ಕೊಳ್ಳೇಗಾಲದ ಮಂಜುನಾಥ ನಗರದಲ್ಲಿ ನಾಯಿಗಳ ದಾಳಿಗೆ ಜಿಂಕೆ ಬಲಿ
ಕೊಳ್ಳೇಗಾಲ, ಜನವರಿ 19: ಕಾಡಿನಿಂದ ದಾರಿ ತಪ್ಪಿ ಕೊಳ್ಳೇಗಾಲ ಪಟ್ಟಣಕ್ಕೆ ಬಂದ ಜಿಂಕೆಯನ್ನು ಬೀದಿ ನಾಯಿಗಳು ದಾಳಿ ನಡೆಸಿ, ಕೊಂದಿರುವ ಘಟನೆ ನಡೆದಿದೆ. ಬುಧವಾರ ರಾತ್ರಿ ಮುದುಮಲೈ ಬೆಟ್ಟದಿಂದ ದಾರಿ ತಪ್ಪಿದ ಜಿಂಕೆ ಪಟ್ಟಣದೊಳಕ್ಕೆ ಪ್ರವೇಶಿಸಿದೆ. ಹೀಗೆ ಬಂದ ಜಿಂಕೆ ಭಯಗೊಂಡು ಮಂಜುನಾಥನಗರದ 4ನೇ ಕ್ರಾಸ್ ಗೆ ನುಗ್ಗಿದೆ.
ಈ ವೇಳೆ ಜಿಂಕೆಯನ್ನು ಕಂಡ ಬೀದಿನಾಯಿಗಳು ಅದನ್ನು ಅಟ್ಟಿಸಿಕೊಂಡು ದಾಳಿ ಮಾಡಿವೆ. ಏಕ ಕಾಲದಲ್ಲಿ 10ಕ್ಕೂ ಹೆಚ್ಚು ಬೀದಿ ನಾಯಿಗಳ ದಾಳಿಗೆ ಸಿಕ್ಕಿದ ಜಿಂಕೆ ಅವುಗಳಿಂದ ತಪ್ಪಿಸಿಕೊಂಡು ಹೋಗಲಾಗದ್ದರಿಂದ ನಾಯಿಗಳು ಮನಸ್ಸೋ ಇಚ್ಚೆ ಕಚ್ಚಿ ಗಾಯಗೊಳಿಸಿವೆ. ಬೆಳಗಿನ ಜಾವ ನಾಯಿಗಳ ಅರಚಾಟ, ಜಿಂಕೆಯ ಕಿರುಚಾಟ ಕೇಳಿ ಸಾರ್ವಜನಿಕರು ಬಂದು ನಾಯಿಗಳನ್ನು ಓಡಿಸಿದರಾದರೂ ಅಷ್ಟರಲ್ಲೇ ಜಿಂಕೆ ಸಾವನ್ನಪ್ಪಿತ್ತು.[ಹುಲಿ ಕೂಡ ಹೆದರುವ ಕಾಡು ನಾಯಿ ಅಂದ್ರೆ ಸುಮ್ನೇನಾ?]
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಗಡಿ ತಾಲೂಕು ಕೊಳ್ಳೇಗಾಲ. ಅಲ್ಲೇ ಬಂಡೀಪುರ ಸಹ ಇದೆ. ಅದನ್ನು ದಾಟಿದರೆ ತಮಿಳುನಾಡು ಆರಂಭವಾಗುತ್ತದೆ. ಆ ವ್ಯಾಪ್ತಿಯಲ್ಲಿ ಮುದುಮಲೈ ಅರಣ್ಯ ಪ್ರದೇಶ ಇದೆ. ಕಾಡಿನಲ್ಲಿ ನೀರು, ಮೇವಿಗೆ ಕೊರತೆ ಆಗಿ ವಸತಿ ಪ್ರದೇಶಕ್ಕೆ ಜಿಂಕೆ ದಾರಿ ತಪ್ಪಿ ಬಂದಿರುವ ಸಾಧ್ಯತೆ ಇದೆ.