ಭರಚುಕ್ಕಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬೆಂಗಳೂರಿನ ವೈದ್ಯೆ
ಚಾಮರಾಜನಗರ, ಜುಲೈ 13: ಬೆಂಗಳೂರಿನ ವೈದ್ಯೆಯೊಬ್ಬರು ಕೊಳ್ಳೇಗಾಲ ಬಳಿಯಿರುವ ಭರಚುಕ್ಕಿ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆತ್ಮಹತ್ಯೆಗೆ ಯತ್ನಿಸಿ ಅರಣ್ಯ ಇಲಾಖೆ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಅವರನ್ನು ರಕ್ಷಿಸಲಾಗಿದೆ. ಲತಾ (ಹೆಸರು ಬದಲಿಸಲಾಗಿದೆ) ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚರ್ಮರೋಗ ತಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಬೆಂಗಳೂರಿನಿಂದ ಒಬ್ಬರೇ ಕಾರಿನಲ್ಲಿ ಕೊಳ್ಳೇಗಾಲಕ್ಕೆ ಬಂದ ಲತಾ, ಭರಚುಕ್ಕಿ ಜಲಪಾತದ ಪ್ರವೇಶ ದ್ವಾರದ ಬಳಿಯ ಚೆಕ್ ಪೋಸ್ಟ್ ಗೇಟಿಗೆ ಡಿಕ್ಕಿ ಹೊಡೆದಿದ್ದಾರೆ. ಅಷ್ಟರಲ್ಲೇ ಅಲ್ಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂದಿದ್ದಾರೆ. ಈ ವೇಳೆ ಕಾರಿನಿಂದ ಇಳಿದು, ಅರಣ್ಯ ಸಿಬ್ಬಂದಿ ಮಹಾನಂದ್ ಎಂಬುವರಿಗೆ ನಾನು ನಿದ್ರೆ ಮಾತ್ರೆ ನುಂಗಿ ಕಾರು ಚಲಾಯಿಸಿಕೊಂಡು ಬಂದಿದ್ದೇನೆ ಎಂದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ ಎಲ್ಲರ ಎದುರೇ ಕಾರಿನಿಂದ ಕೆಳಗಿಳಿದು ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕೂಗುತ್ತಾ ಜಲಪಾತದ ಕಡೆಗೆ ಓಡಿದ್ದಾರೆ.

ಅದಾಗಲೇ ನಿದ್ದೆ ಮಾತ್ರೆ ಸೇವಿಸಿದ್ದರಿಂದ ದೇಹ ಸ್ವಾಧೀನ ಸಿಗದೆ ತೂರಾಡುತ್ತಾ ಬೀಳುವಂತಿದ್ದು, ಕೂಡಲೇ ಚೆಕ್ ಪೋಸ್ಟ್ ನಲ್ಲಿದ್ದ ಅರಣ್ಯ ಸಿಬ್ಬಂದಿ ಹಿಂಬಾಲಿಸಿ, ರಕ್ಷಿಸಿದ್ದಾರೆ. ಬಳಿಕ ಅವರ ಕಾರಿನಲ್ಲೇ ಸಮೀಪದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಲತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶಿವನ ಸಮುದ್ರದ ಭರಚುಕ್ಕಿ ಮತ್ತು ಗಗನ ಚುಕ್ಕಿ ಜಲಪಾತ ವ್ಯಾಪ್ತಿಯಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುವುದು, ಬೇರೆಡೆಯಿಂದ ಕರೆತಂದು ಕೊಲೆ ಮಾಡುವಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಪೊಲೀಸರು ಸೇರಿದಂತೆ ಅರಣ್ಯ ಇಲಾಖೆ ಇಲ್ಲಿಗೆ ಆಗಮಿಸುವ ಪ್ರವಾಸಿಗರತ್ತ ನಿಗಾವಹಿಸುವ ಅಗತ್ಯವಿದೆ.












Click it and Unblock the Notifications