2.91 ಲಕ್ಷ ಹಣ ಹಿಂತಿರುಗಿಸಿದ ಭಕ್ತ; ಲಾಡು ಜೊತೆ ಹೋಗಿದ್ದ ದುಡ್ಡು ವಾಪಾಸ್!
ಚಾಮರಾಜನಗರ, ಜುಲೈ, 30: ಲಾಡು ಜೊತೆ ಹಣದ ಬ್ಯಾಗನ್ನು ಕೊಟ್ಟು ತೀವ್ರ ಚರ್ಚೆಗೆ ಕಾರಣವಾಗಿದ್ದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಪ್ರಕರಣ ಸುಖಾಂತ್ಯ ಕಂಡಿದೆ. ಸಿಬ್ಬಂದಿ ನೀಡಿದ ಹಣದ ಬ್ಯಾಗ್ ಮರಳಿ ಪ್ರಾಧಿಕಾರದ ಬೊಕ್ಕಸ ಸೇರಿದೆ.
ನರಸಿಂಹ ಎಂಬ ಬೆಂಗಳೂರು ಮೂಲದ ಭಕ್ತ ಮಾದಪ್ಪನ ಹಣವನ್ನು ಮಂಡಳಿಗೆ ಹಿಂತಿರುಗಿಸಿದ್ದಾನೆ. ಗುರುವಾರ ಭೀಮನ ಅಮಾವಾಸ್ಯೆ ಆದ್ದರಿಂದ ಭಕ್ತರ ದಂಡು ಹರಿದು ಬಂದಿತ್ತು. ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರೊಬ್ಬರು ಭಕ್ತರಿಗೆ ವಿಶೇಷ ದರ ಟಿಕೇಟ್ ನೀಡಿ ಲಾಡು ಪ್ರಸಾದದ ಜೊತೆ 2.91 ಲಕ್ಷ ಹಣವನ್ನು ನೀಡಿದ್ದರು. ಹಣ ಕಳುವಾದ ಸಂಬಂಧ ಮಲೆಮಹದೇಶ್ವರ ಬೆಟ್ಟ ಪೊಲೀಸರಿಗೆ ದೂರು ಕೊಡಲಾಗಿತ್ತು. ಜೊತೆಗೆ ನಷ್ಟವಾದ ಹಣವನ್ನು ನೌಕರನೇ ತುಂಬುವಂತೆ ಪ್ರಾಧಿಕಾರದ ಅಧಿಕಾರಿಗಳು ತಾಕೀತು ಮಾಡಿದ್ದರು.

ಕಣ್ಣು ತಪ್ಪಿನಿಂದ ಆಗಿದ್ದರಿಂದ ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ ಪೊಲೀಸರು ಕಾರ್ಯಾಚರಣೆ ನಡೆಸಿದರು. ಪೊಲೀಸರು ಸಿಸಿಟಿವಿ ಮೂಲಕ ಗುರುತು ಪತ್ತೆಹಚ್ಚಿ ಭಕ್ತನಿಂದ ಹಣ ವಾಪಸ್ ಪಡೆದಿದ್ದಾರೆ. ಸದ್ಯ ಲಾಡು ಜೊತೆ ಹೋಗಿದ್ದ ದುಡ್ಡು ವಾಪಾಸ್ ಆಗಿದೆ. ನೌಕರನ ಮೇಲೆ ಬೊಕ್ಕಸಕ್ಕೆ ನಷ್ಟವಾದ ಹಣವನ್ನು ಕಟ್ಟುವಂತೆ ತಾಕೀತು ಮಾಡಿದ್ದರು. ಇದೀಗ ಭಕ್ತ ಹಣವನ್ನು ಹಿಂತಿರುಗಿಸಿದ ಕಾರಣ ನೌಕರನಿಗೆ ಹೋದ ಜೀವ ಬಂದಂತಾಗಿದೆ. ನೂರು ರೂಪಾಯಿ ಸಿಕ್ಕರೆ ಸಾಕು ಎನ್ನುವ ಖದೀಮರ ಈ ಕಾಲದಲ್ಲೂ ಹೊಯ್ದ ಹಣವನ್ನು ಮತ್ತೆ ಹಿಂತಿರುಗಿಸಿ ಭಕ್ತರೊಬ್ಬರು ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.

ಹಣ ನಾಪತ್ತೆಯಾದಗಿನಿಂದ ಪೊಲೀಸರು ಸಿಸಿ ಕ್ಯಾಮೆರಾದ ಆಧಾರದ ಮೇಲೆ ಕಾರ್ಯಾಚರಣೆ ಶುರು ಮಾಡಿದ್ದರು. ಈಗಿನ ಕಾಲದಲ್ಲಿ ಪೊಲೀಸರ ಕೈಗೆ ಸಿಕ್ಕಂತಹ ಖದೀಮರು ಸತ್ಯವನ್ನು ಬಾಯಿ ಬಿಡುವುದು ಅಪರೂಪ. ಹಣ ಸಿಕ್ತು ಅಂದರೆ ಸಾಕು ಪರಾರಿಯಾಗಿ ಬಿಡುತ್ತಾರೆ. ಇಂತಹ ಕಾಲದಲ್ಲೂ ಇಲ್ಲೊಬ್ಬ ಭಕ್ತ ಪೊಲೀಸರ ಸಂಪರ್ಕಕ್ಕೆ ಸ್ಪಂದಿಸಿ ದೇವರ ಹಣವನ್ನು ಹಿಂದಿರುಗಿಸಿದ್ದು, ಆ ಭಕ್ತನಿಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ.












Click it and Unblock the Notifications