ಚಾಮರಾಜನಗರದ ಕಾಡುಗಳ ಅಂದಕ್ಕೆ ಚಂದಕ್ಕೆ ಮನಸೋತಿದ್ದ ಉಮೇಶ್ ಕತ್ತಿ
ಚಾಮರಾಜನಗರ, ಸೆಪ್ಟೆಂಬರ್ 7: ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಹಾಗೂ ಅರಣ್ಯ ಖಾತೆ ಜವಾಬ್ದಾರಿಯನ್ನು ಹೊತ್ತಿದ್ದ ಬಿಜೆಪಿಯ ಹಿರಿಯ ನಾಯಕ ಉಮೇಶ್ ಕತ್ತಿ ಗಡಿಜಿಲ್ಲೆ ಕಾಡಿನ ಅಂದ-ಚಂದ, ರಮ್ಯತೆಗೆ ಮನಸೋತಿದ್ದರು.
ಮಂಗಳವಾರ 61 ವರ್ಷ ವಯಸ್ಸಿನ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬುಧವಾರ ಅವರ ಹುಟ್ಟೂರಾದ ಬೆಲ್ಲದ ಬಾಗೇವಾಡಿಯಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಡೆಯಲಿದೆ.

ಅರಣ್ಯ ಸಚಿವರಾಗಿದ್ದ ಕತ್ತಿ ಚಾಮರಾಜನಗರ ಜಿಲ್ಲೆಯಲ್ಲಿ ಎರಡು ಹುಲಿ ಸಂರಕ್ಷಿತ ಮತ್ತು ಎರಡು ವನ್ಯಜೀವಿಧಾಮಗಳಿದ್ದು, ಇವೆಲ್ಲದಕ್ಕೂ ಭೇಟಿ ಕೊಟ್ಟು ಸಫಾರಿ ನಡೆಸಿ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು, ಹಸಿರಿನ ಚೆಲುವನ್ನು ಕಾಣಲು ಉತ್ಸುಕರಾಗುತ್ತಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ ಬಳಿಕ ಕಾಡಿನ ಚೆಲುವು ಕಣ್ಣು ತುಂಬಿಕೊಳ್ಳಲು ಜೀಪ್ನಲ್ಲಿ ಸುತ್ತುತ್ತಿದ್ದರು. ಕಾಡು ಬಹಳ ಚೆಂದ ಇದೆ, ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಗೆ ಆದಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುಗ್ಗುವ ಅಗತ್ಯವಿದೆ ಎಂದು ಹೇಳುತ್ತಿದ್ದರು.
ಆನೆಗಳಿಗೆ ಕಾಯಿ-ಬೆಲ್ಲ ತಿನ್ನಿಸಿದ್ದ ಸಚಿವ
ಎರಡು ಮೂರು ತಿಂಗಳ ಹಿಂದೆಯಷ್ಟೇ ಬಂಡೀಪುರ ಸಮೀಪದ ಗಿರಿಜನ ಪೋಡುಗಳಿಗೆ ಭೇಟಿಕೊಟ್ಟು ರಾಂಪುರ ಆನೆ ಶಿಬಿರಕ್ಕೆ ತೆರಳಿದ್ದ ಉಮೇಶ್ ಕತ್ತಿ ಅಲ್ಲಿನ ಎಲ್ಲಾ ಆನೆಗಳಿಗೆ ಕಾಯಿ-ಬೆಲ್ಲ ತಿನ್ನಿಸಿದ್ದರು. ಆನೆಗಳು ಮಾಡುವ ಕಸರತ್ತುಗಳು, ಸಲಾಂ ಮಾಡುತ್ತಿರುವುದನ್ನು ಕಂಡು ಖುಷಿಗೊಂಡಿದ್ದರು. ಜೊತೆಗೆ, ಮತ್ತೊಂದು ಆನೆ ಶಿಬಿರ ಮಾಡುವ ಅರಣ್ಯ ಇಲಾಖೆ ಪ್ರಸ್ತಾಪಕ್ಕೂ ಧನಾತ್ಮಕವಾಗಿ ಸ್ಪಂದಿಸಿದ್ದರು.
ಬಿಳಿಗಿರಿರಂಗನ ಬೆಟ್ಟ, ಮೇಕೆದಾಟು, ಗೋಪಿನಾಥಂ, ಹೊಗೆನಕಲ್ ಹೀಗೆ ಚಾಮರಾಜನಗರದ ಎಲ್ಲಾ ಅರಣ್ಯ ಪ್ರದೇಶಗಳಿಗೆ ಭೇಟಿಕೊಟ್ಟು ಈ ಹಿಂದೆ ಅರಣ್ಯ ಸಚಿವರಾಗಿ ಜಿಲ್ಲೆಗೇ ಕಾಲಿಡದ ಸಚಿವರುಗಳ ವರ್ತನೆಗೆ ಅಪವಾದವಾಗಿ ಕಾಡಿನ ಪ್ರೇಮ ಮೆರೆದಿದ್ದರು.
ಕಳೆದ ತಿಂಗಳು ಮೇಕೆದಾಟು, ಮಲೆಮಹದೇಶ್ವರ ಬೆಟ್ಟಕ್ಕೆ ಉಮೇಶ್ ಕತ್ತಿ ಭೇಟಿ ನೀಡಿದ್ದಾಗ ' ಇಷ್ಟು ಅದ್ಭುತವಾದ ಪ್ರದೇಶಕ್ಕೆ ತನ್ನನ್ನು ತಡವಾಗಿ ಕರೆತಂದಿರಿ, ಎಷ್ಟೋ ವರ್ಷಗಳ ಮುಂಚಿತವಾಗಿ ತಾನು ಭೇಟಿ ಕೊಡಬೇಕಿತ್ತು ಎಂದು ಹೇಳಿದ್ದರು, ಅವರ ನಿಧನ ಕಾಡಿನ ರಕ್ಷಣೆಗೆ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಚಾಮರಾಜನಗರ ಅಭಿವೃದ್ಧಿಗೆ ತುಂಬಲಾರದ ನಷ್ಟ ಎಂದು ವನ್ಯಜೀವಿ ಮಂಡಲಿ ಸದಸ್ಯ ಮಲ್ಲೇಶಪ್ಪ ಅವರು ಕತ್ತಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.












Click it and Unblock the Notifications