ಜಾಹೀರಾತು; ಇಬ್ಬರು ಪರಿಷತ್ ಅಭ್ಯರ್ಥಿಗಳ ವಿರುದ್ಧ ಎಫ್ಐಆರ್
ಚಾಮರಾಜನಗರ, ಜೂನ 12: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಅನುಮತಿ ಪಡೆಯದೇ ಜಾಹೀರಾತು, ಪಕ್ಷದ ಚಿಹ್ನೆಯೊಟ್ಡಿಗೆ ಮತದಾರರ ಪಟ್ಟಿಯನ್ನು ವೆಬ್ ಸೈಟಿನಲ್ಲಿ ಅಪ್ ಲೋಡ್ ಮಾಡಿದ ಇಬ್ಬರು ಅಭ್ಯರ್ಥಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಅಭ್ಯರ್ಥಿ ಮೈ. ವಿ. ರವಿಶಂಕರ್ ಹಾಗೂ ಜೆಡಿಎಸ್ ಅಭ್ಯರ್ಥಿ ಎಚ್. ಕೆ. ರಾಮು ವಿರುದ್ಧ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಸೇನ್ ಗುಡೂರ್ ದೂರು ನೀಡಿದ ಹಿನ್ನೆಲೆಯಲ್ಲಿ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಐಪಿಸಿ 171(ಸಿ) ಅಡಿ ಪ್ರಕರಣ ದಾಖಲಾಗಿದೆ.
ಮಾಧ್ಯಮ ಸರ್ಟಿಫಿಕೇಷನ್ ಹಾಗೂ ಮಾನಿಟರಿಂಗ್ ಕಮಿಟಿಯಿಂದ ಯಾವುದೇ ಅನುಮತಿ ಪಡೆಯದೇ ಪಕ್ಷದ ಚಿಹ್ನೆಯಡಿ ಮತದಾರರ ಪಟ್ಟಿ ಅಪ್ ಲೋಡ್ ಮಾಡಿದ್ದು ಹಾಗೂ ಜಾಹೀರಾತು ನೀಡಿದ್ದರಿಂದ ಈ ಪ್ರಕರಣ ದಾಖಲಾಗಿದೆ. ಜೂನ್ 13ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದೆ.

2013ಕ್ಕೂ ಮುನ್ನ ಯಾವುದೇ ಅನುಮತಿ ಬೇಕಿರಲಿಲ್ಲ. ಆದರೆ ನೀತಿ-ನಿಯಮ 2014 ರಲ್ಲಿ ಬದಲಾಗಿದ್ದು, ಜಾಹೀರಾತು ಪ್ರಕಟಿಸಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಭೀಮಸೇನ್ ತಿಳಿಸಿದ್ದಾರೆ.
ಎಂಎಲ್ಎ, ಎಂಎಲ್ಸಿ ಸ್ಥಾನಗಳನ್ನು ಹರಾಜಿಗಿಡಲಿ; "ಚುನಾವಣೆ ಈಗ ವ್ಯಾಪಾರ ಆಗಿದೆ, ಟೆಂಡರ್ ಕರೆದು ಹರಾಜು ಕೂಗೋದು ಮಾತ್ರ ಉಳಿದಿದೆ" ಎಂದು ಎಂದು ಕನ್ನಡ ಚಳವಳಿ ವಾಟಾಳ್ ನಾಗರಾಜ್ ಚುನಾವಣೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ಹೊರಹಾಕಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಸರ್ಕಾರದ ಖಜಾನೆಗೆ ಹಣವೂ ಹರಿದು ಬರಲಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಂಎಲ್ಎ, ಎಂಎಲ್ಸಿ ಸ್ಥಾನಗಳನ್ನು ಹರಾಜು ಹಾಕಿದರೇ ಒಳಿತು. ರಾಜ್ಯಸಭೆಗಂತೂ ಚಿಂತಕರು, ಜ್ಞಾನಿಗಳು ಹೋಗಲಾಗಲ್ಲ. ಕಡಿಮೆ ಎಂದರು 50 ಕೋಟಿ ರೂ. ಬೇಕು" ಎಂದು ಗಂಭೀರ ಆರೋಪ ಮಾಡಿದರು.
"ನಿರ್ಮಲಾ ಸೀತರಾಮನ್ ಅವರಿಗೆ ಕರ್ನಾಟಕದ ದೀಕ್ಷೆ ಕೊಡಲಾಗಿದೆ. ಲೆಹರ್ ಸಿಂಗ್ ಯಾರು, ಆತನ ಹಿನ್ನೆಲೆ ಏನು ಗೊತ್ತಿಲ್ಲ, ಮೇಧಾವಿಗಳು, ಕಲಾವಿದರು, ಚಿಂತಕರು ಈಗ ರಾಜ್ಯಸಭೆಗೆ ಹೋಗಲಾಗುತ್ತಿಲ್ಲ" ಎಂದು ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
"ನಾನು ಹಿಂದೆ 60-70 ರ ದಶಕದ ಚುನಾವಣೆಗಳಲ್ಲಿ ನಿಂತಾಗ ಜನರು ಅಭ್ಯರ್ಥಿಗಳಿಗೆ ತಾಂಬೂಲ ಕೊಟ್ಟು ಕೈಲಾದಷ್ಟು ಹಣವನ್ನು ಕೊಡುತ್ತಿದ್ದರು. ಆಗೆಲ್ಲಾ, ಪಕ್ಷದ ಕಾರ್ಯಕರ್ತರು, ಮತದಾರರಿಗೆ ಉಪ್ಪಿಟ್ಟು ಕೊಡಲಾಗುತ್ತಿದ್ದು. ಈಗ ಉಪ್ಪಿಟ್ಟಿಗೆಲ್ಲಾ ಬೆಲೆಯೇ ಇಲ್ಲಾ, ಉಪ್ಪಿಟ್ಟು ಈಗ ಬರೀ ಉಪ್ಪುಪ್ಪಾಗಿದೆ ಅಷ್ಟೆ" ಎಂದು ಬೇಸರ ವ್ಯಕ್ತಪಡಿಸಿದರು.
"ಪ್ರಜ್ಞಾವಂತ ಪದವೀಧರರು ನನಗೆ ಮತ ಕೊಟ್ಟು ಮೇಲ್ಮನೆಗೆ ಕಳುಹಿಸಬೇಕಿತ್ತು. ನಾನು ಸೋತರೇ ನನಗೇನು ಬೇಸರವಿಲ್ಲ, ಜನರಿಗೇ ನಷ್ಟ, ಜನಪರವಾಗಿ ಹೋರಾಟ ಮಾಡುವ ವ್ಯಕ್ತಿಗೆ ಮಣೆ ಹಾಕದಿದ್ದರೇ ಅವರಿಗೇ ನಷ್ಟ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications