ಅರಿಶಿಣ ಹಣ ಜಮೆ ಮಾಡಲು ವಿಳಂಬ ಖಂಡಿಸಿ ಪ್ರತಿಭಟನೆ: ಟ್ಯಾಂಕ್ ಏರಿ ರೈತರಿಂದ ಆತ್ಮಹತ್ಯೆ ಎಚ್ಚರಿಕೆ
ಚಾಮರಾಜನಗರ, ಜುಲೈ 26: ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರದ ಮೂಲಕ ಖರೀದಿಸಿರುವ ಅರಿಶಿಣ ಹಣವನ್ನು ರೈತರ ಖಾತೆಗೆ ಜಮೆ ಮಾಡಲು ಅಧಿಕಾರಿಗಳು ವಿಳಂಬ ಧೋರಣೆ ತಾಳಿದ್ದಕ್ಕೆ ಕೋಪಗೊಂಡ ರೈತರು ಗುಂಡ್ಲುಪೇಟೆ ಎಪಿಎಂಸಿ ಬಳಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಹಣ ಜಮೆ ಮಾಡಲು ವಿಳಂಬವಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಅರಿಶಿಣ ಬೆಳೆಗಾರರು ಪ್ರತಿಭಟನಾ ಧರಣಿ ಮುಂದುವರೆಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳು ಬರಲೇಬೇಕು ಎಂದು ಮಾದಪ್ಪ ಹಾಗೂ ಬಸವರಾಜು ಎನ್ನುವವರು ಓವರ್ ಹೆಡ್ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಡಿಸಿ ಬರದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಖರೀದಿ ಕೇಂದ್ರದ ಮೂಲಕ ಖರೀದಿಸಿರುವ ಅರಿಶಿಣದ ಹಣವನ್ನು ಮೂರು ದಿನದೊಳಗೆ ರೈತರ ಖಾತೆಗೆ ಜಮೆ ಮಾಡದೆ 40 ದಿನದ ನಂತರ ಪ್ರತಿಭಟನೆಗೆ ಮಣಿದು ಹಣ ಹಾಕಲಾಗಿದೆ. ಈ ಮೂಲಕ ಸಹಕಾರ ಮಂಡಳಿ ಹಾಗೂ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ರೈತರು ಅರಿಶಿಣ ಖರೀದಿ ಸಂದರ್ಭದಲ್ಲೂ ಪ್ರತಿಭಟನೆ ಮಾಡಿ ಖರೀದಿಸುವಂತೆ ಮಾಡಿದ್ದಾರೆ. ನಂತರ ಅರಿಶಿಣದ ಹಣ ಖಾತೆಗೆ ಜಮೆ ಮಾಡುವಂತೆಯೂ ಸಹ ಧರಣಿ ನಡೆಸುವ ಪರಿಸ್ಥಿತಿ ಬಂದೊದಗಿದೆ. ಹೀಗಿದ್ದಲ್ಲಿ ನಮ್ಮನ್ನು ಆಳುವ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿ, ಪ್ರತಿಯೊಂದನ್ನು ಪ್ರತಿಭಟನೆ ಹಾದಿಯ ಮೂಲಕವೇ ಪಡೆಯಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಹಾಗೂ ನಮ್ಮ ಸಮಸ್ಯೆ ಆಲಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.












Click it and Unblock the Notifications