಿ ಕುಟುಂಬದ ಸದಸ್ಯರು ಖಿನ್ನತೆಗೆ ಒಳಗಾಗಿದ್ದರು. ಇದರಿಂದ ಮತ್ತೆ ಎಲ್ಲಿ ಕೊರೊನಾ ಸೋಂಕು ತಮ್ಮ ಕುಟುಂಬಕ್ಕೆ ತಗುಲಿ ಬಿಡುತ್ತದೆಯೋ ಎಂಬ ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದರು. ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟವೂ ಅವರನ್ನು ಕಾಡಿತ್ತು.

ಕೊರೊನಾ ಬಂದಿದ್ದ ವೇಳೆಯಲ್ಲಿ ಮಹದೇವಪ್ಪ ಕುಟುಂಬ ನಿರ್ವಹಣೆಗೆ ಒಂದಷ್ಟು ಸಣ್ಣ ಪುಟ್ಟ ಸಾಲವನ್ನು ಹತ್ತಿರದವರ ಬಳಿ ಮಾಡಿದ್ದರು. ಹೀಗಾಗಿ ಅದನ್ನು ತೀರಿಸುವ ಸಲುವಾಗಿ ಮಂಗಳವಾರ ಹೊಂಗನೂರು ಬ್ಯಾಂಕ್ಗೆ ತೆರಳಿ ಹತ್ತು ಸಾವಿರ ರೂಪಾಯಿಗಳನ್ನು ತಂದು ತಾನು ಸಾಲ ಪಡೆದಿದ್ದವರಿಗೆ ನೀಡಿದ್ದರು. ನಂತರ ರಾತ್ರಿ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿದೆ.
ಮೊದಲಿಗೆ ಮಹದೇವಪ್ಪ ಮನೆಯಲ್ಲಿ ಎಲ್ಲರಿಗೂ ನೇಣು ಹಾಕಿ ತಾನೂ ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮನೆಯಿಂದ ಯಾವುದೇ ರೀತಿಯ ಶಬ್ದಗಳು ಬಾರದೆ ಬಾಗಿಲು ಹಾಕಿದ್ದ ಸ್ಥಿತಿಯನ್ನು ಗಮನಿಸಿ ಸ್ಥಳಕ್ಕೆ ಹೋಗಿ ನೋಡಿದವರಿಗೆ ಸಾಮೂಹಿಕವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಾಮಸಮುದ್ರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದ್ ಭೇಟಿ ನೀಡಿ ಮಹಜರು ನಡೆಸಿ ನೇಣು ಹಾಕಿಕೊಂಡವರ ಮೃತದೇಹವನ್ನು ಕೆಳಗಿಳಿಸಿ ಮುಂದಿನ ಕ್ರಮ ಕೈಗೊಂಡರು. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications