Chikkalluru Jatra: ಇಡೀ ರಾಜ್ಯದ ಗಮನ ಸೆಳೆಯುವ ಚಿಕ್ಕಲ್ಲೂರು ಜಾತ್ರೆಗೆ ಕ್ಷಣಗಣನೆ, ಪ್ರಾಣಿ ಬಲಿ ನಿಷೇಧದ ಜಟಾಪಟಿ
ಚಾಮರಾಜನಗರ, ಜನವರಿ, 24: ರಾಜ್ಯದ ಗಮನ ಸೆಳೆಯುವ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆ ಗುರುವಾರ ರಾತ್ರಿ ಆರಂಭಗೊಳ್ಳಲಿದ್ದು, ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗಲಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಪೌರಾಣಿಕ, ಐತಿಹಾಸಿಕ ಕ್ಷೇತ್ರವಾದ ಚಿಕ್ಕಲ್ಲೂರಿನಲ್ಲಿ ಜನವರಿ 25 ರಿಂದ 29ರ ವರೆಗೆ ನಡೆಯುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಗುರುವಾರ ರಾತ್ರಿ ಚಂದ್ರಮಂಡೋಲತ್ಸವ ನೆರವೇರಿಸುವ ಮೂಲಕ ಚಾಲನೆ ದೊರೆಯಲಿದೆ.

ಜಿಲ್ಲೆ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಟೆಂಟ್ಗಳನ್ನು ಹಾಕಿ ಬಿಡಾರ ಹೂಡಲಿದ್ದು, ಒಂದೊಂದು ಸಮುದಾಯ ಒಂದೊಂದು ಸೇವೆ ಸಲ್ಲಿಸಲಿದ್ದಾರೆ. 5 ಹಗಲು 5 ರಾತ್ರಿ ನಡೆಯುವ ಈ ಜಾತ್ರೆಯಲ್ಲಿ 4ನೇ ದಿನ ಪಂಕ್ತಿ ಸೇವೆ ನಡೆಸಲಿದ್ದು, ಮಾಂಸದ ಅಡುಗೆ ಮಾಡಿ ಸಿದ್ದಪ್ಪಾಜಿ ದೇವರಿಗೆ ಎಡೆ ಇಟ್ಟು ಸಹಪಂಕ್ತಿ ಭೋಜನ ಮಾಡಲಿದ್ದಾರೆ.
ಪ್ರಾಣಿ ಬಲಿ ನಿಷೇಧ: ಪ್ರಾಣಿ ದಯಾ ಸಂಘದ ದಯಾನಂದ ಸ್ವಾಮೀಜಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ಪ್ರಾಣಿ ಬಲಿ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಿಲ್ಲಾಡಳಿತ ಮಾಡಿಕೊಂಡು ಬರುತ್ತಿದೆ. ಈಗಾಗಲೇ, ಡಿಸಿ ಶಿಲ್ಪಾನಾಗ್ ಈ ಕುರಿತು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರಾಣಿ, ಪಕ್ಷಿ ಬಲಿಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 7 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, 18 ಮಂದಿ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸುಗಮ ಸಂಚಾರ ದೃಷ್ಟಿಯಿಂದ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ ಡಿಸಿ ಆದೇಶಿಸಿದ್ದಾರೆ. ಇನ್ನು ಪ್ರಾಣಿ ಬಲಿ ನಿಷೇಧಕ್ಕೆ ಭಕ್ತರು, ಹೋರಾಟಗಾರರು ಅಪಸ್ವರ ಎತ್ತಿದ್ದು, ಚಿಕ್ಕಲ್ಲೂರು ದೇಗುಲದಲ್ಲಿ ಬಲಿಪೀಠವೇ ಇಲ್ಲ. ಆದ್ದರಿಂದ ತಾವು ಬಲಿ ನೀಡುವುದಿಲ್ಲ. ಸಹಪಂಕ್ತಿ ಭೋಜನ ಮಾತ್ರ ಮಾಡಲಿದ್ದು, ಮಾಂಸದೂಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಈಗಾಗಲೇ ಡಿಸಿಗೆ ಭಕ್ತರು ಮನವಿ ಸಲ್ಲಿಸಿದ್ದಾರೆ.
ಪವಾಡದ ಭೂಮಿ: ಲಕ್ಷಾಂತರ ಮಂದಿ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಮಲಗಿದರೂ, ಯಾವುದೇ ವಿಷಜಂತುಗಳು ಕಂಡುಬರುವುದಿಲ್ಲ ಹಾಗೂ ಕ್ಷೇತ್ರದಲ್ಲಿ ನೊಣ, ಕಾಗೆಯೂ ಕಾಣದೇ ಇರುವುದು ಈ ಕ್ಷೇತ್ರದ ಪವಾಡವೇ ಆಗಿದೆ.











Click it and Unblock the Notifications